ಕಾಸರಗೊಡು : ಶುದ್ಧಾಭಿರುಚಿಯ ಪ್ರೇಕ್ಷಕರನ್ನು ಬಯಸುತ್ತಿರುವ ಯಕ್ಷಗಾನ ಕೂಟಗಳು ಇಂದು ಕಣ್ಮರೆಯಾಗುತ್ತಿರುವುದು ವಿಷಾದನೀಯ ಎಂಬುದಾಗಿ ಪತ್ರಕರ್ತ, ಕಲಾಚಿಂತಕ ಎಂ.ನಾ. ಚಂಬಲ್ತಿಮಾರ್ ಕುಂಬಳೆ ತಿಳಿಸಿದರು. ಅವರು ಕಟಪಾಡಿ ಪಡುಕುತ್ಯಾರಿನಲ್ಲಿರುವ ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠದಲ್ಲಿ ಆರಂಭಗೊಂಡ 4ನೇ ವರ್ಷದ ಯಕ್ಷಗಾನ ತಾಳಮದ್ದಲೆ ಸಪ್ತಾಹದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಹವ್ಯಾಸಿ ತಾಳಮದ್ದಳೆ ಸಂಘಗಳು ಮತ್ತು ವಾರದ ಕೂಟಗಳೆಲ್ಲ ಗ್ರಾಮಗಳಿಂದ ಕಣ್ಮರೆಯಾಗುತ್ತಿದ್ದು, ಆಧುನಿಕ ಕಾಲದಲ್ಲಿ ಹೊಸ ಸಂಘಗಳು ಹುಟ್ಟುವುದಿಲ್ಲ ಮತ್ತು ಭರವಸೆಯ ಹೊಸ ಕಲಾವಿದರು ಉದಿಸುತ್ತಿಲ್ಲ. ಇದು ವರ್ತಮಾನದ ತಲ್ಲಣ ಮತ್ತು ಕಾಡುವ ಸಮಸ್ಯೆಯಾಗಿದೆ ಎಂದು ತಿಳಿಸಿದರು.
ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ್ವರ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಸಪ್ತಾಹ ಉದ್ಘಾಟಿಸಿ ಆಶೀರ್ವಚನ ನೀಡಿ, ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸುವ ಹಾಗೆಯೇ ಕಲಾವಿದರನ್ನು ಗುರುತಿಸಿ ಗೌರವಿಸುವ ಯಕ್ಷ ಸೇವೆಯನ್ನು ಮಹಾಸಂಸ್ಥಾನದಿಂದ ನಡೆಸಲಾಗುತ್ತಿದೆ. ಕಲೆ ಮನುಷ್ಯರನ್ನು ಮಾಧವನನ್ನಾಗಿ ರೂಪಿಸುವ ಮಹತ್ವದ ಮಾಧ್ಯಮವಾಗಿದೆ ಎಂದು ತಿಳಿಸಿದರು.
ಶ್ರೀಧರ ಜೆ.ಆಚಾರ್ಯ ಕಟಪಾಡಿ, ಗಣೇಶ ಆಚಾರ್ಯ ಕೆಮ್ಮಣ್ಣು, ವಕೀಲ ಕೆಎಂ ಗಂಗಾಧರ ಆಚಾರ್ಯ ಕೊಂಡೆವೂರು, ಉಮೇಶ್ ಸಾಂತೂರು, ರತ್ನಾಕರ ಶೆಟ್ಟಿ ಸಾಂತೂರು, ಮನೋಹರ್ ಕುಂದರ್ ಎರ್ಮಾಳ್, ಚಂದ್ರಶೇಖರ ಕೊಡಿಪಾಡಿ, ಜಮಾಲುದ್ದೀನ್ ಕಾಪು, ಹರೀಶ್ ಆಚಾರ್ಯ ಕಾಂಜರ ಕಟ್ಟೆ, ಯೋಗೀಶ್ ಆಚಾರ್ಯ ಕೊಯಂಬತ್ತೂರು, ಬಂಬ್ರಾಣ ಯಜ್ಞೇಶ ಆಚಾರ್ಯ, ದಯಾನಂದ ಕೆ.ಳಾರ್ಕಳಬೆಟ್ಟು, ರತ್ನಾಕರ ಆಚಾರ್ಯ ಪಡುಕುತ್ಯಾರು ಉಪಸ್ಥಿತರಿದ್ದರು.
ಶ್ರೀ ಮಠದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಎಂ.ಬಿ ಆಚಾರ್ ಕಂಬಾರ್ ಅಧ್ಯಕ್ಷತೆ ವಹಿಸಿದ್ದರು. ಯಕ್ಷಗಾನ ಕಲಾ ಪೆÇೀಷಕರಾದ ಗಣೇಶ್ ಕುಮಾರ್ ಮುಂಬೈ, ಬಿ ಎಂ ಯದುನಂದನ ಆಚಾರ್ಯ ಬಂಗ್ರ ಮಂಜೇಶ್ವರ ಶುಭಾಶಂಸನೆ ನಡೆಸಿದರು. ಸಂಚಾಲಕರಾದ ಜಿ ಟಿ ಆಚಾರ್ಯ ಮುಂಬೈ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ಜನಾರ್ದನ ಆಚಾರ್ಯ ಕನ್ಯಾನ ವಂದಿಸಿದರು. ಕಾರ್ಯಕ್ರಮದ ಅಂಗವಾಗಿ"ಅಂಗದ ಸಂಧಾನ " ತಾಳಮದ್ದಲೆ ಪ್ರಸಂಗ ನಡೆಯಿತು.


