ಕಾಸರಗೋಡು : ಶ್ರದ್ಧೆ ಹಾಗೂ ಕಠಿಣ ಪರಿಶ್ರಮದಿಂದ ಮಾತ್ರ ಸಂಗೀತವನ್ನು ಮನನ ಮಾಡಿಕೊಳ್ಳಲು ಸಾಧ್ಯ ಎಂಬುದಾಗಿ ಖ್ಯಾತ ವೈದ್ಯ ಮತ್ತು ಮೃದಂಗವಾದಕ ಡಾ. ಶಂಕರರಾಜ್ ಆಲಂಪಾಡಿ ತಿಳಿಸಿದ್ದಾರೆ.
ಅವರು ಕಾಸರಗೋಡಿನ ಖ್ಯಾತ ಸಾಂಸ್ಕøತಿಕ ಸಾಹಿತ್ಯಿಕ ಸಂಸ್ಥೆ ರಂಗ ಚಿನ್ನಾರಿಯ ಸಂಗೀತ ಘಟಕ ಸ್ವರ ಚಿನ್ನಾರಿ ಹಾಗೂ ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಕಾಸರಗೋಡು ಕರಂದಕ್ಕಾಡಿನ ಪದ್ಮಗಿರಿ ಕಲಾಕುಟೀರದಲ್ಲಿ ಆಯೋಜಿಸಲಾದ ಭಕ್ತಿಗೀತೆಗಳ ಗಾಯನ 'ಭಕ್ತಿ ತೀರ್ಥ' ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಖ್ಯಾತ ಹರಿದಾಸ, ವಕೀಲ ಶಂ ನಾಡಿಗ ಕುಂಬಳೆ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ "ರಂಗ ಚಿನ್ನಾರಿಯು ನಡೆಸಿಕೊಂಡು ಬರುತ್ತಿರುವ ಸಾಂಸ್ಕøತಿಕ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಿದೆ. ಗುರಿ ಸಾಧಿಸಲು ಗುರು ಬೇಕು ಗುರುವಿಲ್ಲದ ವಿದ್ಯೆಗೆ ಸಂಪೂರ್ಣ ಫಲ ಸಿಕ್ಕದು. ಗುರುವಿನ ಮೂಲಕ ಕಲಿತ ವಿದ್ಯೆ ನಮ್ಮನ್ನು ಸಾರ್ಥಕತೆಯೆಡೆಗೆ ಕೊಂಡೊಯ್ಯುವುದಾಗಿ ಹೇಳಿದರು.
ಖ್ಯಾತ ವಕೀಲ ಹಾಗೂ ನೋಟರಿ ಸಿ. ಎನ್. ಅಶೋಕ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಖ್ಯಾತ ಗಾಯಕರಾದ ಮುಲ್ಕಿ ರವೀಂದ್ರ ಪ್ರಭು ಅವರು ಪ್ರಾರ್ಥನೆ ಹಾಡಿದರು. ರಂಗ ಚಿನ್ನಾರಿಯ ನಿರ್ದೇಶಕ, 'ಭಕ್ತಿ ತೀರ್ಥ'ದ ಸಂಚಾಲಕ ಕಾಸರಗೋಡು ಚಿನ್ನಾ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಮಂಗಳೂರಿನ ಖ್ಯಾತ ತುಳು ಸಿನಿಮಾ ನಿರ್ಮಾಪಕರಾಗಿರುವ ಟಿ. ಎ. ಶ್ರೀನಿವಾಸ, ರಂಗ ಚಿನ್ನಾರಿಯ ನಿರ್ದೇಶಕ ಕೆ. ಸತ್ಯನಾರಾಯಣ, ರಂಗ ಚಿನ್ನಾರಿಯ ಕಾರ್ಯದರ್ಶಿ ಕಿಶೋರ್ ಪೆರ್ಲ ಉಪಸ್ಥಿತರಿದ್ದರು.
ಇ ಸಂದರ್ಭ ಖ್ಯಾತ ಗಾಯಕರಾದ ಅರವಿಂದ ಆಚಾರ್ಯ ಮಾಣಿಲ, ಖ್ಯಾತ ಹಿಂದುಸ್ತಾನಿ ಗಾಯಕರಾದ ಪಂಡಿತ್ ಕೃಷ್ಣೇಂದ್ರ ವಾಡೆಕರ್, ಮುಲ್ಕಿ ರವೀಂದ್ರ ಪ್ರಭು ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ಜರಗಿತು. ಹಾರ್ಮೋನಿಯಂನಲ್ಲಿ ಗಣಪತಿ ಪ್ರಭು ಮುಲ್ಕಿ, ತಬ್ಲಾದಲ್ಲಿ ರಾಜೇಶ್ ಭಾಗವತ್, ತಾಳದಲ್ಲಿ ಸ್ವಯಂ ಪ್ರಭು, ಪಾಂಡುರಂಗ ಭಟ್ ಅವರು ಸಹಕರಿಸಿದರು.



