ನವದೆಹಲಿ: ಕಾಡ್ಗಿಚ್ಚು ಹಾಗೂ ಅರಣ್ಯದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಲು, ಅರಣ್ಯ ಸಂರಕ್ಷಣೆ ಮಾಡಲು ಅರಣ್ಯ ಇಲಾಖೆ ಬಳಿ ಅಗತ್ಯ ಸಿಬ್ಬಂದಿ, ಸಂಪನ್ಮೂಲ ಇಲ್ಲದಿದ್ದಾಗ ಸರ್ಕಾರದ ಇತರ ಇಲಾಖೆಗಳ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಆದೇಶಿಸಿದೆ.
0
samarasasudhi
ಅಕ್ಟೋಬರ್ 02, 2024
ನವದೆಹಲಿ: ಕಾಡ್ಗಿಚ್ಚು ಹಾಗೂ ಅರಣ್ಯದಲ್ಲಿ ಸಂಭವಿಸುವ ಪ್ರಾಕೃತಿಕ ವಿಕೋಪಗಳನ್ನು ತಡೆಗಟ್ಟಲು, ಅರಣ್ಯ ಸಂರಕ್ಷಣೆ ಮಾಡಲು ಅರಣ್ಯ ಇಲಾಖೆ ಬಳಿ ಅಗತ್ಯ ಸಿಬ್ಬಂದಿ, ಸಂಪನ್ಮೂಲ ಇಲ್ಲದಿದ್ದಾಗ ಸರ್ಕಾರದ ಇತರ ಇಲಾಖೆಗಳ ಸೇವೆಯನ್ನು ಬಳಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರ ಮಂಗಳವಾರ ಆದೇಶಿಸಿದೆ.
ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆ ಮಂಗಳವಾರ ಈ ಕುರಿತು ಎಲ್ಲ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ಕಾಡ್ಗಿಚ್ಚು ಸಂದರ್ಭದಲ್ಲಿ ಅರಣ್ಯ ಇಲಾಖೆಗಳ ಬಳಿ ಅಗತ್ಯ ಸೌಕರ್ಯ ಇಲ್ಲದಿದ್ದಾಗ ಏನು ಮಾಡಬೇಕು ಎಂಬುದರ ಬಗ್ಗೆ ಸಲಹೆ ಕೇಳಿ ಎನ್ಡಿಆರ್ಎಫ್ಗೆ ಉತ್ತರಾಖಂಡ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದರು. ಪತ್ರವನ್ನು ಗಂಭೀರವಾಗಿ ಪರಿಗಣಿಸಿದ್ದ ಪರಿಸರ ಇಲಾಖೆ, ಈ ಕುರಿತು ಕಳೆದ ತಿಂಗಳು ಸಭೆ ನಡೆಸಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
'ವನ್ ಅಧಿನಿಯಮ' (ಸಂರಕ್ಷಣೆ-ಸಂವರ್ಧನೆ) 1980 ರ ಪ್ರಕಾರ ಅರಣ್ಯ ವಿಕೋಪಗಳ ಸಂದರ್ಭಗಳಲ್ಲಿ ವನ್ಯಜೀವಿ, ಕಾಡಿನ ಸಂರಕ್ಷಣೆ ದೃಷ್ಟಿಯಿಂದ ತಕ್ಷಣದ ಕ್ರಮ ಅಗತ್ಯವಿದೆ. ಹೀಗಾಗಿ ಸರ್ಕಾರದ ಇತರ ಇಲಾಖೆಗಳು ಕಾಡಿನಲ್ಲಿ ಫೈರ್ ಲೈನ್ ಸ್ಥಾಪನೆ ಮತ್ತು ನಿರ್ವಹಣೆ, ಚೆಕ್ ಡ್ಯಾಮ್, ನೀರಿನ ಟ್ಯಾಂಕ್ ಹಾಗೂ ಟ್ರೆಂಚ್ಗಳನ್ನು ನಿರ್ಮಿಸಬಹುದು ಎಂದು ಹೇಳಿದೆ.
ತುರ್ತು ಸಂದರ್ಭಗಳಲ್ಲಿ ಇತರ ಇಲಾಖೆಗಳ ತಂತ್ರಜ್ಞರ ನೆರವು ನೀಡಬಹುದು ಎಂದು ಹೇಳಿದೆ. ಇದೆಲ್ಲದಕ್ಕೆ ಅರಣ್ಯ ಇಲಾಖೆಯ ಅನುಮತಿ ಪಡೆಯಬೇಕು ಎಂದು ಹೇಳಿದೆ.
ಇತರ ಇಲಾಖೆಗಳು ಕೈಗೊಳ್ಳುವ ಕಾಮಗಾರಿಗಳು, ತುರ್ತು ಕೆಲಸಗಳು ಅರಣ್ಯ ಹಾಗೂ ವನ್ಯಜೀವಿಗಳಿಗೆ ಹಾನಿ ಮಾಡುವಂತಿಲ್ಲ. ಇದಕ್ಕಾಗಿ ತಮ್ಮದೇ ಇಲಾಖೆಯ ಹಣಕಾಸು ಹಾಗೂ ಇತರ ಸಂಪನ್ಮೂಲವನ್ನು ವಿನಿಯೋಗಿಸಬೇಕು ಎಂದು ಹೇಳಿದೆ.