ಕಾಸರಗೋಡು: ಕೇರಳ ಸಹಕಾರಿ ನೌಕರರ ಸಂಘ (ಕೆಸಿಇಯು) ರಾಜ್ಯ ಕೌನ್ಸಿಲ್ ಸಭೆ ಡಿ. 14ರಂದು ಚೆರ್ಕಳ ಐ ಮ್ಯಾಕ್ಸ್ ಆಡಿಟೋರಿಯಂನ 'ಪಿ.ರಾಘವನ್ ನಗರ'ದಲ್ಲಿ ನಡೆಯಿತು.
ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಳಮರ ಕರೀಂ ಸಮಾವೇಶ ಉದ್ಘಾಟಿಸಿದರು. ಈ ಸಂದರ್ಭ ಮಾತನಾಡಿದ ಅವರು, ಕೇರಳದಲ್ಲಿ ಸಹಕಾರ ಚಳುವಳಿಯು ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದ್ದು, ಒಕ್ಕೂಟಗಳು ದೇಶಕ್ಕೆ ಮಾದರಿಯಾಗಿದೆ. ಒಕ್ಕೂಟ ವ್ಯವಸ್ಥೆ ಉಲ್ಲಂಘಿಸಿ ಕೇಂದ್ರ ಸರ್ಕಾರ ಬಹು ರಾಜ್ಯ ಸಹಕಾರಿ ಸಂಸ್ಥೆಗಳಿಗೆ ಉತ್ತೇಜನ ನೀಡುವ ಮೂಲಕ ಕೇರಳದ ಸಹಕಾರಿ ಕ್ಷೇತ್ರವನ್ನು ದಮನಿಸಲು ಯತ್ನಿಸುತ್ತಿದೆ. ಈ ಹಿನ್ನೆಲೆಯಲ್ಲಿ ಸಹಕಾರಿ ಕ್ಷೇತ್ರದ ಭವಿಷ್ಯವನ್ನು ಭದ್ರಗೊಳಿಸಲು ಪರಿಷತ್ತು ಮಹತ್ವದ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು. ಕೆಸಿಇಯು ರಾಜ್ಯಾಧ್ಯಕ್ಷೆ ಪಿ.ಎಂ.ವಹೀದಾ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಎನ್.ಕೆ.ರಾಮಚಂದ್ರನ್ ವರದಿ ಮಂಡಿಸಿದರು. 41,969 ಸದಸ್ಯಬಲ ಹೊಂದಿರುವ ರಾಜ್ಯ ಕೌನ್ಸಿಲ್298ಮಂದಿ ಚುನಾಯಿತ ಪ್ರತಿನಿಧಿಗಳು ಪಾಲ್ಗೊಂಡಿದ್ದರು.
ಕೆಸಿಇಯು ರಾಜ್ಯ ಉಪಾಧ್ಯಕ್ಷೆ ಪಿ.ಜಾನಕಿ, ಸಂಘಟನಾ ಸಮಿತಿ ಉಪಾಧ್ಯಕ್ಷ ಟಿ.ಎಂ.ಎ.ಕರೀಂ, ಸಂಚಾಲಕ ಕೆ.ವಿ.ವಿಶ್ವನಾಥನ್, ಬಿ.ಮೋಹನನ್, ಕೆ.ವಿ.ರಮೇಶನ್ ಮೊದಲಾದವರು ಉಪಸ್ಥಿತರಿದ್ದರು.





