HEALTH TIPS

ಕುಂಬಳೆಯಲ್ಲಿ ಕಿರಿದಾದ 'ದ್ವಿಮುಖ' ರಸ್ತೆ: ಅಪಾಯ ಮತ್ತು ಸಂಚಾರ ದಟ್ಟಣೆ ತೀವ್ರ

ಕುಂಬಳೆ: ಇಲ್ಲಿಯ ರೈಲ್ವೇ ನಿಲ್ದಾಣ ಸಮೀಪದ ಅಂಡರ್‍ಪಾಸ್ ಮೂಲಕ ಬಸ್ ನಿಲ್ದಾಣಕ್ಕೆ ತೆರಳುವ ಸರ್ವಿಸ್ ರಸ್ತೆಯನ್ನು ಎರಡೂ ದಿಕ್ಕುಗಳಲ್ಲಿ ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, ಕುಂಬಳೆಯಲ್ಲಿ ಪ್ರಯಾಣದ ತೊಂದರೆಗಳು ಹೆಚ್ಚುತ್ತಿವೆ. ಇದರ ವಿರುದ್ಧ ವ್ಯಾಪಾರಿಗಳು ಮತ್ತು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದರೂ, ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

ಮೂರು ದಿನಗಳ ಹಿಂದೆ, ಮಂಗಳೂರಿಗೆ ತೆರಳುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ ಮತ್ತು ಟೆಂಪೋ ವ್ಯಾನ್ ರಾತ್ರಿ ಇಲ್ಲಿ ಡಿಕ್ಕಿ ಹೊಡೆದಿದೆ. ಇದರ ಪರಿಣಾಮವಾಗಿ, ಈ 'ದ್ವಿಮುಖ' ರಸ್ತೆಯಲ್ಲಿ ಭಾರಿ ಸಂಚಾರ ದಟ್ಟಣೆ ಉಂಟಾಗಿದೆ.


ಸಂಚಾರ ನಿಯಂತ್ರಿಸಲು ಯಾರೂ ಇಲ್ಲದ ಕಾರಣ ವಾಹನ ಮಾಲೀಕರ ನಡುವೆ ವಾಗ್ವಾದಗಳು ಸಾಮಾನ್ಯ. ಇದು ಘರ್ಷಣೆಗೆ ಕಾರಣವಾಗುವ ಭಯ ಸ್ಥಳೀಯರಲ್ಲಿದೆ. ಇಲ್ಲಿ ಸಂಚಾರ ದಟ್ಟಣೆ ದಿನೇ ದಿನೇ ತೀವ್ರವಾಗಿದೆ.

ಈ ಕಿರಿದಾದ ಸರ್ವೀಸ್ ರಸ್ತೆಯಲ್ಲಿ ಎರಡೂ ದಿಕ್ಕುಗಳಲ್ಲಿ ವಾಹನ ಸಂಚಾರ ಅಪಘಾತಗಳಿಗೆ ಆಹ್ವಾನ ನೀಡುತ್ತದೆ ಎಂದು ವ್ಯಾಪಾರಿಗಳು ಮತ್ತು ಸ್ಥಳೀಯರು ಈಗಾಗಲೇ ಅಧಿಕಾರಿಗಳಿಗೆ ತಿಳಿಸಿದ್ದರು. ಆದರೆ ಕುಂಬಳೆ ಪೇಟೆಗೆ ಸಂಬಂಧಿಸಿದ ಯಾವುದೇ ದೂರುಗಳಿಗೆ ಅಧಿಕಾರಿಗಳು ಕಿವಿಗೊಡಲಿಲ್ಲ. ಸಾರ್ವಜನಿಕ ಪ್ರತಿನಿಧಿಗಳೂ ಕ್ಲಪ್ತ ಸಮಯಕ್ಕೆ ಸಾಕಷ್ಟು ಗಮನ ಹರಿಸಿಲ್ಲ. ಇದು ಪ್ರಸ್ತುತ ದುಃಸ್ಥಿತಿಗೆ ಕಾರಣವಾಗಿದೆ.

ರಾಷ್ಟ್ರೀಯ ಹೆದ್ದಾರಿಯಿಂದ ಕುಂಬಳೆ ಪೇಟೆಗೆ ನೇರ ಮಾರ್ಗವನ್ನು ಮುಚ್ಚಿದ ನಂತರ ಈ ಸರ್ವೀಸ್ ರಸ್ತೆಯನ್ನು 'ದ್ವಿಮುಖ' ವ್ಯವಸ್ಥೆಯಾಗಿ ಪರಿವರ್ತಿಸಲಾಯಿತು. ಪ್ರಸ್ತುತ ಸಂಚಾರ ದಟ್ಟಣೆಗೆ ಪ್ರಮುಖ ಕಾರಣವೆಂದರೆ ಎರಡು ಬಸ್‍ಗಳು ಅಥವಾ ದೊಡ್ಡ ವಾಹನಗಳು ಈ ಕಿರಿದಾದ ರಸ್ತೆಯ ಮೂಲಕ ಏಕಕಾಲದಲ್ಲಿ ಹಾದುಹೋಗುವುದು ಕಷ್ಟಕರವಾಗಿದೆ.

ಏತನ್ಮಧ್ಯೆ, ಈ ಪ್ರದೇಶದಲ್ಲಿ ಪಾದಚಾರಿಗಳಿಗೆ ಪಾದಚಾರಿ ಮಾರ್ಗದ ಕೊರತೆಯು ಶಾಲೆಗಳ ಪುನರಾರಂಭದ ಬಳಿಕ ವಿದ್ಯಾರ್ಥಿಗಳು ಸೇರಿದಂತೆ ಎಲ್ಲರಿಗೂ ಹೆಚ್ಚಿನ ತೊಂದರೆ ಸೃಷ್ಟಿಸಲಿದೆ ಎಂದು ಸ್ಥಳೀಯರು ಹೇಳುತ್ತಾರೆ.

ರಾಷ್ಟ್ರೀಯ ಹೆದ್ದಾರಿ ಕುಸಿತದಲ್ಲಿ ಕೇಂದ್ರದ ಕಠಿಣ ಕ್ರಮ; ಎಂಜಿನಿಯರ್ ವಜಾ, ಯೋಜನಾ ನಿರ್ದೇಶಕರನ್ನು ಅಮಾನತು:

 ಈ ಮಧ್ಯೆ ಮಲಪ್ಪುರಂನ ಕೂರಿಯಾಡ್‍ನಲ್ಲಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆ ಕುಸಿತದ ಘಟನೆಯಲ್ಲಿ ಕೇಂದ್ರ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ. ಕೇಂದ್ರ ಮೇಲ್ಮೈ ಸಾರಿಗೆ ಇಲಾಖೆಯು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (ಎನ್.ಎಚ್.ಎ.ಐ-ನೇಶನಲ್ ಹೈವೇ ಅಥೋರಿಟಿ ಆಫ್ ಇಂಡಿಯ) ಸ್ಥಳದ ಎಂಜಿನಿಯರ್ ಅನ್ನು ಗುರುವಾರ ಜಾಗೊಳಿಸಿದೆ ಮತ್ತು ಯೋಜನಾ ನಿರ್ದೇಶಕರನ್ನು ಅಮಾನತುಗೊಳಿಸಿದೆ. ಗುತ್ತಿಗೆದಾರನು ಕುಸಿದ ಫ್ಲೈಓವರ್ ಅನ್ನು ತನ್ನ ಸ್ವಂತ ಖರ್ಚಿನಲ್ಲಿ ಪುನರ್ನಿರ್ಮಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ರಾಷ್ಟ್ರೀಯ ಹೆದ್ದಾರಿ 66 ಕೋಝಿಕ್ಕೋಡ್ ಮಂಗಳೂರಿನ 17 ಸ್ಥಳಗಳಲ್ಲಿ ಒಡ್ಡುಗಳ ನಿರ್ಮಾಣದ ಕುರಿತು ಕೇಂದ್ರವು ನೇಮಿಸಿದ ತಜ್ಞರ ಸಮಿತಿಯು ಅಧ್ಯಯನ ನಡೆಸಲಿದೆ. ಈ ಸಮಿತಿಯ ವರದಿಯ ಆಧಾರದ ಮೇಲೆ ಅಧಿಕಾರಿಗಳ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಿದೆ. 

ಅಪಘಾತದ ವಿವರಗಳು:

ನಿರ್ಮಾಣದ ಅಂತಿಮ ಹಂತದಲ್ಲಿರುವ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ, ಕೊಟ್ಟಕ್ಕಲ್ ಮತ್ತು ತೆಂಜಿಪಾಲಂ ನಡುವಿನ ಕಕ್ಕಾಡ್ ಬಳಿಯ ಕುರಿಯಾಡ್ ಮೈದಾನದ ಮೂಲಕ ಹಾದುಹೋಗುವ ವಿಭಾಗದಲ್ಲಿ ರಸ್ತೆ ಕುಸಿದಿದೆ. ರಸ್ತೆ ಮತ್ತು ಸರ್ವಿಸ್ ರಸ್ತೆ ಸುಮಾರು 250 ಮೀಟರ್‍ಗಳಷ್ಟು ಕುಸಿದಿದೆ. ಸರ್ವಿಸ್ ರಸ್ತೆಯಲ್ಲಿ ಹಾದುಹೋಗುತ್ತಿದ್ದ ಕಾರಿನ ಮೇಲೆ ಇಂಟರ್‍ಲಾಕ್ ಬ್ಲಾಕ್‍ಗಳು ಬಿದ್ದಾಗ ಮೂವರು ಮಕ್ಕಳು ಸೇರಿದಂತೆ ಎಂಟು ಜನರು ಅಲ್ಪಸ್ವಲ್ಪ ಗಾಯಗೊಂಡಿದ್ದಾರೆ. ಕಾರಿನ ಮುಂಭಾಗ ಮತ್ತು ಕಿಟಕಿಗಳು ಮುರಿದುಹೋಗಿವೆ. ಅಪಘಾತದ ನಂತರ ಕಾರಿನ ಹಿಂದಿನಿಂದ ಹಾರಿ ಹೊಲಕ್ಕೆ ಪ್ರವೇಶಿಸಿದ ಮತ್ತೊಬ್ಬ ವ್ಯಕ್ತಿಯೂ ಗಾಯಗೊಂಡಿದ್ದಾರೆ. ಇತರ ಎರಡು ಕಾರುಗಳು ಸರ್ವಿಸ್ ರಸ್ತೆಯಲ್ಲಿದ್ದರೂ, ಯಾವುದೇ ದೊಡ್ಡ ಹಾನಿಯಾಗಿಲ್ಲ. ರಸ್ತೆ ನಿರ್ಮಾಣ ಸ್ಥಳಕ್ಕೆ ತರಲಾದ ಮಣ್ಣು ತೆಗೆಯುವ ಯಂತ್ರವೂ ಅಪಘಾತದಲ್ಲಿ ಹಾನಿಗೊಳಗಾಗಿದೆ.

ಈ ಘಟನೆಯು ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ನಿರ್ಮಾಣದ ಗುಣಮಟ್ಟದ ಬಗ್ಗೆ ಗಂಭೀರ ಕಳವಳವನ್ನು ಹುಟ್ಟುಹಾಕುತ್ತದೆ. ತಜ್ಞರ ಸಮಿತಿಯ ಅಧ್ಯಯನ ವರದಿಯು ಮುಂದಿನ ದಿನಗಳಲ್ಲಿ ನಿರ್ಮಾಣದಲ್ಲಿನ ಲೋಪಗಳ ಕುರಿತು ಹೆಚ್ಚಿನ ಸ್ಪಷ್ಟತೆಯನ್ನು ನೀಡುವ ನಿರೀಕ್ಷೆಯಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries