ನವದೆಹಲಿ: 'ಪಹಲ್ಗಾಮ್ ಉಗ್ರ ದಾಳಿಯನ್ನು ನಡೆಸಿ ಉದ್ವಿಗ್ನತೆಯನ್ನು ಸೃಷ್ಟಿಸಿದ್ದು ಪಾಕಿಸ್ತಾನ. 'ಆಪರೇಷನ್ ಸಿಂಧೂರ' ಕಾರ್ಯಾಚರಣೆ ಮೂಲಕ ನಾವು ಇದಕ್ಕೆ ಪ್ರತ್ಯುತ್ತರ ನೀಡಿದ್ದೇವೆ ಅಷ್ಟೆ. ಆದ್ದರಿಂದ ಉದ್ವಿಗ್ನತೆಯನ್ನು ಶಮನಗೊಳಿಸುವ ಆಯ್ಕೆ ಅದರದ್ದು' ಎಂದು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಂ ಮಿಸ್ರಿ ಹೇಳಿದರು.
ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರೊಂದಿಗೆ ಮಿಸ್ರಿ ಅವರು ಗುರುವಾರ ಮಾಧ್ಯಮಗೋಷ್ಠಿ ನಡೆಸಿ, ಭಾರತದ ಬುಧವಾರ ರಾತ್ರಿ ನಡೆಸಿದ ಕಾರ್ಯಾಚರಣೆ ಸೇರಿದಂತೆ ಉದ್ವಿಗ್ನ ಸ್ಥಿತಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ಮಾಹಿತಿ ಹಂಚಿಕೊಂಡರು.
'ಭಾರತದ ಪ್ರತಿಕ್ರಿಯೆಯು ಉದ್ವಿಗ್ನತೆಯನ್ನು ಸೃಷ್ಟಿಸುವಂತಿರಲಿಲ್ಲ. ನಿಖರವಾದ ರೀತಿಯಲ್ಲಿ ನಾವು ಪ್ರತಿಕ್ರಿಯೆ ನೀಡಿದ್ದೇವೆ. ಉದ್ವಿಗ್ನತೆಯನ್ನು ಉಂಟುಮಾಡುವುದು ನಮ್ಮ ಉದ್ದೇಶವೂ ಆಗಿರಲಿಲ್ಲ. ಪಾಕಿಸ್ತಾನದ ಯಾವುದೇ ಸೇನಾ ನೆಲೆಯನ್ನು ನಾವು ಗುರಿಯಾಗಿಸಿಲ್ಲ. ಭಯೋತ್ಪಾದಕರ ಸೌಕರ್ಯಗಳನ್ನು ಮಾತ್ರವೇ ಗುರಿಯಾಗಿಸಿಕೊಂಡಿದ್ದೆವು. ಆದರೆ, ಪಾಕಿಸ್ತಾನದ ದಾಳಿಯು ನಮ್ಮ ನಾಗರಿಕರನ್ನು ಗುರಿಯಾಗಿಸಿದೆ' ಎಂದರು.
'ಪಹಲ್ಗಾಮ್ ದಾಳಿಯ ಹೊಣೆಯನ್ನು 'ದಿ ರೆಸಿಸ್ಟೆಂಟ್ ಫೋರ್ಸ್' ಹೊತ್ತುಕೊಂಡಿದೆ. ಆದರೂ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಈ ಸಂಘಟನೆಯ ಹೆಸರು ಪ್ರಸ್ತಾಪಿಸಿದ್ದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿತ್ತು. ಪಾಕಿಸ್ತಾನವು ಜಗತ್ತಿನ ಭಯೋತ್ಪಾದನೆಯ ಕೇಂದ್ರ ಸ್ಥಾನ ಎನ್ನುವುದಕ್ಕೆ ಹಲವು ಉದಾಹರಣೆಗಳಿವೆ. ಈ ವಿಚಾರಗಳನ್ನು ಖುದ್ದು ಅವರ ದೇಶದ ರಕ್ಷಣಾ ಹಾಗೂ ವಿದೇಶಾಂಗ ಸಚಿವರೇ ಒಪ್ಪಿಕೊಂಡಿದ್ದಾರೆ. ಬಿನ್ ಲಾಡೆನ್ನನ್ನು ಹುತಾತ್ಮ ಎಂದು ಕರೆದದ್ದು ಯಾರು ಎಂದು ಎಲ್ಲರಿಗೂ ತಿಳಿದಿದೆ' ಎಂದರು.
ವಿಕ್ರಂ ಮಿಸ್ರಿ ಭಾರತದ ವಿದೇಶಾಂಗ ಕಾರ್ಯದರ್ಶಿಪಾಕಿಸ್ತಾನದಲ್ಲಿ ನಾಗರಿಕ ಮೃತದೇಹಗಳನ್ನು ಅವರ ರಾಷ್ಟ್ರಧ್ವಜದಲ್ಲಿ ಸುತ್ತಿ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು. ನಮಗೆ ತಿಳಿದಿರುವಂತೆ ನಮ್ಮ ದಾಳಿಯಲ್ಲಿ ಮೃತಪಟ್ಟವರು ಭಯೋತ್ಪಾದಕರು. ಭಯೋತ್ಪಾದಕರ ಅಂತ್ಯಸಂಸ್ಕಾರಕ್ಕೆ ಸರ್ಕಾರಿ ಗೌರವ ನೀಡುವುದು ಬಹುಶಃ ಪಾಕಿಸ್ತಾನದಲ್ಲಿ ನಡೆಸಿಕೊಂಡು ಬರುತ್ತಿರುವ ಪದ್ಧತಿ ಇರಬಹುದು. ಇಂಥ ಪದ್ಧತಿ ನಮಗೆ ಅರ್ಥವಾಗುವುದಿಲ್ಲ




