ನವದೆಹಲಿ: ರಾಷ್ಟ್ರೀಯ ತನಿಖಾ ದಳದ (ಎನ್ಐಎ) ವಶದಲ್ಲಿರುವ ಮುಂಬೈ ದಾಳಿ ಮಾಸ್ಟರ್ಮೈಂಡ್ ತಹವ್ವುರ್ ರಾಣಾನನ್ನು ಪ್ರತಿದಿನ 8 ರಿಂದ 10 ಗಂಟೆ ವಿಚಾರಣೆ ನಡೆಸಲಾಗುತ್ತಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.
ಅಮೆರಿಕದಿಂದ ಗಡೀಪಾರಾಗಿ ಬಂದ ರಾಣಾನನ್ನು ಶುಕ್ರವಾರ ದೆಹಲಿ ನ್ಯಾಯಾಲಯ ವಿಚಾರಣೆಗಾಗಿ 18 ದಿನಗಳ ಕಾಲ ಎನ್ಐಎ ವಶಕ್ಕೆ ನೀಡಿದೆ.
2008ರಲ್ಲಿ ನಡೆದ ಮುಂಬೈ ಮೇಲಿನ ಭಯೋತ್ಪಾದಕ ದಾಳಿಯ ಸಂಪೂರ್ಣ ಸಂಚನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ರಾಣಾಗೆ ಪ್ರತಿದಿನ 8 ರಿಂದ 10 ಗಂಟೆ ಎನ್ಐಎ ಅಧಿಕಾರಿಗಳು ಗ್ರಿಲ್ ಮಾಡುತ್ತಿದ್ದಾರೆ. ರಾಣಾ ತನಿಖೆಗೆ ಸಹಕರಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.
ರಾಣಾಗೆ ಪೆನ್, ಕಾಗದ ಮತ್ತು ಕುರಾನ್ ಅನ್ನು ಒದಗಿಸಲಾಗಿದೆ. ಆತ ಯಾವುದೇ ನಿಗದಿತ ಆಹಾರಕ್ಕೆ ಬೇಡಿಕೆಯಿಟ್ಟಿಲ್ಲ. ಇತರ ಕೈದಿಗಳಿಗೆ ನೀಡುವ ಆಹಾರವನ್ನೇ ರಾಣಾಗೂ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಡೇವಿಡ್ ಕೊಲೆಮನ್ ಹೆಡ್ಲಿ ಜೊತೆಗೆ ನಡೆಸಿದ ದೂರವಾಣಿ ಕರೆಗಳ ಬಗ್ಗೆ ಸೇರಿ ತನಿಖೆ ವೇಳೆ ಸಿಕ್ಕ ಪ್ರಮುಖ ಅಂಶಗಳ ಕುರಿತು ರಾಣಾನನ್ನು ಪ್ರಶ್ನಿಸಲಾಗುತ್ತಿದೆ.




