HEALTH TIPS

ದಲಿತ ನಾಯಕರು ಬಿಕ್ಕಟ್ಟು, ದಾಳಿಗಳನ್ನು ಎದುರಿಸಬೇಕು: ಕೋಡಿಕುನ್ನಿಲ್‌ ಸುರೇಶ್‌

ತಿರುವನಂತಪುರಂ: 'ದಲಿತ ಸಮುದಾಯದ ಬಹಳಷ್ಟು ನಾಯಕರು ನಿರಂತರ ದಾಳಿ ಹಾಗೂ ಬಿಕ್ಕಟ್ಟು ಎದುರಿಸುತ್ತಿರುವ ಕಾರಣ, ರಾಜಕೀಯದಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ' ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕೋಡಿಕುನ್ನಿಲ್‌ ಸುರೇಶ್‌ ವಿಷಾದ ವ್ಯಕ್ತಪಡಿಸಿದ್ದಾರೆ. 

ಭಾನುವಾರ ತಮ್ಮ ಕ್ಷೇತ್ರ ಮಾವೇಲಿಕರದಲ್ಲಿ 'ಗಾಂಧಿ ಗ್ರಾಮ'ದಿಂದ ಆಯೋಜಿಸಿದ್ದ 'ದಲಿತರ ಪ್ರಗತಿ ಸಮಾವೇಶ'ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

'ಲೋಕಸಭೆಗೆ ನಾನು 8 ಬಾರಿ ಆಯ್ಕೆಯಾಗಿದ್ದೇನೆ. ಅತ್ಯಂತ ಕಠಿಣ ಪರಿಸ್ಥಿತಿ ಹಾಗೂ ದಾಳಿಗಳನ್ನು ಎದುರಿಸಿ, ರಾಜಕೀಯದಲ್ಲಿ ನಾನು ಉಳಿಯಲು ಸಾಧ್ಯವಾಯಿತು. ಕಳೆದ ಚುನಾವಣೆಯಲ್ಲಿಯೂ ಕೆಲವು ಮಾಧ್ಯಮಗಳು, ಕೇರಳದಲ್ಲಿ ಬೇರೆ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಅಭ್ಯರ್ಥಿಗಳು ಗೆದ್ದರೂ, ನಾನು ಸೋಲುತ್ತೇನೆ ಎಂದೇ ಬಿಂಬಿಸಿದವು. ಅಂತಹ ದಾಳಿಗಳನ್ನು ಎದುರಿಸಿ, ನಾನು ಗೆದ್ದಿದ್ದೇನೆ. ದಲಿತ ಸಮುದಾಯದ ಹಲವು ನಾಯಕರು ಇಂತಹ ದಾಳಿಗಳನ್ನು ಎದುರಿಸಲು ಸಾಧ್ಯವಾಗದೆ, ರಾಜಕೀಯದಲ್ಲಿ ಉಳಿಯಲು ಸಾಧ್ಯವಾಗುತ್ತಿಲ್ಲ' ಎಂದು ತಿಳಿಸಿದರು.

ಪಕ್ಷದಲ್ಲಿ ಸರಿಯಾದ ಸ್ಥಾನಮಾನ ಸಿಗುತ್ತಿಲ್ಲ ಎಂಬ ಕಾರಣಕ್ಕಾಗಿಯೇ ಸುರೇಶ್‌ ಅವರು ಈ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಕೇರಳ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್‌, 'ಸುರೇಶ್‌ ಅವರು ತಮ್ಮ ವೈಯಕ್ತಿಕ ಬದುಕಿನ ಕುರಿತು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್‌ ರಾಜ್ಯ ಘಟಕವು ಮೊದಲಿನಿಂದಲೂ ಅವರ ಬೆನ್ನಿಗೆ ನಿಂತಿದೆ. ಕಳೆದ ಚುನಾವಣೆಯಲ್ಲಿಯೂ ಅವರನ್ನು ಸೋಲಿಸಲು ಕೆಲವರು ಪ್ರಯತ್ನಿಸಿದರೂ, ಪಕ್ಷವು ಅವರಿಗೆ ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿತ್ತು' ಎಂದು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries