ನವದೆಹಲಿ: ಅರುಣಾಚಲದ ಕೆಲವು ಸ್ಥಳಗಳಿಗೆ ಮರುನಾಮಕರಣ ಮಾಡುವ ಚೀನಾದ ಪ್ರಯತ್ನಗಳನ್ನು ಭಾರತ ಬುಧವಾರ ತಿರಸ್ಕರಿಸಿದೆ.
ಚೀನಾ ಯತ್ನಗಳು ನಮ್ಮ ಗಮನಕ್ಕೆ ಬಂದಿವೆ, ಅರುಣಾಚಲ ಭಾರತದ ರಾಜ್ಯವಾಗಿದ್ದು ಅವರ ನಿಷ್ಪ್ರಯೋಜಕ, ಅಸಂಬದ್ಧ, ಅವಿವೇಕದ ಪ್ರಯತ್ನಗಳು ಸಫಲವಾಗುವುದಿಲ್ಲ ಎಂದು ರಣಧೀರ್ ಜೈಸ್ವಾಲ್ ಹೇಳಿದ್ದಾರೆ.
ಅರುಣಾಚಲ ಪ್ರದೇಶ ಎಂದಿಗೂ ಭಾರತದ ಅವಿಭಾಜ್ಯ ಹಾಗೂ ಬೇರ್ಪಡಿಸಲಾಗದ ಭಾಗವಾಗಿದೆ. ವಾಸ್ತವವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ ಎಂದ ಜೈಸ್ವಾಲ್, ಚೀನಾದ ವ್ಯರ್ಥ ಪ್ರಯತ್ನಗಳನ್ನು ತಿರಸ್ಕರಿಸಿದರು.
ಈಶಾನ್ಯ ಭಾರತದ ರಾಜ್ಯವಾದ ಅರುಣಾಚಲ ಪ್ರದೇಶ ತನ್ನ ಭೂಭಾಗ ಎಂದು ಚೀನಾ ಪ್ರತಿಪಾದಿಸುತ್ತಿದ್ದು ಪದೇ ಪದೇ ಅಲ್ಲಿನ ಕೆಲವು ಸ್ಥಳಗಳಿಗೆ ಮರುನಾಮಕರಣ ಮಾಡಿದ ನಕ್ಷೆಯನ್ನು ಬಿಡುಗಡೆ ಮಾಡುತ್ತಿದೆ. ಕಳೆದ ವರ್ಷ ಕೂಡ ಚೀನಾ ಇಂತಹ ಪಯತ್ನ ಮಾಡಿತ್ತು.






