ಬದಿಯಡ್ಕ: ಸುಂದರವಾದ ಮೂರ್ತಿ, ಸುಂದರವಾದ ಕಟ್ಟಡ, ಒಳ್ಳೆಯ ವಾಚನಾಲಯ, ವಿಶಿಷ್ಟ ಕಲಾತ್ಮಕ ತೀರ್ಥಬಾವಿಯೊಂದಿಗಿರುವ ಮಂದಿರವನ್ನು ನಮ್ಮ ಇತಿಹಾಸದಲ್ಲಿ ಕಂಡಿಲ್ಲ. ಭಜನಾ ಮಂದಿರದಲ್ಲಿ ಪುಸ್ತಕ ಸಂಸ್ಕøತಿಯನ್ನು ಉಳಿಸುವ ಕೆಲಸ, ಮಂದಿರದಲ್ಲಿ ಧರ್ಮ ಶಿಕ್ಷಣ ಕಾರ್ಯ. ಇಲ್ಲಿ ಎಲ್ಲವೂ ವಿಶಿಷ್ಟವಾಗಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನುಡಿದರು.
ಭಾನುವಾರ ಅಗಲ್ಪಾಡಿ ಮಾರ್ಪನಡ್ಕ ಶ್ರೀ ಗೋಪಾಲಕೃಷ್ಣ ಭಜನಾ ಮಂದಿರದಲ್ಲಿ ನೂತನವಾಗಿ ನಿರ್ಮಿಸುವ ಮುಖಮಂಟಪದ ನಿಧಿ ಸಂಗ್ರಹಕ್ಕೆ ಚಾಲನೆಯನ್ನು ನೀಡಿ ಅವರು ಆಶೀರ್ವಚನ ನೀಡಿದರು.
ಭಜನಾ ಮಂದಿರಗಳು ಸಮಾಜವನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿದೆ. ಮಠ ಮಂದಿರಗಳು ಸಮಾಜಕ್ಕೆ ವಿಶ್ವಾಸ ದೃಢತೆಯನ್ನು ನೀಡಬೇಕು. ಸನಾತನ ಧರ್ಮ ವಿಶ್ವಾಸಿಗಳು ಎಲ್ಲರೂ ಒಂದೇ ಛತ್ರದಡಿಯಲ್ಲಿ ಸೇರಬೇಕು. ಅಂತಹ ಛತ್ರ ದೈವದತ್ತವಾಗಿ ಇಲ್ಲಿ ಏರ್ಪಟ್ಟಿದೆ. ಸನಾತನ ಸಮಾಜಕ್ಕೆ ಈ ಮಂದಿರವು ಮುಖವಿದ್ದಂತೆ. ಆಕರ್ಷಕವಾದ ಮುಖಮಂಟಪವಿಲ್ಲಿ ಎದ್ದು ನಿಲ್ಲಲಿ. ಗೋವು ಇದ್ದರೆ ಮಾತ್ರ ಗೋಪಾಲಕೃಷ್ಣ. ಅದಕ್ಕೆ ಪೂರಕವಾಗಿ ಇಲ್ಲೊಂದು ಗೋಶಾಲೆಯೂ ಬೆಳಗಲಿ ಎಂದರು.
ಮಧುಸೂದನ ಆಯರ್ ಮಂಗಳೂರು ಅಧ್ಯಕ್ಷತೆ ವಹಿಸಿದ್ದರು. ಬಾಬು ಮಾಸ್ತರ್ ಅಗಲ್ಪಾಡಿ, ನಾರಾಯಣ ಮಣಿಯಾಣಿ ಕಾಟುಕುಕ್ಕೆ, ಎಂ.ಸಂಜೀವ ಶೆಟ್ಟಿ ಮೊಟ್ಟೆಕುಂಜ, ಪ್ರೊ.ಎ.. ಶ್ರೀನಾಥ್, ಸುಧಾಮ ಪದ್ಮಾರು, ಈಶ್ವರಿ ಬೇರ್ಕಡವು, ಡಾ. ವೈ.ವಿ.ಕೃಷ್ಣಮೂರ್ತಿ, ಡಾ. ವೇಣುಗೋಪಾಲ ಕಳೆಯತ್ತೋಡಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಾವಣ್ಯ ಗಿರೀಶ್, ಶರಣ್ಯಾ,ರಮ್ಯಾದೀಪಕ್ ಪ್ರಾರ್ಥನೆ ಹಾಡಿದರು. ರಮೇಶ್ ಕೃಷ್ಣ ಪದ್ಮಾರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರಾಜೇಶ್ ಮಾಸ್ತರ್ ಅಗಲ್ಪಾಡಿ ವಂದಿಸಿದರು. ಶ್ರೀಗಳ ಆಗಮನದ ಸಂದರ್ಭದಲ್ಲಿ ಪೂರ್ಣಕುಂಭ ಸ್ವಾಗತದೊಂದಿಗೆ ಪಾಂಚಜನ್ಯ ಬಾಲಗೋಕುಲ ಕುಣಿತ ಭಜನಾ ತಂಡದಿಂದ ನೃತ್ಯ ಭಜನೆ ನಡೆಯಿತು.





