ರಾಯಪುರ: ಛತ್ತೀಸಗಢ ರಾಜ್ಯದಲ್ಲಿ ನಕ್ಸಲ್ ಪಿಡುಗನ್ನು 2026ರ ಮಾ. 31ರೊಳಗಾಗಿ ನಿರ್ಮೂಲನೆ ಮಾಡಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬದ್ಧವಾಗಿವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭಾನುವಾರ ಹೇಳಿದರು.
ರಾಯಪುರದ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದ ರಾಷ್ಟ್ರಪತಿಯವರ ಬಣ್ಣಗಳ ಪ್ರಶಸ್ತಿ (ಸೇನೆ ತುಕಡಿ ಅಥವಾ ಪೊಲೀಸರಿಗೆ ನೀಡುವ ಗೌರವ) ಪ್ರದಾನ ಸಮಾರಂಭದಲ್ಲಿ ಮಾತನಾಡಿದ ಅವರು, ಛತ್ತೀಸಗಢವು ನಕ್ಸಲ್ ಮುಕ್ತವಾದರೆ ಇಡೀ ದೇಶ ನಕ್ಸಲ್ ಹಾವಳಿಯಿಂದ ಮುಕ್ತವಾದಂತಾಗುತ್ತದೆ ಎಂದು ಹೇಳಿದರು.
ಕಳೆದ ಒಂದು ವರ್ಷದಲ್ಲಿ ಛತ್ತೀಸಗಢ ಪೊಲೀಸರು ನಕ್ಸಲರ ವಿರುದ್ಧದ ಹೋರಾಟದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಛತ್ತೀಸಗಢ ಸರ್ಕಾರವು ನಕ್ಸಲೀಯರಿಗೆ ಕಲ್ಪಿಸುತ್ತಿರುವ ಪುನರ್ವಸತಿ ಕ್ರಮ ಶ್ಲಾಘನೀಯ ಎಂದ ಅವರು, ಹಿಂಸಾಚಾರ ಬಿಟ್ಟು ಮುಖ್ಯವಾಹಿನಿಗೆ ಬರುವಂತೆ ನಕ್ಸಲರಿಗೆ ಮನವಿ ಮಾಡಿದರು.
ರಾಜ್ಯದಲ್ಲಿ ಕಳೆದ ಒಂದು ವರ್ಷದಲ್ಲಿ 287 ನಕ್ಸಲರು ಶಸ್ತ್ರಾಸ್ತ್ರ ತ್ಯಜಿಸಿದ್ದು, 1,000 ಮಂದಿ ಬಂಧಿತರಾಗಿದ್ದಾರೆ. 837 ಮಂದಿ ಶರಣಾಗಿದ್ದಾರೆ. ನಕ್ಸಲರ 14 ನಾಯಕರು ಶಸ್ತ್ರಾಸ್ತ್ರ ತ್ಯಜಿಸಿದ್ದಾರೆ. ಇದು ನಕ್ಸಲರ ವಿರುದ್ಧದ ಹೋರಾಟಕ್ಕೆ ಸಾಕ್ಷಿ ಎಂದು ಹೇಳಿದರು.
ನಾಲ್ಕು ದಶಕಗಳಲ್ಲಿ ಮೊದಲ ಬಾರಿಗೆ ನಾಗರಿಕರು ಹಾಗೂ ಭದ್ರತಾ ಪಡೆಗಳ ಸಾವು ನೂರಕ್ಕಿಂತ ಕಡಿಮೆ ಪ್ರಮಾಣಕ್ಕೆ ಇಳಿಕೆಯಾಗಿದೆ. ಮೋದಿ ಅವರ ನಾಯಕತ್ವದಲ್ಲಿ 10 ವರ್ಷದಲ್ಲಿ ದೇಶದಾದ್ಯಂತ ನಕ್ಸಲ್ ವಾದಕ್ಕೆ ಕಡಿವಾಣ ಹಾಕಲಾಗಿದೆ ಎಂದು ಹೇಳಿದರು.
ಇದೇ ವೇಳೆ ಶಾ ಅವರು ದೇಶದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪುಣ್ಯತಿಥಿ ಅಂಗವಾಗಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. 356ಕ್ಕೂ ಹೆಚ್ಚು ರಾಜಪ್ರಭುತ್ವದ ರಾಜ್ಯಗಳಾಗಿದ್ದ ಈ ದೇಶ ಒಂದಾಗಲು ಸಾಧ್ಯವಾಗುವುದಿಲ್ಲ ಎಂದು ಜನರು ಭಾವಿಸಿದ್ದರು. ಆದರೆ, ಸರ್ದಾರ್ ಅವರ ಅದಮ್ಯ ಧೈರ್ಯ ಈ ದೇಶವನ್ನು ಒಂದುಗೂಡಿಸಿತು ಎಂದರು.
ಮೋದಿ ಅವರ ದೃಢ ಸಂಕಲ್ಪವು ಸರ್ದಾರ್ ಅವರ ಅಪೂರ್ಣ ಕೆಲಸವನ್ನು ಪೂರ್ಣಗೊಳಿಸಿದೆ. 370ನೇ ವಿಧಿಯನ್ನು ರದ್ದುಗೊಳಿಸುವ ಮೂಲಕ ಕಾಶ್ಮೀರವನ್ನು ಭಾರತದೊಂದಿಗೆ ಏಕೀಕರಿಸಲಾಗಿದೆ ಎಂದು ಶಾ ಹೇಳಿದರು.




.jpg)

