ಬದಿಯಡ್ಕ: ಕುಂಟಿಕಾನ ಮಠ ಶ್ರೀ ಶಂಕರನಾರಾಯಣ ದೇವಸ್ಥಾನದ ಬ್ರಹ್ಮಕಲಶೋತ್ಸವವು ಭಾನುವಾರ ಬೆಳಗ್ಗೆ ಆರಂಭವಾಗಿ ಏಪ್ರಿಲ್ 30ರ ತನಕ ನಡೆಯಲಿದೆ. ಇಂದು ಬೆಳಗ್ಗೆ ಮಹಾಗಣಪತಿ ಹೋಮ, ಬೆಳಗ್ಗೆ 9 ಗಂಟೆಗೆ ಮಾಡತ್ತಡ್ಕ ಶ್ರೀ ಹರಿಹರ ಭಜನಾ ಮಂದಿರದಿಂದ ಹಸಿರುವಾಣಿ ಮೆರವಣಿಗೆಯೊಂದಿಗೆ ಆರಂಭವಾಗಲಿದೆ. ಉದ್ಯಮಿ ಗೋಪಾಲಕೃಷ್ಣ ಪೈ ಬದಿಯಡ್ಕ ಉಗ್ರಾಣ ಮುಹೂರ್ತ ನೆರವೇರಿಸಲಿದ್ದಾರೆ. ಮಧ್ಯಾಹ್ನ ಮಹಾಪೂಜೆ, ಪ್ರಸಾದ ಭೋಜನ, ಸಂಜೆ ತಂತ್ರಿವರ್ಯರ ಆಗಮನ ಪೂರ್ಣಕುಂಭ ಸ್ವಾಗತ. 6 ಗಂಟೆಗೆ ಪರಮಪೂಜ್ಯ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರ ಆಗಮನ ಪೂರ್ಣಕುಂಭ ಸ್ವಾಗತ, ಸಾಂಸ್ಕøತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ. ಬ್ರಹ್ಮಕಲಶೋತ್ಸವ ಸಮಿತಿ ಗೌರವಾಧ್ಯಕ್ಷ ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಕ್ಷೇತ್ರಾಚಾರ್ಯ ಕಿಳಿಂಗಾರು ಶಿವಶಂಕರ ಭಟ್ ಪಾಂಡೇಲು, ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ ಉಪಸ್ಥಿತರಿರುವರು. ಉದ್ಯಮಿ ಸದಾಶಿವ ಶೆಟ್ಟಿ ಕುಳೂರು ಕನ್ಯಾನ, ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಉದ್ಯಮಿ ಕೆ.ಕೆ.ಶೆಟ್ಟಿ, ಉದ್ಯಮಿ ಶಶಿಧರ ಶೆಟ್ಟಿ ಬರೋಡಾ - ಬೆಳ್ತಂಗಡಿ, ಉದ್ಯಮಿ ಕೃಷ್ಣ ಪ್ರಸಾದ ರೈ ಕುತ್ತಿಕಾರು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೇಶವಪ್ರಸಾದ ಮುಳಿಯ, ಬೆಂಗಳೂರು ಅದಮ್ಯ ಚೇತನದ ತೇಜಸ್ವಿನಿ ಅನಂತಕುಮಾರ್, ಗೋಪಾಲಕೃಷ್ಣ ಭಟ್ ಎಡನೀರು, ಮಾತೃಸಮಿತಿ ಅಧ್ಯಕ್ಷ ಜಯಂತಿ ಬಿ. ವೇದಿಕೆಯಲ್ಲಿ ಉಪಸ್ಥಿತರಿರುವರು. ಈ ಸಂದರ್ಭದಲ್ಲಿ ಕ್ಷೇತ್ರ ಪುನರ್ ನಿರ್ಮಾಣ ಕಾರ್ಯದಲ್ಲಿ ಸಹಕರಿಸಿದ ಶಿಲ್ಪಿಗಳಿಗೆ ಗೌರವಾರ್ಪಣೆ ನಡೆಯಲಿದೆ. ನಂತರ ವೇದಿಕೆಯಲ್ಲಿ ಮಾಡತ್ತಡ್ಕ ಹರಿಹರ ಬಾಲಗೋಕುಲದ ಪುಟಾಣಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.
ಏಪ್ರಿಲ್ 22 (ನಾಳೆ) ರಂದು ಬೆಳಗ್ಗೆ ಗಣಪತಿ ಹೋಮ, ಪ್ರೋಕ್ತ ಹೋಮ, ಪ್ರಾಯಶ್ಚಿತ್ತ ಹೋಮ, ಬಿಂಬಶುದ್ಧಿ, ಅಂಕುರಪೂಜೆ, ಮಹಾಪೂಜೆ. ಸಂಜೆ 6.30ರಿಂದ ಹೋಮಕಲಶಾಭಿಷೇಕ, ಅಂಕುರಪೂಜೆ, ಮಹಾಪೂಜೆ. ವಿವಿಧ ಭಜನಾ ತಂಡಗಳಿಂದ ಭಜನೆ. ಬೆಳಗ್ಗೆ 10 ಗಂಟೆಗೆ ವಿದುಷಿ ಸರಸ್ವತಿ ಕೃಷ್ಣನ್ ಮತ್ತು ಬಳಗ, ಸಾರಂಗ ಸಂಗೀತ ಶಾಲೆ ಕುಮಾರಮಂಗಲ ಬೇಳ ಇವರಿಂದ ಸಂಗೀತ ಕಚೇರಿ, ಮಧ್ಯಾಹ್ನ 2 ಗಂಟೆಯಿಂದ ಪರಮೇಶ್ವರ ಆಚಾರ್ಯ ಕಲಾಸೇವಾ ಪ್ರತಿಷ್ಠಾನ ನೀರ್ಚಾಲು ಇವರಿಂದ ವಾಮನ ಚರಿತ್ರೆ ಯಕ್ಷಗಾನ ತಾಳಮದ್ದಳೆ, ಸಂಜೆ 7 ಗಂಟೆಯಿಂದ ವೈಷ್ಣವಿ ನಾಟ್ಯಾಲಯ ಪುತ್ತೂರು ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಇವರ ಬದಿಯಡ್ಕ ಶಾಖೆಯ ವಿದ್ಯಾರ್ಥಿಗಳಿಂದ ನೃತ್ಯಾರ್ಪಣಂ ನಡೆಯಲಿದೆ.


