ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆ ಸನಿಹದಲ್ಲಿದ್ದು, ಶುಕ್ರವಾರ ಬಿಜೆಪಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಪ್ರಣಾಳಿಕೆಯ ಬಿಡುಗಡೆ ಮಾಡಿದ್ದು, ಮಹಿಳೆಯರಿಗೆ ಪ್ರತಿ ತಿಂಗಳು ₹2,500 ನೆರವು, ₹500ಗೆ ಎಲ್ಪಿಜಿ ಸಿಲಿಂಡರ್ ಹಾಗೂ ಹಿರಿಯ ನಾಗರಿಕರಿಗೆ ಮಾಸಿಕ ₹2,500 ನೆರವು ನೀಡುವುದಾಗಿ ಘೋಷಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮೊದಲ ಪ್ರಣಾಳಿಕೆ (ಸಂಕಲ್ಪ ಪತ್ರ) ಬಿಡುಗಡೆಗೊಳಿಸಿ, ಬಿಜೆಪಿಯ ಪ್ರಣಾಳಿಕೆ ದೆಹಲಿಯ ಅಭಿವೃದ್ಧಿಗೆ ಅಡಿಪಾಯ ಎಂದು ಬಣ್ಣಿಸಿದರು.
ಪಕ್ಷ ಅಧಿಕಾರಕ್ಕೆ ಬಂದರೆ, ಮೊದಲ ಸಂಪುಟ ಸಭೆಯಲ್ಲಿ 'ಆಯುಷ್ಮಾನ್ ಭಾರತ್' ಯೋಜನೆ ಜಾರಿಗೆ ಒಪ್ಪಿಗೆ ನೀಡಲಾಗುವುದು ಜತೆಗೆ ಹೆಚ್ಚುವರಿಯಾಗಿ ಆರೋಗ್ಯ ರಕ್ಷಣೆಗಾಗಿ ₹5 ಲಕ್ಷ ನೀಡಲಾಗುವುದು ಎಂದರು.
ಬಡ ಮಹಿಳೆಯರಿಗೆ ₹500ಗೆ ಎಲ್ಪಿಜಿ ಸಿಲಿಂಡರ್ ನೀಡಲಾಗುವುದು, ಹೋಳಿ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಒಂದು ಉಚಿತ ಸಿಲಿಂಡರ್ ನೀಡಲಾಗುವುದು. ಇನ್ನು, 60-70ರ ವಯೋಮಾನದವರಿಗೆ ಮಾಸಿಕ ₹2,500 ಹಾಗೂ 70 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ತಿಂಗಳಿಗೆ ₹3,000 ನೆರವು ನೀಡಲಾಗುವುದು' ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ.
ಇದರ ಜತೆಗೆ ಬಿಜೆಪಿ ಅಧಿಕಾರಕ್ಕೆ ಬಂದರೆ ದೆಹಲಿಯಲ್ಲಿ ಈಗಿರುವ ಎಲ್ಲಾ ಸಮಾಜ ಕಲ್ಯಾಣ ಯೋಜನೆಗಳು ಮುಂದುವರಿಯಲಿವೆ ಎಂದು ಭರವಸೆ ನೀಡಿದ್ದಾರೆ.





