ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಸಂದರ್ಭದಲ್ಲಿ ಉತ್ತರ ದೆಹಲಿಯ ಪುಲ್ ಬಂಗಶ್ ಪ್ರದೇಶದಲ್ಲಿ ನಡೆದ ಮೂವರ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಕೊಲೆ ಹಾಗೂ ಇತರ ಅಪರಾಧಗಳ ಆರೋಪ ನಿಗದಿಪಡಿಸಲು ದೆಹಲಿಯ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
0
samarasasudhi
ಆಗಸ್ಟ್ 31, 2024
ನವದೆಹಲಿ: 1984ರ ಸಿಖ್ ವಿರೋಧಿ ದಂಗೆ ಸಂದರ್ಭದಲ್ಲಿ ಉತ್ತರ ದೆಹಲಿಯ ಪುಲ್ ಬಂಗಶ್ ಪ್ರದೇಶದಲ್ಲಿ ನಡೆದ ಮೂವರ ಹತ್ಯೆ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ವಿರುದ್ಧ ಕೊಲೆ ಹಾಗೂ ಇತರ ಅಪರಾಧಗಳ ಆರೋಪ ನಿಗದಿಪಡಿಸಲು ದೆಹಲಿಯ ನ್ಯಾಯಾಲಯ ಶುಕ್ರವಾರ ಆದೇಶಿಸಿದೆ.
'ಅರೋಪಿಯನ್ನು ವಿಚಾರಣೆಗೆ ಒಳಪಡಿಸಲು ಸಾಕಷ್ಟು ಸಾಕ್ಷ್ಯಗಳಿವೆ' ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ರಾಕೇಶ್ ಸಿಯಾಲ್ ಹೇಳಿದರು.
'ಟೈಟ್ಲರ್ ಅವರು 1984ರ ನವೆಂಬರ್ 1ರಂದು ಬಿಳಿ ಬಣ್ಣದ ಅಂಬಾಸಿಡರ್ ಕಾರಿನಲ್ಲಿ ಪುಲ್ ಬಂಗಶ್ ಗುರುದ್ವಾರದ ಬಳಿ ಬಂದಿದ್ದರು. ಕಾರಿನಿಂದ ಇಳಿದ ಅವರು 'ಸಿಖ್ಖರನ್ನು ಕೊಲ್ಲಿರಿ, ಅವರು ನಮ್ಮ ತಾಯಿಯನ್ನು ಕೊಂದಿದ್ದಾರೆ' ಎಂದು ಹೇಳುವ ಮೂಲಕ ಅಲ್ಲಿದ್ದ ಗುಂಪನ್ನು ಪ್ರಚೋದಿಸಿದ್ದಾರೆ. ಬಳಿಕ ಅಲ್ಲಿ ನಡೆದ ಗಲಭೆಯಲ್ಲಿ ಮೂವರು ಕೊಲ್ಲಲ್ಪಟ್ಟರು' ಎಂದು ಸಾಕ್ಷಿಯೊಬ್ಬರು ಈ ಹಿಂದೆ ಚಾರ್ಜ್ಶೀಟ್ನಲ್ಲಿ ಹೇಳಿದ್ದರು.
ಕಾನೂನುಬಾಹಿರವಾಗಿ ಗುಂಪು ಸೇರಿದ್ದು, ಗಲಭೆಗೆ ಪ್ರಚೋದನೆ, ಎರಡು ಗುಂಪುಗಳ ನಡುವೆ ದ್ವೇಷ ಹುಟ್ಟುಹಾಕಿದ್ದು ಮತ್ತು ಅಕ್ರಮ ಪ್ರವೇಶ ಸೇರಿದಂತೆ ವಿವಿಧ ಅಪರಾಧಗಳಲ್ಲಿ ಆರೋಪ ನಿಗದಿಪಡಿಸುವಂತೆ ನ್ಯಾಯಾಲಯ ಆದೇಶಿಸಿತು.
ಅಧಿಕೃತವಾಗಿ ಆರೋಪ ನಿಗದಿಪಡಿಸಲು ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 13ಕ್ಕೆ ನಿಗದಿಪಡಿಸಿದೆ.