ಕಾಸರಗೋಡು: ಲೋಕಸಭಾ ಕ್ಷೇತ್ರದಲ್ಲಿ ಚುನಾವಣಾ ಚಟುವಟಿಕೆಗಳು ಭರದಿಂದ ಸಾಗುತ್ತಿದ್ದು, ಇವಿಎಂ ಕಮಿಷನಿಂಗ್ ಪೂರ್ಣಗೊಂಡಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಕೆ. ಇನ್ಬಾಶೇಖರ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಚೇಂಬರ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕಾಸರಗೋಡು ಲೋಕಸಭಾ ಕ್ಷೇತ್ರದ ಕಲ್ಲ್ಯಶ್ಶೇರಿ ಕ್ಷೇತ್ರದಲ್ಲಿ ಮನೆ ಮತದಾನಕ್ಕೆ ಕೆಲವೊಂದು ಅಡಚಣೆಯುಂಟಾಗಿದೆ. ಈ ಬಗ್ಗೆ ಕಣ್ಣೂರು ಜಿಲ್ಲಾಧಿಕಾರಿ ಜತೆ ಮಾತುಕತೆ ನಡೆಸಲಾಗಿದೆ. ಕರ್ತವ್ಯಲೋಪವೆಸಗಿರುವ ಮತಗಟ್ಟೆ ಅಧಿಕಾರಿಗಳನ್ನು ಕಣ್ಣೂರು ಜಿಲ್ಲಾಧಿಕಾರಿ ಈಗಾಗಲೇ ಅಮಾನತುಗೊಳಿಸಿದ್ದಾರೆ. ಅಲ್ಲಿಗೆ ಮತಗಟ್ಟೆ ಅಧಿಕಾರಿಗಳ ಹೊಸ ತಂಡವನ್ನು ನೇಮಿಸಲಾಗಿದೆ. ಈಗಾಗಲೇ ನಡೆದಿರುವ ಮತದಾನವನ್ನು ಅಸಿಂಧುಗೊಳಿಸಲಾಗುವುದು ಮತ್ತು ಮಾರ್ಗಸೂಚಿಗಳ ಪ್ರಕಾರ ಯಾವುದೇ ಮರುಮತದಾನ ಸಾಧ್ಯವಿಲ್ಲ. ಮತದಾನ ಮಾಡುವ ನಾಗರಿಕರ ಗೌಪ್ಯತೆಯನ್ನು ಖಾತ್ರಿಪಡಿಸಲು ಮತ್ತು ಮನೆ ಮನೆ ಮತದಾನ ಮಾಡಲು ಮತಗಟ್ಟೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.