ತಿರುವನಂತಪುರಂ: ಕಾರ್ಯವಟ್ಟಂ ಗ್ರೀನ್ಫೀಲ್ಡ್ ಕ್ರೀಡಾಂಗಣ ನಿರ್ಮಾಣಕ್ಕಾಗಿ ಕೇರಳ ವಿಶ್ವವಿದ್ಯಾಲಯಕ್ಕೆ ನೀಡಲಾದ 37 ಎಕರೆ ಭೂಮಿಯಲ್ಲಿ ಕ್ರೀಡಾಂಗಣದ ಗುತ್ತಿಗೆದಾರರು ವಿಶ್ವವಿದ್ಯಾಲಯಕ್ಕೆ 82 ಕೋಟಿ ರೂ. ಗುತ್ತಿಗೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ಮಾಹಿತಿ ಹಕ್ಕು (ಆರ್ಟಿಐ) ದಾಖಲೆಯಲ್ಲಿ ತಿಳಿದುಬಂದಿದೆ.
ಕೇರಳ ವಿಸಿ ಅಧ್ಯಕ್ಷತೆಯಲ್ಲಿ ಕ್ರೀಡಾಂಗಣ ಮೇಲ್ವಿಚಾರಣಾ ಸಮಿತಿ ಇದ್ದರೂ, ಬಾಡಿಗೆ ಬಾಕಿ ವಸೂಲಿ ಮಾಡುವ ಬಗ್ಗೆ ಅವರು ಅಸಡ್ಡೆ ತೋರುತ್ತಿದ್ದಾರೆ ಎಂಬ ಆರೋಪಗಳಿವೆ.
ವಿಶ್ವವಿದ್ಯಾನಿಲಯವು ಕಾರ್ಯವಟ್ಟಂ ಸ್ಪೋಟ್ರ್ಸ್ ಫೆಸಿಲಿಟೀಸ್ ಲಿಮಿಟೆಡ್ ಎಂಬ ಸಂಸ್ಥೆ ಮತ್ತು ಸರ್ಕಾರಿ ನಿಯಂತ್ರಿತ ರಾಷ್ಟ್ರೀಯ ಕ್ರೀಡಾ ಸಚಿವಾಲಯದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ್ದವು. ಕ್ರೀಡಾಂಗಣವನ್ನು ಮಾತ್ರ ನಿರ್ವಹಿಸುವ ಜವಾಬ್ದಾರಿಯನ್ನು ಕ್ರಿಕೆಟ್ ಸಂಘಕ್ಕೆ ನೀಡಲಾಗಿದೆ. ಕ್ರೀಡಾಂಗಣದ ಪಕ್ಕದಲ್ಲಿ ಚಲನಚಿತ್ರ ಮಂದಿರಗಳು, ರೆಸ್ಟೋರೆಂಟ್ಗಳು, ಈಜುಕೊಳಗಳು, ಸಮ್ಮೇಳನ ಸಭಾಂಗಣಗಳು, ಮದುವೆಗಳಿಗೆ ಸೂಕ್ತವಾದ ಸಭಾಂಗಣ ಮತ್ತು ಐಟಿ ಕಚೇರಿ ಕಾರ್ಯನಿರ್ವಹಿಸುತ್ತಿವೆ.
2010 ರಲ್ಲಿ ಅಚ್ಯುತಾನಂದನ್ ಸರ್ಕಾರದ ಅವಧಿಯಲ್ಲಿ ಕ್ರೀಡಾಂಗಣಕ್ಕಾಗಿ ಭೂಮಿಯನ್ನು ವರ್ಗಾಯಿಸಲು ನಿರ್ಧಾರ ತೆಗೆದುಕೊಳ್ಳಲಾಯಿತು. 2012 ರಲ್ಲಿ, ಉಮ್ಮನ್ ಚಾಂಡಿ ಸರ್ಕಾರವು ಭೂಮಿಯನ್ನು ಗುತ್ತಿಗೆ ಆಧಾರದ ಮೇಲೆ ವರ್ಗಾಯಿಸಲು ನಿರ್ಧರಿಸಿತು. ವಿಶ್ವವಿದ್ಯಾನಿಲಯಕ್ಕೆ ಇದುವರೆಗೆ ಕೇವಲ 6 ಕೋಟಿ ರೂ. ಗುತ್ತಿಗೆ ಹಣ ಬಂದಿದೆ. ರಾಜಕೀಯ ಒತ್ತಡದಿಂದಾಗಿ ಕಳೆದ 10 ವರ್ಷಗಳಿಂದ ಗುತ್ತಿಗೆ ಹಣ ಪಡೆಯದೆ ಕ್ರೀಡಾಂಗಣವನ್ನು ಕಾರ್ಯನಿರ್ವಹಿಸಲು ಅನುಮತಿಸಲಾಗಿದೆ ಎಂಬ ಆರೋಪಗಳಿವೆ.
ಕ್ರೀಡಾಂಗಣ ನಿರ್ಮಾಣಕ್ಕಾಗಿ ವಿಶ್ವವಿದ್ಯಾಲಯದ ಭೂಮಿಯನ್ನು 15 ವರ್ಷಗಳ ಗುತ್ತಿಗೆಗೆ ಹಸ್ತಾಂತರಿಸಲಾಯಿತು. 15 ವರ್ಷಗಳ ನಂತರ, ಕ್ರೀಡಾಂಗಣವನ್ನು ವಿಶ್ವವಿದ್ಯಾಲಯವು ನೇರವಾಗಿ ನಿರ್ವಹಿಸಬಹುದು ಅಥವಾ ಒಪ್ಪಂದವನ್ನು ನವೀಕರಿಸಬಹುದು. ಕ್ರೀಡಾಂಗಣವು ಗುತ್ತಿಗೆ ಬಾಡಿಗೆಯನ್ನು ಪಾವತಿಸದೆ ಕಾರ್ಯನಿರ್ವಹಿಸುತ್ತಿದೆ ಎಂದು ಸರ್ಕಾರದ ಕ್ರೀಡಾ ಇಲಾಖೆಗೆ ತಿಳಿದಾಗ, ಸರ್ಕಾರವು ಅದೇ ರೀತಿ ಕ್ರೀಡಾಂಗಣ ನಿರ್ಮಾಣಕ್ಕಾಗಿ ಕ್ಯಾಲಿಕಟ್ ವಿಶ್ವವಿದ್ಯಾಲಯದಿಂದ 40 ಎಕರೆ ಭೂಮಿಯನ್ನು ವಿನಂತಿಸಿತು.





