ಲಖನೌ: ಹಿಂದೂ ವಿವಾಹ ಕಾಯ್ದೆಯ ಪ್ರಕಾರ ಮದುವೆಯ ವಿಧಿವಿಧಾನಗಳಲ್ಲಿ 'ಕನ್ಯಾದಾನ' ಮಾಡುವ ಅಗತ್ಯವಿಲ್ಲ, 'ಸಪ್ತಪದಿ' ಮಾತ್ರ ಮುಖ್ಯವಾಗಿರುತ್ತದೆ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ.
ಅಶುತೋಷ್ ಯಾದವ್ ಎನ್ನುವವರು ಸಲ್ಲಿಸಿದ್ದ ಕ್ರಿಮಿನಲ್ ಪರಿಷ್ಕರಣೆ ಅರ್ಜಿಯ ವಿಲೇವಾರಿ ಸಂದರ್ಭದಲ್ಲಿ ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿ ಸುಭಾಷ್ ವಿದ್ಯಾರ್ಥಿ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಕಾಯ್ದೆಯ ಅನ್ವಯ 'ಕನ್ಯಾದಾನ' ಪ್ರಕ್ರಿಯೆಯು ಆಗಬೇಕಿತ್ತು. ಆದರೆ ತಮ್ಮ ಮದುವೆಯಲ್ಲಿ ಇದು ಆಗಿಲ್ಲ ಎಂದು ಅಶುತೋಷ್ ಹೇಳಿದ್ದರು.
ಒಟ್ಟಾರೆ ಸಂದರ್ಭಗಳನ್ನು ಗಮನಿಸಿದರೆ, ಹಿಂದೂ ವಿವಾಹದ ಶಾಸ್ತ್ರಗಳಲ್ಲಿ ಕನ್ಯಾದಾನ ವಿಧಿವಿಧಾನವನ್ನು ಮಾಡುವ ಅಗತ್ಯವಿಲ್ಲ ಎಂದು ನ್ಯಾಯಾಲಯ ತಿಳಿಸಿದೆ.
'ಕನ್ಯಾದಾನವನ್ನು ನಡೆಸಲಾಗಿದೆಯೆ ಅಥವಾ ಇಲ್ಲವೇ ಎಂಬುದು ಈ ಪ್ರಕರಣದ ನ್ಯಾಯಯುತ ನಿರ್ಧಾರಕ್ಕೆ ಅನಿವಾರ್ಯವಲ್ಲ. ಆದ್ದರಿಂದ, ಈ ಸಂಗತಿಯನ್ನು ಸಾಬೀತುಪಡಿಸಲು ಸೆಕ್ಷನ್ 311 ಸಿಆರ್ಪಿಸಿ ಅಡಿಯಲ್ಲಿ ಸಾಕ್ಷಿಯನ್ನು ಕರೆಸಲಾಗುವುದಿಲ್ಲ' ಎಂದು ನ್ಯಾಯಾಲಯ ಹೇಳಿದೆ.