ಪಾಟಣ್: ಕಳೆದ ವರ್ಷ ನಡೆದ ಕೋಮು ಸಂಘರ್ಷದ ನಂತರ ಗ್ರಾಮದ ಮುಸ್ಲಿಮರೊಂದಿಗೆ ವ್ಯಾಪಾರ ಬಹಿಷ್ಕಾರಕ್ಕೆ ಕರೆ ನೀಡಿದ್ದ ಗುಂಪಿನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಗುಜರಾತ್ನ ಪಾಟಣ್ ಜಿಲ್ಲಾ ನ್ಯಾಯಾಲಯವು ಆದೇಶಿಸಿದೆ.
0
samarasasudhi
ಆಗಸ್ಟ್ 01, 2024
ಪಾಟಣ್: ಕಳೆದ ವರ್ಷ ನಡೆದ ಕೋಮು ಸಂಘರ್ಷದ ನಂತರ ಗ್ರಾಮದ ಮುಸ್ಲಿಮರೊಂದಿಗೆ ವ್ಯಾಪಾರ ಬಹಿಷ್ಕಾರಕ್ಕೆ ಕರೆ ನೀಡಿದ್ದ ಗುಂಪಿನ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಗುಜರಾತ್ನ ಪಾಟಣ್ ಜಿಲ್ಲಾ ನ್ಯಾಯಾಲಯವು ಆದೇಶಿಸಿದೆ.
ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಎಚ್.ಪಿ ಜೋಶಿ ಅವರು, 'ಅರ್ಜಿದಾರರಾದ ಮಕ್ಬುಲ್ ಹುಸೇನ್ ಶೇಖ್ ಅವರ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿ ನಿಗದಿತ ಸಮಯದ ಒಳಗಾಗಿ ತನಿಖೆ ಪೂರ್ಣಗೊಳಿಸಿ' ಎಂದು ಬಲಿಸನಾ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಅವರಿಗೆ ಸೂಚಿಸಿದ್ದಾರೆ.
'2023ರ ಜುಲೈ 16ರಂದು ನಡೆದ ಕೋಮು ಸಂಘರ್ಷವನ್ನೇ ಕೆಲವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮುಸ್ಲಿಮರೊಂದಿಗೆ ವ್ಯಾಪಾರ ವಹಿವಾಟು ನಡೆಸದಂತೆ ಮತ್ತು ಅಂಗಡಿ ಮುಂಗಟ್ಟುಗಳ ಬಾಡಿಕೆ ಒಪ್ಪಂದವನ್ನು ರದ್ದು ಮಾಡಿಕೊಳ್ಳುವಂತೆ ಜನರಿಗೆ ಕರೆ ನೀಡುತ್ತಿದ್ದಾರೆ' ಎಂದು ಆರೋಪಿಸಿ ಅರ್ಜಿದಾರರು ಕೋರ್ಟ್ ಮೆಟ್ಟಿಲೇರಿದ್ದರು.
ಇದಕ್ಕೂ ಮುನ್ನ ಪೊಲೀಸರ ಬಳಿ ದೂರು ನೀಡಿ ಅಲ್ಲಿ ಯಾವುದೇ ಕ್ರಮ ಕೈಗೊಳ್ಳದ ಕಾರಣ ನ್ಯಾಯಾಲಯದ ಮೆಟ್ಟಿಲೇರಿದ್ದೇನೆ ಎಂದೂ ಹೇಳಿದ್ದರು.
ಈ ಹಿಂದೆ ಪ್ರಕರಣದ ವಿಚಾರಣೆ ನಡೆಸಿದ್ದ ಕೋರ್ಟ್, ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿತ್ತು. ಅದರಂತೆ ಪೊಲೀಸರು ವರದಿ ಸಲ್ಲಿಸಿದ್ದರು. ಆದರೆ, ಯಾವುದೇ ಅಪರಾಧ ಕಂಡುಬಂದಿಲ್ಲ ಎಂದು ತಿಳಿಸಿದ್ದರು.
ಆದರೆ ಸಂತ್ರಸ್ತರ ವಿಡಿಯೊ ಮತ್ತು ಹೇಳಿಕೆ ಪರಿಶೀಲಿಸಿದ ಕೋರ್ಟ್, ಈ ವರದಿ ಸ್ವೀಕಾರಕ್ಕೆ ನಿರಾಕರಿಸಿ, ಎಫ್ಐಆರ್ ದಾಖಲಿಸಲು ಸೂಚಿಸಿದೆ.