ಕಾಸರಗೋಡು: ಕಣ್ಣೂರಿನ ತಳಿಪರಂಬ ಶ್ರೀ ರಾಜರಾಜೇಶ್ವರ ದೇವಸ್ಥಾನ ಹಾಗೂ ಪರಶ್ಯಿನಿಕಡವು ಶ್ರೀ ಮುತ್ತಪ್ಪನ್ ಕ್ಷೇತ್ರಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಎರಡೂ ಕ್ಷೇತ್ರಗಳಲ್ಲಿ ರಾಷ್ಟ್ರೀಯ ಭದ್ರತಾ ಪಡೆ(ಎನ್ಎಸ್ಜಿ)ಕಲ್ಪಿತ ಕಾರ್ಯಾಚರಣೆ ನಡೆಸುವ ಮೂಲಕ ಭದ್ರತಾ ಕಾರ್ಯಗಳನ್ನು ಖಾತ್ರಿ ಪಡಿಸಿತು. ಪ್ರಧಾನಮಂತ್ರಿಯವರ ಕಾರ್ಯಾಲಯದ ನಿರ್ದೇಶ ಪ್ರಕಾರ ಮೋದಿ ಆಗಮನದ ಪೂರ್ವ ಸಿದ್ಧತೆ ಹಾಗೂ ರಕ್ಷಣಾ ಚಟುವಟಿಕೆಯ ಕಲ್ಪಿತ ಕಾರ್ಯಾಚರಣೆ ನಡೆಸಲಾಗಿದೆ.
ಚೆನ್ನೈನಿಂದ ಆಗಮಿಸಿದ ಎನ್ಎಸ್ಜಿಯ ಎರಡು ತುಕಡಿಗಳಲ್ಲಿ ಒಂದು ತಳಿಪರಂಬ ಹಾಗೂ ಇನ್ನೊಂದು ಪರಶ್ಯಿನಿಕಡವಿಗೆ ಆಗಮಿಸಿ ಎರಡೂ ಕಡೆ ಏಕ ಕಾಲಕ್ಕೆ ಕವಾಯತು ನಡೆಸಿದೆ.
ಕಲ್ಪಿತ ಕಾರ್ಯಾಚರಣೆ ಬಗ್ಗೆ ಮಾಹಿತಿಯಿಲ್ಲದಿರುವುದರಿಂದ ಅಲ್ಪ ಕಾಲ ಆತಂಕದ ವಾತಾವರಣ ಉಂಟಾಗಿತ್ತು. ಸ್ಪೋಟಕವಸ್ತುಗಳೊಂದಿಗೆ ದೇಗುಲದೊಳಗೆ ಅಕ್ರಮವಾಗಿ ನುಗ್ಗಿರುವ ಬಂದೂಕುಧಾರಿಗಳಾದ ಭಯೋತ್ಪಾದಕರು ದಿಗ್ಬಂಧನಕ್ಕೊಳಪಡಿಸಿದ್ದ ಅಪರ ಜಿಲ್ಲಾಧಿಕಾರಿಯನ್ನು ರಕ್ಷಿಸುವ ಬಗ್ಗೆ ಕಲ್ಪಿತ ಕಾರ್ಯಾಚರಣೆಯನ್ನು ಎರಡೂ ಕ್ಷೇತ್ರಗಳಲ್ಲಿ ನಡೆಸಲಾಗಿದೆ. ರಾಜ್ಯದ ಉನ್ನತ ಪೊಲೀಸ್ ಅಧಿಕಾರಿಗಳ ಉಪಸ್ಥಿತಿಯಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಕಲ್ಪಿತ ಕಾರ್ಯಾಚರಣೆ ಬಗ್ಗೆ ಮಾಹಿತಿ ಲಭಿಸುತ್ತಿದ್ದಂತೆ ಭಕ್ತಾದಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಇತಿಹಾಸ ಪ್ರಸಿದ್ಧ ತಳಿಪರಂಬ ಶ್ರೀ ರಾಜರಾಜೇಶ್ವರ ದೇವಸ್ಥಾನದ ಎದುರು ಭಾಗದಲ್ಲಿ ಉದ್ಯಮಿ ಹಾಗೂ ಪ್ರಮುಖ ಸಿನಿಮ ನಿರ್ಮಾಪಕ ಮೊಟ್ಟಮ್ಮಲ್ ರಾಜನ್ ಅವರು ತನ್ನ ಸೇವಾ ರೂಪವಾಗಿ ದೇಶದಲ್ಲೇ ವಿಶಿಷ್ಠವಾದ ಮಹಾದೇವನ ತಾಮ್ರದ ಪೂರ್ಣಶಿಲ್ಪವನ್ನು ತಳಿಪರಂಬ ದೇಗುಲದಲ್ಲಿ ಸ್ಥಾಪಿಸಿದ್ದು, ಇದನ್ನು ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ನಡೆಸಲಿದ್ದಾರೆ. ಕೇರಳದ ಪ್ರಾಚೀನವಾದ 108 ಶಿವ ಕ್ಷೇತ್ರಗಳ ಪೈಕಿ ತಳಿಪರಂಬ ರಾಜರಾಜೇಶ್ವರ ಕ್ಷೇತ್ರ ತನ್ನ ಐತಿಹ್ಯಗಳಿಂದ ಅತ್ಯುತ್ತರ ಕೇರಳದ ಪ್ರಮುಖ ಶಿವಾಲಯವಾಗಿ ಜನಪ್ರಿಯಗೊಂಡಿದೆ. ಈಗಾಗಲೇ ಕೇಂದ್ರ ಗೃಹ ಸಚಿವ ಅಮಿತ್ ಷಾ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ದೇಗುಲಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕಾಗಿ ಕಣ್ಣೂರಿನ ಜನತೆ ಕಾತರದಿಂದ ಕಾಯುತ್ತಿದ್ದಾರೆ.
ಈಗಾಗಲೇ ಪ್ರಧಾನಮಂತ್ರಿಯವರ ಕಾರ್ಯಾಲಯದ ನಿರ್ದೇಶನದಂತೆ ಪ್ರಾಚ್ಯವಸ್ತು ಇಲಾಖೆ ಪ್ರತಿನಿಧಿಗಳು ದೇವಾಲಯ ಸಂದರ್ಶಿಸಿ ಇಲ್ಲಿನ ಸಮಗ್ರ ವರದಿ ಸಂಗ್ರಹಿಸಿದ್ದಾರೆ. ಖ್ಯಾತ ಶಿಲ್ಪಿ ಕಾನಾಯಿ ಉಣ್ಣಿ ಅವರು ಕಳೆದ 4ವರ್ಷಗಳ ಕಾಲ ಶಿಲ್ಪದ ಕೆಲಸ ನಿರ್ವಹಿಸುತ್ತಿದ್ದು, 14 ಅಡಿ ಎತ್ತರದ 400ಕಿಲೋ ತೂಕದ ಬೃಹತ್ ಗಾತ್ರದ ಪೂರ್ಣಕಾಯ ಶಿವನ ಪ್ರತಿಮೆಯನ್ನು ತಾಮ್ರದಲ್ಲಿ ನಿರ್ಮಿಸಿದ್ದಾರೆ. ರಾಜರಾಜೇಶ್ವರ ದೇಗುಲದ ಸನಿಹದ ಅಶ್ವಥ್ಥ ಮರದ ಬಳಿ ಈ ತಾಮ್ರದ ಪ್ರತಿಮೆ ವಿರಾಜಮಾನವಾಗಿದೆ. ಪ್ರಧಾನಿ ಭೇಟಿ ದಿನಾಂಕ ನಿಗದಿಯಾಗಿಲ್ಲದಿದ್ದರೂ, ಮುಂಬರುವ ಮಾರ್ಚ್, ಅಥವಾ ಎಪ್ರೀಲ್ ತಿಂಗಳಲ್ಲಿ ಲೋಕಾರ್ಪಣೆ ಸಾಧ್ಯತೆಯಿರುವುದಾಗಿ ಮಾಹಿತಿಯಿದೆ.




