ಲಖನೌ: ಗ್ಯಾಂಗ್ಸ್ಟರ್ ಸುಂದರ್ ಭಾಠಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ಅನಿಲ್ ಕುಮಾರ್ ಅವರಿದ್ದ ಕಾರನ್ನು ಕೆಲವು ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದಿರುವ ಘಟನೆ ಇತ್ತೀಚೆಗೆ ನಡೆದಿದ್ದು, ಈ ಸಂಬಂಧ ಅನಿಲ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
0
samarasasudhi
ನವೆಂಬರ್ 12, 2024
ಲಖನೌ: ಗ್ಯಾಂಗ್ಸ್ಟರ್ ಸುಂದರ್ ಭಾಠಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ನ್ಯಾಯಾಧೀಶ ಅನಿಲ್ ಕುಮಾರ್ ಅವರಿದ್ದ ಕಾರನ್ನು ಕೆಲವು ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದಿರುವ ಘಟನೆ ಇತ್ತೀಚೆಗೆ ನಡೆದಿದ್ದು, ಈ ಸಂಬಂಧ ಅನಿಲ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
'15 ದಿನಗಳ ಹಿಂದೆ ನಾನು ನೊಯಿಡಾಗೆ ತೆರಳುತ್ತಿದ್ದೆ. ಈ ವೇಳೆ ನನ್ನ ಕಾರನ್ನು ಐವರು ದುಷ್ಕರ್ಮಿಗಳು ಹಿಂಬಾಲಿಸಿಕೊಂಡು ಬಂದರು. ತಮ್ಮ ಬಳಿ ಇದ್ದ ಶಸ್ತ್ರಾಸ್ತ್ರಗಳನ್ನು ಝಳಪಿಸಿದರು. ಅಲಿಗಢ ಜಿಲ್ಲೆಯ ಪ್ರದೇಶವೊಂದರಲ್ಲಿ ನನ್ನ ಕಾರನ್ನು ಅಡ್ಡಗಟ್ಟಲು ಯತ್ನಿಸಿದರು. ಇವರು ಸುಂದರ್ ಗ್ಯಾಂಗ್ ಸದಸ್ಯರೇ ಇರಬೇಕು ಎಂಬ ಶಂಕೆ ಇದೆ' ಎಂದು ಅನಿಲ್ ಕುಮಾರ್ ಅವರು ತಮ್ಮ ದೂರಿನಲ್ಲಿ ಹೇಳಿದ್ದಾರೆ.
ದುಷ್ಕರ್ಮಿಗಳಿಂದ ಹೇಗೊ ತಪ್ಪಿಸಿಕೊಂಡ ಅನಿಲ್ ಕುಮಾರ್ ಅವರು ಹತ್ತಿರದ ಸೋಫಾ ಪೊಲೀಸ್ ಠಾಣೆಯೊಳಕ್ಕೆ ಹೋಗಿ ಕಾರನ್ನು ನಿಲ್ಲಿಸಿದ್ದಾರೆ. ಇದನ್ನು ನೋಡುತ್ತಿದ್ದಂತೆಯೇ ದುಷ್ಕರ್ಮಿಗಳು ವಾಪಸು ಓಡಿ ಹೋಗಿದ್ದಾರೆ.
ಸಮಾಜವಾದಿ ಪಕ್ಷದ ಹರಿಂದರ್ ನಗರ್ ಅವರನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ಸುಂದರ್ ಭಾಠಿ ಹಾಗೂ ಆತನ ಇತರ ಗ್ಯಾಂಗ್ ಸದಸ್ಯರಿಗೆ 2021ರಲ್ಲಿ ಅನಿಲ್ ಕುಮಾರ್ ಅವರು ಜೀವಾವಧಿ ಶಿಕ್ಷೆ ವಿಧಿಸಿದ್ದರು. ಸುಂದರ್ ಮೇಲೆ ಅತ್ಯಂತ ಹೇಯ ಅಪರಾಧ ಪ್ರಕರಣಗಳಿವೆ. ಇತ್ತೀಚೆಗಷ್ಟೇ ಸುಂದರ್ಗೆ ಉತ್ತರ ಪ್ರದೇಶ ಹೈಕೋರ್ಟ್ ಜಾಮೀನು ನೀಡಿತ್ತು.