ನವದೆಹಲಿ: 'ಮಾತೃತ್ವದ ರಜೆ ಮಹಿಳೆಯರ ಸಾಂವಿಧಾನಿಕ ಹಕ್ಕು. ಆದ್ದರಿಂದ 3ನೇ ಮಗುವಿಗೂ ಅದನ್ನು ನೀಡಬೇಕು' ಎಂದು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ.
ತಮಿಳುನಾಡಿನಲ್ಲಿ ಜನಸಂಖ್ಯೆ ನಿಯಂತ್ರಣದ ದೃಷ್ಟಿಯಿಂದ 2 ಮಕ್ಕಳಿಗೆ ಮಾತ್ರ ಮಾತೃತ್ವದ ರಜೆ ನೀಡಲಾಗುತ್ತದೆ.
ಇದರ ಆಧಾರದಲ್ಲಿ, ಸರ್ಕಾರಿ ಶಿಕ್ಷಕಿಯೊಬ್ಬರಿಗೆ 3ನೇ ಮಗುವಿಗೆ ಮಾತೃತ್ವ ರಜೆ ನೀಡಬೇಕು ಎಂದು ಆದೇಶಿಸಲು ಮದ್ರಾಸ್ ಹೈಕೋರ್ಟ್ ನಿರಾಕರಿಸಿತ್ತು. ಅದರ ಆದೇಶವನ್ನು ಸುಪ್ರೀಂ ಕೋರ್ಟ್ ತಳ್ಳಿಹಾಕಿದೆ.
ಶಿಕ್ಷಕಿಯ 3ನೇ ಮಗು 2ನೇ ಮದುವೆಯಿಂದ ಆಗಿರುವುದನ್ನು ಗಮನಿಸಿರುವ ನ್ಯಾ। ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠ, 'ಮಹಿಳೆಯರ ಸಂತಾನೋತ್ಪತ್ತಿ ಆಯ್ಕೆಯಲ್ಲಿ ರಾಜ್ಯದ ಅನಗತ್ಯ ಹಸ್ತಕ್ಷೇಪ ಇರಬಾರದು. ಅವರ ಭಾವನಾತ್ಮಕ ಮತ್ತು ದೈಹಿಕ ಯೋಗಕ್ಷೇಮಕ್ಕೆ ಇದರಿಂದ ಅಡ್ಡಿಯಾಗುವುದರಿಂದ ಮಹಿಳೆಯರ ಘನತೆಗೆ ಹಾನಿಯಾಗುತ್ತದೆ' ಎಂದು ಅಭಿಪ್ರಾಯಪಟ್ಟಿದೆ.
'ಈಗ ಮಹಿಳೆಯರು ಉದ್ಯೋಗ ಕ್ಷೇತ್ರದ ಗಣನೀಯ ಭಾಗವಾಗಿದ್ದಾರೆ. ಅವರನ್ನು ಗೌರವ ಮತ್ತು ಘನತೆಯಿಂದ ನಡೆಸಿಕೊಳ್ಳಬೇಕು. ಸ್ತ್ರೀಯರಿಗೆ ಸಾಮಾಜಿಕ ನ್ಯಾಯ ಒದಗಿಸಲು, ಹೆರಿಗೆ ಸಮಯದಲ್ಲಿ ಕುಂದಿದ ಶಕ್ತಿಯನ್ನು ಮರುಪೂರಣಗೊಳಿಸಲು, ಮಗುವಿನ ಪಾಲನೆ ಮಾಡಲು, ಕೆಲಸದ ವಿಷಯದಲ್ಲಿ ತಮ್ಮ ದಕ್ಷತೆಯನ್ನು ಹಿಂದಿನಂತೆ ಕಾಯ್ದುಕೊಳ್ಳಲು ಅನುವು ಮಾಡಿಕೊಡಲು ಮಾತೃತ್ವ ರಜೆ ನೀಡಲಾಗುತ್ತದೆ' ಎಂದು ಹೇಳಿದೆ.
ಕನ್ನಡತಿ ನ್ಯಾ। ಬಿ.ವಿ.ನಾಗರತ್ನ ಕೊಲಿಜಿಯಂಗೆ ನೇಮಕ
ನವದೆಹಲಿ : ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎ.ಎಸ್.ಓಕಾ ನಿವೃತ್ತಿ ಹಿನ್ನೆಲೆಯಲ್ಲಿ ಕೊಲಿಜಿಯಂನಲ್ಲಿ ತೆರವಾಗಿರುವ ಸ್ಥಾನಕ್ಕೆ ಕರ್ನಾಟಕದವರಾದ ನ್ಯಾ। ಬಿ.ವಿ.ನಾಗರತ್ನ ಸದಸ್ಯರಾಗಿ ನೇಮಕಗೊಂಡಿದ್ದಾರೆ.
ಹೈಕೋರ್ಟು ಹಾಗೂ ಸುಪ್ರೀಂ ಕೋರ್ಟಿಗೆ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡುವ ಸಮಿತಿಗೆ ಕೊಲಿಜಿಂ ಎನ್ನುತ್ತಾರೆ. ಸುಪ್ರೀಂ ಕೋರ್ಟ್ನ 5ನೇ ಹಿರಿಯ ನ್ಯಾಯಾಧೀಶರಾಗಿರುವ ನ್ಯಾ। ನಾಗರತ್ನ ಮೇ 25 ರಿಂದ ಅಧಿಕೃತವಾಗಿ ಕೊಲಿಂಜಿಯಂ ಭಾಗವಾಗಲಿದ್ದಾರೆ. ಅವರು 2027ರ ಆ.29ರಂದು ನಿವೃತ್ತರಾಗಲಿದ್ದು, ಆ ತನಕ ಕೊಲಿಜಿಯಂನಲ್ಲಿ ಇರಲಿದ್ದಾರೆ. ಈ ಪ್ರಕಾರ ಸಮಿತಯ್ಲ್ಲಿ ಸಿಜೆಐ ಬಿ.ಆರ್.ಗವಾಯಿ, ನ್ಯಾ। ಸೂರ್ಯಕಾಂತ್, ನ್ಯಾ। ವಿಕ್ರಮ್ ನಾಥ್, ನ್ಯಾ। ಜೆ.ಕೆ. ಮಹೇಶ್ವರಿ ಹಾಗೂ ನ್ಯಾ। ನಾಗರತ್ನ ಅವರು ಇರಲಿದ್ದಾರೆ.
ನ್ಯಾ। ಬಿ.ವಿ. ನಾಗರತ್ನ ಅವರು ಬೆಂಗಳೂರಿನಲ್ಲಿ ವಕೀಲರಾಗಿ ತಮ್ಮ ವೃತ್ತಿ ಜೀವನ ಆರಂಭಿಸಿದ್ದರು. ಸುಪ್ರೀಂ ನ್ಯಾಯಾಧೀಶರಾಗಿ ಅವರ ಅಧಿಕಾರವಧಿ 2027ರ ಅ.29ರ ತನಕ ಇದೆ. ನಿವೃತ್ತಿಗೂ ಮುನ್ನ 2027ರ ಸೆ.23ರಿಂದ ಅವರಿಗೆ ಸುಪ್ರೀಂ ಸಿಜೆಐ ಆಗುವ ಅವಕಾಶವಿದೆ. ಈ ಮೂಲಕ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಾಮೂರ್ತಿಯಾಗಿ ಇತಿಹಾಸ ನಿರ್ಮಿಸಲಿದ್ದಾರೆ.




