ನವದೆಹಲಿ : ಭಾರತ-ಪಾಕಿಸ್ತಾನದ ನಡುವೆ ದೊಡ್ಡ ಮಟ್ಟದ ಸಂಘರ್ಷ ನಡೆದು, ಕದನ ವಿರಾಮ ಘೋಷಣೆಯಾಗಿದೆ. ಸೇನಾ ಸಂಘರ್ಷದ ಸಂದರ್ಭದಲ್ಲಿ ನಿಯೋಜಿಸಲಾಗಿದ್ದ ಸೇನಾ ಪಡೆಯನ್ನು ಮೇ ಅಂತ್ಯದೊಳಗೆ ಹಿಂಪಡೆಯಲು ಪಾಕಿಸ್ತಾನ ಮತ್ತು ಭಾರತ ಒಪ್ಪಿಕೊಂಡಿವೆ ಎಂದು ಪಾಕಿಸ್ತಾನದ ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆ ಹಿನ್ನೆಲೆಯಲ್ಲಿ ನಾಲ್ಕು ದಿನಗಳ ಕಾಲ ಭಾರತ ಮತ್ತು ಪಾಕಿಸ್ತಾನ ನಡುವೆ ಸೇನಾ ಸಂಘರ್ಷ ನಡೆದಿತ್ತು. ಅದರಲ್ಲಿ 70 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅನಿರೀಕ್ಷಿತವಾಗಿ ಕದನ ವಿರಾಮವನ್ನು ಘೋಷಿಸಿದ ನಂತರ ಉಭಯ ರಾಷ್ಟ್ರಗಳ ಸೇನಾ ಕಾರ್ಯಾಚರಣೆ ದಿಢೀರನೆ ರದ್ದಾಗಿತ್ತು. ಆದ್ದರಿಂದ ಮೇ ಅಂತ್ಯದೊಳಗೆ ಸಂಘರ್ಷ ಪೀಡಿತ ಸ್ಥಳಗಳಲ್ಲಿ ನಿಯೋಜಿಸಲಾಗಿದ್ದ ಸೇನಾಪಡೆಯನ್ನು ಹಿಂಪಡೆಯಲಾಗುವುದು ಎಂದು ಹಿರಿಯ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜಿಸಲಾದ ಹೆಚ್ಚುವರಿ ಪಡೆಗಳು ಮತ್ತು ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಹಿಂಪಡೆಯಲು ಎರಡೂ ದೇಶಗಳು ಒಪ್ಪಿಕೊಂಡಿವೆ. ಗಡಿ ಸುತ್ತಮುತ್ತಲಿನ ಪ್ರದೇಶಗಳಿಂದ ಸೇನೆ ನಿಯೋಜನೆ ಕಡಿತಕ್ಕೆ ಕೂಡಲೇ ಕ್ರಮ ಕೈಗೊಳ್ಳಲು ಉಭಯ ರಾಷ್ಟ್ರಗಳು ಒಪ್ಪಿಕೊಂಡಿರುವುದಾಗಿ ಕಳೆದ ವಾರ ಭಾರತೀಯ ಸೇನೆ ಹೇಳಿದ ಬೆನ್ನಲ್ಲೇ ಇದೀಗ ಪಾಕಿಸ್ತಾನವೂ ಇದೇ ರೀತಿ ಹೇಳಿದೆ.
10 ದಿನಗಳಲ್ಲೇ ಸೇನಾ ಹಿಂತೆಗೆತ ಮುಗಿಸಬೇಕು ಎಂದು ಮೊದಲೇ ನಿರ್ಧರಿಸಲಾಗಿತ್ತು. ಆದರೆ ಕೆಲವೊಂದು ಸಣ್ಣ ಸಮಸ್ಯೆಗಳ ಕಾರಣಕ್ಕೆ ಸೇನಾ ಹಿಂತೆಗೆತ ವಿಳಂಬವಾಗಿದೆ ಎಂದು ಪಾಕ್ ಅಧಿಕಾರಿ ತಿಳಿಸಿದ್ದಾರೆ.




