ಬದಿಯಡ್ಕ: ಫೆ.2 ರಿಂದ ಆರಂಭಗೊಂಡ ನಾರಂಪಾಡಿ ಶ್ರೀಉಮಾಮಹೇಶ್ವರ ಕ್ಷೇತ್ರದ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಅಂಗವಾಗಿ ಸೋಮವಾರ ಸಮಸ್ರ ಬ್ರಹ್ಮಕಲಶದೊಂದಿಗೆ 10 ದಿನಗಳ ಸಮಾರಂಭ ಸಂಪನ್ನಗೊಂಡಿತು.
ಸೋಮವಾರ ಬೆಳಿಗ್ಗೆ ಗಣಪತಿಹೋಮ, ಕವಾಟೋದ್ಘಾಟನೆ, ಶಾಂತಿ, ಪ್ರಾಯಶ್ಚಿತ ಮತ್ತು ತತ್ವಹೋಮಗಳ ಕಲಶಾಭಿಷೇಕ ನಡೆದು ಬಳಿಕ ಸಹಸ್ರ ಬ್ರಹ್ಮಕಲಶಾಭಿಷೇಕ ತಂತ್ರಿವರ್ಯ ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿಗಳ ನೇತೃತ್ವದಲ್ಲಿ ನೆರವೇರಿತು. ಬಳಿಕ ಅವಭೃತ ಪ್ರೋಕ್ಷಣೆ, ಮಹಾಪೂಜೆ, ಮಂಗಳ ಮಂತ್ರಾಕ್ಷತೆ ಪ್ರಸಾದ ವಿತರಣೆ, ಮಹಾ ಅನ್ನ ಸಂತರ್ಪಣೆ ನಡೆಯಿತು. ಸಂಜೆ 7 ರಿಂದ ಶ್ರೀದೇವರ ಬಲಿ ಉತ್ಸವ, ರಾತ್ರಿಪೂಜೆ, ಪ್ರಸಾದ ವಿತರಣೆ ನಡೆಯಿತು. ಭಜನಾ ಮಂಟಪದಲ್ಲಿ ಬೆಳಿಗ್ಗೆ 8 ರಿಂದ ಅಗಲ್ಪಾಡಿ ಗೋಪಾಲಕೃಷ್ಣ ಭಜನಾ ಸಂಘ,ಬೇಗತ್ತಡ್ಕ ಶ್ರೀಅಯ್ಯಪ್ಪ ಭಜನಾ ಸಂಘ, ಏತಡ್ಕ ವಿಶ್ವಪ್ರಿಯ ಮಹಿಳಾ ಭಜನಾ ತಂಡ, ಮವ್ವಾರು ಶ್ರೀಗಣೇಶ ಭಜನಾ ಸಂಗ, ಕಿದೂರು ಕುಂಟಂಗೇರಡ್ಕ ವರಾಹಿ ಭಜನಾ ಸಂಘದವರಿಂದ ಭಜನೆ ನಡೆಯಿತು.
ಸಾಂಸ್ಕøತಿಕ ವೇದಿಕೆಯಲ್ಲಿ ಬೆಳಿಗ್ಗೆ 10.30 ರಿಂದ ಯೋಗೀಶ ಶರ್ಮ ಬಳ್ಳಪದವು ಅವರಿಂದ ಭಕ್ತಿಸಂಗೀತ ನಡೆಯಿತು. ಅಪರಾಹ್ನ 2 ರಿಂದ ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಬ್ರಹ್ಮಕಲಶಾಭಿಷೇಕ ಸಮಿತಿ ಅಧ್ಯಕ್ಷ ನಿತ್ಯಾನಂದ ಶೆಣೈ ಬದಿಯಡ್ಕ ಅಧ್ಯಕ್ಷತೆ ವಹಿಸಿದ್ದರು. ಗಣ್ಯರು ಉಪಸ್ಥಿತರಿದ್ದರು. ರಾತ್ರಿ 9 ರಿಂದ ಮಾವಿನಕಟ್ಟೆ ಶ್ರೀಅಯ್ಯಪ್ಪ ಸ್ವಾಮಿ ಯಕ್ಷಗಾನ ಕಲಾಸಂಘ ಹಾಗೂ ಅತಿಥಿ ಕಲಾವಿದರಿಂದ ಯಕ್ಷಗಾನ ಬಯಲಾಟ ನಡೆಯಿತು.
ಇಂದಿನಿಂದ ವರ್ಷಾವಧಿ ಉತ್ಸವ:
ಇಂದಿನಿಂದ(ಫೆ.11) ಶ್ರೀಕ್ಷೇತ್ರದ ವರ್ಷಾವಧಿ ಜಾತ್ರೋತ್ಸವ 16ರ ವರೆಗೆ ನಡೆಯಲಿದೆ. ಇಂದು ಬೆಳಿಗ್ಗೆ 6 ಕ್ಕೆ ಹಣಪತಿಹೋಮ, 6.30ಕ್ಕೆ ಭಜನಾ ಮಂಟಪದಲ್ಲಿ ಭಜನೆ, 10 ಕ್ಕೆ ಧ್ವಜಾರೋಹಣ, ಶ್ರೀಬಲಿ, ನವಕಾಭಿಷೇಕ ನಡೆಯಲಿದೆ. ಬಳಿಕ 10.30ರಿಂದ ಯಕ್ಷಗಾನ ತಾಳಮದ್ದಳೆ, 11 ರಿಂದ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. 1.30ರಿಂದ ನಟವರ್ ಭಕ್ತಿಸಂಗೀತ, 3.30ರಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 5 ರಿಂದ ಭರತನಾಟ್ಯ, 6.30ರಿಂದ ಕರಗಾಟ್ಟಂ ನೃತ್ಯ, ರಾತ್ರಿ 8 ರಿಂದ ರಾತ್ರಿಪೂಜೆ, ಹವಿಸ್ಸುಪೂಜೆ, ಶ್ರೀಭೂತಬಲಿ ನಡೆಯಲಿದೆ.


.jpg)
.jpg)

