ಕಾಸರಗೋಡು: ಕೃಷಿ ವಲಯಕ್ಕೆ, ಲೈಫ್ ಯೋಜನೆಗೆ ಆದ್ಯತೆ ನೀಡಿದ ಕೇರಳ ರಾಜ್ಯದ 2025-26 ನೇ ಸಾಲಿನ ಮುಂಗಡಪತ್ರವನ್ನು ರಾಜ್ಯ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ್ ವಿಧಾನಸಭೆಯಲ್ಲಿ ಮಂಡಿಸಿದ್ದರು. ಕಾಸರಗೋಡಿನ ಮೈಲಾಟಿಯಲ್ಲಿ ಬ್ಯಾಟರಿ ಎನರ್ಜಿ ಸೋಲಾರ್ ಸಿಸ್ಟಂ ಘಟಕ ಆರಂಭಿಸಲಾಗುವುದು ಎಂದದರಲ್ಲಿ ಉಲ್ಲೇಖಿಸಲಾಗಿದೆ.
ಸಮಗ್ರ ಕೃಷಿ ಯೋಜನೆಗೆ 227.40 ಕೋಟಿ ರೂ., ಭತ್ತ ಕೃಷಿ ಅಭಿವೃದ್ಧಿಗೆ 150 ಕೋಟಿ ರೂ. ಮೀಸಲಿರಿಸಿದೆ. ವಿದ್ಯುತ್ ಉತ್ಪಾದನೆ ಹೆಚ್ಚಿಸಲು 100 ಕೋಟಿ ರೂ, ಅರಣ್ಯ ಸಂರಕ್ಷಣೆಗೆ 50.3 ಕೋಟಿ ರೂ., ಮಣ್ಣು ಸಂರಕ್ಷಣೆಗೆ 77.9 ಕೋಟಿ ರೂ., ಮೀನು ಕಾರ್ಮಿಕರಿಗೆ ಗ್ರೂಪ್ ವಿಮೆಗೆ 10 ಕೋಟಿ ರೂ. ಮೀಸಲಿರಿಸಿದೆ. ಮೀನುಗಾರಿಕಾ ಕ್ಷೇತ್ರಕ್ಕೆ 205 ಕೋಟಿ ರೂ, ತೆಂಗಿನ ಕೃಷಿ ಅಭಿವೃದ್ಧಿಗೆ 100 ಕೋಟಿ ರೂ., ಬೆಳೆ ವಿಮೆ ಯೋಜನೆಗೆ ಸರ್ಕಾರದ ಪಾಲು ರೂಪದಲ್ಲಿ 33.14 ಕೋಟಿ ರೂ., ಸಮಗ್ರ ತರಕಾರಿ ಅಭಿವೃದ್ಧಿ ಯೋಜನೆಗೆ 78.48 ಕೋಟಿ ರೂ., ಬೀದಿ ನಾಯಿಗಳ ದಾಳಿ ತಡೆಗಟ್ಟಲು 2 ಕೋಟಿ ರೂ., ತೀರ್ಥಾಟನಾ ಪ್ರವಾಸೋದ್ಯಮಕ್ಕೆ 200 ಕೋಟಿ ರೂ., ಮೂಲ ಸೌಕರ್ಯ ಅಭಿವೃದ್ಧಿಗಾಗಿ 100 ಕೋಟಿ ರೂ. ಮೀಸಲಿರಿಸಿದೆ.
ಬಯೋ ಎಥೆನಾಲ್ ಸಂಶೋಧನೆ ಹಾಗು ಉತ್ಪಾದನೆಗಾಗಿ ಬಜೆಟ್ನಲ್ಲಿ 10 ಕೋಟಿ ರೂ. ಮೀಸಲಿರಿಸಿದೆ. ಉನ್ನತ ಶಿಕ್ಷಣ ವಲಯದಲ್ಲಿ 7 ಹಿರಿಮೆ ಕೇಂದ್ರಗಳನ್ನು ಆರಂಭಿಸಲಾಗುವುದು. ಇದಕ್ಕೆ 25 ಕೋಟಿ ರೂ., ಲೈಫ್ ಭವನ ಯೋಜನೆಯಲ್ಲಿ 1 ಲಕ್ಷ ಮನೆ ನಿರ್ಮಾಣ ಕಾಮಗಾರಿ ಪೂರ್ತಿಗೊಳಿಸಲು 1160 ಕೋಟಿ ರೂ. ಮೀಸಲಿರಿಸಿದೆ. ಸರ್ವೀಸ್ ಪಿಂಚಣಿ ಸುಧಾರಣೆಗೆ 600 ಕೋಟಿ ರೂ. ನೀಡಲಾಗುವುದು. ರಾಜ್ಯದಲ್ಲಿ ಹೈಡ್ರೋಜನ್ ಇಂಧನ ಉತ್ಪಾದಿಸಲಾಗುವುದು. ಇದಕ್ಕಾಗಿ ಹೈಡ್ರೋಜನ್ ವ್ಯಾಲಿ ಯೋಜನೆ ಕಾರ್ಯಗತಗೊಳಿಸಲಾಗುವುದು. ಆರೋಗ್ಯ ಪ್ರವಾಸೋದ್ಯಮ ಹಬ್ ಆಗಿ ಪರಿವರ್ತಿಸಲಾಗುವುದು. ಇದಕ್ಕಾಗಿ 50 ಕೋಟಿ ರೂ. ಮೀಸಲಿಡಲಾಗಿದೆ. ಲೋಕೋಪಯೋಗಿ ರಸ್ತೆ ಹಾಗು ಸೇತುವೆ ಅಭಿವೃದ್ಧಿಗಾಗಿ 3060 ಕೋಟಿ ರೂ., ಕಾರುಣ್ಯ ಆರೋಗ್ಯ ಯೋಜನೆಗೆ 700 ಕೋಟಿ ರೂ., ಆರೋಗ್ಯ ಇಲಾಖೆಗೆ 10431.73 ಕೋಟಿ ರೂ. ಮೀಸಲಿಡಲಾಗಿದೆ.
ಕಾಸರಗೋಡಿನಿಂದ ತಿರುವನಂತಪುರದ ವರೆಗೆ ಕರಾವಳಿ ಯೋಜನೆಯಲ್ಲಿ ಪ್ರತೀ ಕಿಲೋ ಮೀಟರ್ಗೆ 25 ಜಮೀನುಗಳನ್ನು ಸ್ವಾಧೀನಪಡಿಸಲಾಗುವುದು. ಒಳನಾಡು ಜಲ ಸಾರಿಗೆಗೆ 500 ಕೋಟಿ ರೂ., ಸ್ಥಳೀಯಾಡಳಿತ ಸಂಸ್ಥೆಗಳಿಗೆ 15980.41 ಕೋಟಿ ರೂ., ಜನರಲ್ ಪರ್ಪಸ್ ನಿಧಿ ರೂಪದಲ್ಲಿ 2577 ಕೋಟಿ ರೂ. ಮೀಸಲಿರಿಸಲಾಗುವುದು. ಎಲ್ಲಾ ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಕೇಂದ್ರ ಸ್ಥಾಪಿಸಲಾಗುವುದು. ಉಚಿತ ಶಾಲಾ ಯೂನಿಫಾರಂ ಯೋಜನೆಗಾಗಿ 154.34 ಕೋಟಿ ರೂ., ಕ್ಯಾನ್ಸರ್ ಚಿಕಿತ್ಸೆಗೆ ಮಲಬಾರ್ ಸೆಂಟರ್ಗೆ 35 ಕೋಟಿ ರೂ., ಕೊಚ್ಚಿ ಕ್ಯಾನ್ಸರ್ ಸೆಂಟರ್ಗೆ 18 ಕೋಟಿ ರೂ., ಆರ್ಸಿಸಿಗೆ 75 ಕೋಟಿ ರೂ., ಪಂಪಾ ಸನ್ನಿಧಾನದ ಕಾಲ್ನಡಿಗೆ ಹಾದಿಯ ಅಭಿವೃದ್ಧಿಗೆ 47.97 ಕೋಟಿ ರೂ. ಮೀಸಲಿರಿಸಲಾಗಿದೆ.






