ನವದೆಹಲಿ: ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಮತದಾರರ ಗುರುತಿನ ಚೀಟಿ ಪರಿಶೀಲಿಸಿ ಮತದಾನ ಮಾಡದಂತೆ ತಡೆದ ಪೋಲೀಸ್ ಅಧಿಕಾರಿಗಳನ್ನು ಚುನಾವಣಾ ಆಯೋಗ ಅಮಾನತುಗೊಳಿಸಿದೆ. ಮಾರ್ಗಸೂಚಿ ಉಲ್ಲಂಘನೆ ಪೋಲೀಸರ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಆಯೋಗದ ಅಧಿಕಾರಿಗಳು ತಿಳಿಸಿದ್ದಾರೆ. ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರು 'ಎಕ್ಸ್' ನಲ್ಲಿ ಚುನಾವಣಾ ಆಯೋಗವನ್ನು ವೀಡಿಯೊ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಕಾರ್ಡ್ ಗಳನ್ನು ಪರಿಶೀಲಿಸಿದ ಎಲ್ಲಾ ಪೋಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸುವಂತೆ ಕೇಳಿದ್ದರು.
ಮುಜಾಫರ್ನಗರ ಜಿಲ್ಲೆಯ ಮೀರಾಪುರ ಕ್ಷೇತ್ರದ ಪಕ್ಷದ ಅಭ್ಯರ್ಥಿ ಸುಂಬುಲ್ ರಾಣಾ ಅವರು ಅಪ್ಲೋಡ್ ಮಾಡಿರುವ ವಿಡಿಯೊವನ್ನು ಹಂಚಿಕೊಂಡಿರುವ ಅಖಿಲೇಶ್ ಅವರು, ಪೋಲೀಸ್ ಸಿಬ್ಬಂದಿಯು ಜನರು ಮತದಾನ ಮಾಡುವುದನ್ನು ತಡೆಯಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
ಕ್ಷೇತ್ರದ ನಯಾಗಾಂವ್, ನಾಗ್ಲಾ ಬುಜುಕ್ ಸೇರಿದಂತೆ ಇತರೆಡೆ ಈ ರೀತಿಯ ದೂರುಗಳು ಬರುತ್ತಿವೆ ಎಂದು ರಾಣಾ ದೂರಿದ್ದಾರೆ.
ಆಯೋಗದ ಕಟ್ಟು ನಿಟ್ಟಿನ ಸೂಚನೆ:
ಸಮಾಜವಾದಿ ಪಕ್ಷದ ಮುಖ್ಯಸ್ಥರ ದೂರನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಅವರು, ಉತ್ತರಪ್ರದೇಶದ ಎಲ್ಲ ಜಿಲ್ಲಾ ಚುನಾವಣಾ ಅಧಿಕಾರಿಗಳಿಗೆ ಮುಕ್ತ ಮತ್ತು 'ನ್ಯಾಯಸಮ್ಮತ ಮತದಾನ ಪ್ರಕ್ರಿಯೆ ನಡೆಯುವಂತೆ ನೋಡಿಕೊಳ್ಳಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ
'ಯಾವುದೇ ಅರ್ಹ ಮತದಾರ ಮತದಾನದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿರುವ ಅವರು, ಪೂರ್ವಗ್ರಹ ಪೀಡಿತರಾಗಿ ನಡೆದುಕೊಳ್ಳುವುದನ್ನು ಸಹಿಸಲಾಗದು ಎಂದು ಎಚ್ಚರಿಸಿದ್ದಾರೆ.
ಚುನಾವಣಾ ಆಯೋಗದ ನಿರ್ದೇಶನದ ಮೇರೆಗೆ ಜಿಲ್ಲಾ ಚುನಾವಣಾ ಅಧಿಕಾರಿ ಮತ್ತು ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ದೂರನ್ನು ಪರಿಶೀಲಿಸಿ ಸಂಬಂಧಿಸಿದ ಪೋಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿದ್ದಾರೆ.
ಆಯೋಗದ ಮಧ್ಯ ಪ್ರವೇಶಕ್ಕೆ ಬಿಜೆಪಿ ಕರೆ:
ಉತ್ತರ ಪ್ರದೇಶದ ಉಪಚುನಾವಣೆಯಲ್ಲಿ ಬುರ್ಖಾ ಧರಿಸಿದ ಕೆಲ ಮಹಿಳಾ ಮತದಾರರ ಮುಖಗಳು ಅವರ ಗುರುತಿನ ಚೀಟಿಗಳೊಂದಿಗೆ ಹೊಂದಿಕೆ ಆಗುತ್ತಿಲ್ಲ. ಹೀಗಾಗಿ ಚುನಾವಣಾ ಆಯೋಗ ಮಧ್ಯ ಪ್ರವೇಶಿಸಿ ಈ ನಿಟ್ಟಿನಲ್ಲಿ ಸಮಗ್ರವಾಗಿ ಪರಿಶೀಲಿಸಲಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಬಿಜೆಪಿಯು ಆಯೋಗ ಮತ್ತು ಜಿಲ್ಲಾಡಳಿತವನ್ನು ಆಗ್ರಹಿಸಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ 'ಯಾದವ್ ಅವರು ಸೋಲುವ ಭೀತಿಯಲ್ಲಿದ್ದಾರೆ ಎಂದು ಬಿಜೆಪಿ ವಕ್ತಾರ ಮನೀಶ್ ಶುಕ್ಲಾ ತಿರುಗೇಟು ನೀಡಿದ್ದಾರೆ.
ಉಪ ಚುನಾವಣೆಯಲ್ಲಿ ಅಕ್ರಮ ನಿಯಮ ಉಲ್ಲಂಘನೆ ಮತ್ತು ಗೂಂಡಾಗಿರಿ ಚಟುವಟಿಕೆಗಳು ನಡೆದಿವೆ ಎಂದು ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ವಿರೋಧ ಪಕ್ಷವಾದ ಸಮಾಜವಾದಿ ಪಕ್ಷವು ಪರಸ್ಪರರ ವಿರುದ್ಧ ಆರೋಪ ಮಾಡಿವೆ. ಬಿಜೆಪಿ ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ಮತ್ತು ನಿಯಮಗಳ ಉಲ್ಲಂಘನೆ ಮಾಡಿದೆ ಎಂದು ಎಸ್ಪಿ ಆರೋಪಿಸಿದ್ದರೆ ಎಸ್.ಪಿಯು ಗೂಂಡಾಗಿರಿ ಚಟುವಟಿಕೆ ಮತ್ತು ಬುರ್ಖಾ ಬಳಸಿ ನಕಲಿ ಮತದಾನ ನಡೆಸುವಲ್ಲಿ ತೊಡಗಿದೆ ಎಂದು ಬಿಜೆಪಿ ಪ್ರತ್ಯಾರೋಪ ಮಾಡಿದೆ.




.png)

