ಕಾಸರಗೋಡು: ಜಿಲ್ಲಾ ವೈದ್ಯಕೀಯ ಕಚೇರಿ (ಆರೋಗ್ಯ) ಮತ್ತು ರಾಷ್ಟ್ರೀಯ ಆರೋಗ್ಯ ಮಿಷನ್ನ ಆಶ್ರಯದಲ್ಲಿ ವಿಶ್ವ ಶ್ರವಣ ದಿನವನ್ನು ಆಚರಿಸಲಾಯಿತು. ಕಾಞಂಗಾಡ್ ರಾಷ್ಟ್ರೀಯ ಆರೋಗ್ಯ ಮಿಷನ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ. ಎ.ವಿ.ರಾಮದಾಸ್ ಸಮರಂಭ ಉದ್ಘಾಟಿಸಿದರು. ಜಿಲ್ಲಾ ಆಸ್ಪತ್ರೆ ಅಧೀಕ್ಷಕಿ ಡಾ.ಜೀಜಾ ಟಿ.ಪಿ ಅಧ್ಯಕ್ಷತೆ ವಹಿಸಿದ್ದರು. ಎನ್ಪಿಪಿಸಿಡಿ ನೋಡಲ್ ಅಧಿಕಾರಿ ಡಾ. ನಿತ್ಯಾನಂದ ಬಾಬು ನೇತೃತ್ವ ವಹಿಸಿದ್ದರು. ಜಿಲ್ಲೆಯ ಸಾರ್ವಜನಿಕ ಆರೋಗ್ಯ ವಿಭಾಗದ ದದಿಯರು ಮತ್ತು ಆರ್.ಬಿ.ಎಸ್.ಕೆ ವಿಭಾಗದ ದಾದಿಯರಿಗೆ ತರಬೇತಿ ನೀಡಲಾಯಿತು. 'ಧೋರಣೆಗಳನ್ನು ಬದಲಾಯಿಸೋಣ... ಪ್ರತಿಯೊಬ್ಬರಿಗೂ ಶ್ರವಣ ಮತ್ತು ಕಿವಿಗಳ ರಕ್ಷಣೆಯನ್ನು ಖಚಿತಪಡಿಸಿಕೊಳ್ಳೋಣ' ಎಂಬ ಘೋಷಣೆಯೊಂದಿಗೆ ಶ್ರವಣ ದಿನವನ್ನು ಆಚರಿಸಲಯಿತು.
ರಾಷ್ಟ್ರೀಯ ಕಿವುಡುತನ ನಿಯಂತ್ರಣ ಯೋಜನೆಯ ಅಂಗವಾಗಿ, ಈ ಪ್ರದೇಶದ ವಿವಿಧ ವಲಯಗಳಲ್ಲಿ ಮಧ್ಯಸ್ಥಿಕೆ ವಹಿಸಿ ಶ್ರವಣ ಸಮಸ್ಯೆ ಎದುರಿಸುತ್ತಿರುವವರನ್ನು ಗುರುತಿಸಿ ಪುನರ್ವಸತಿ ಕಲ್ಪಿಸುವುದು ಯೋಜನೆ ಮುಖ್ಯ ಉದ್ದೇಶವಾಗಿದೆ. ಮಕ್ಕಳು ಮತ್ತು ವಯಸ್ಕರಲ್ಲಿ ಕಂಡುಬರುವ ಶ್ರವಣ ದೋಷ ಹಾಗೂ ಕಿವಿಗಳಲ್ಲಿ ತಲೆದೋರುವ ಆರೋಗ್ಯ ಸಮಸ್ಯೆಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಕಿವಿಗಳ ಆರೋಗ್ಯ ರಕ್ಷಣೆಯನ್ನೂ ಖಾತ್ರಿಪಡಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ಉದ್ದೇಶಕ್ಕಾಗಿ ಕಾಸರಗೋಡು ಜನರಲ್ ಆಸ್ಪತ್ರೆ, ಕಾಞಂಗಾಡ್ ಜಿಲ್ಲಾ ಆಸ್ಪತ್ರೆ ಮತ್ತು ತಾಲೂಕು ಆಸ್ಪತ್ರೆ ತ್ರಿಕರಿಪುರ ಶ್ರವಣೇಂದ್ರಿಯ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇಲ್ಲಿ ಇಎನ್ಟಿ ತಜ್ಞರು, ಶ್ರವಣಶಾಸ್ತ್ರಜ್ಞರು, ಆಡಿಯೊಮೆಟ್ರಿಕ್ ಸಹಾಯಕರು ಲಭ್ಯವಿರಲಿದ್ದಾರೆ.
ಸಮಾರಂಭದಲ್ಲಿ ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ಡಾ. ಸಚಿನ್ ಸೆಲ್ವ್, ಡಿಪಿ ಎಚ್ಎನ್ ಗೀತಾ ಎಂ ಉಪಸ್ಥಿತರಿದ್ದರು. ಜಿಲ್ಲಾ ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್ ಮಠತ್ತಿಲ್ ಸ್ವಾಗತಿಸಿದರು. ಜಿಲ್ಲಾ ಸಹಾಯಕ ಅಧಿಕಾರಿ ಕೃಷ್ಣದಾಸ್ ವಂದಿಸಿದರು.






