ಕಾಸರಗೋಡು: ಪಾಕಿಸ್ತಾನದ ಭಯೋತ್ಪಾದನಾ ಚಟುವಟಿಕೆಗಳ ವಿರುದ್ಧ ಭಾರತದ ಹೋರಾಟಕ್ಕೆ ಕೇರಳ ಕೇಂದ್ರೀಯ ವಿಶ್ವವಿದ್ಯಾಲಯವು ತನ್ನ ಸಂಪೂರ್ಣ ಬೆಂಬಲ ಪ್ರಕಟಿಸಿದೆ. ಸೇನೆ ಮತ್ತು ಸರ್ಕಾರದ ಕ್ರಮಗಳಿಗೆ ಬೆಂಬಲ ಸೂಚಿಸಿ ವಿಶ್ವ ವಿದ್ಯಾಲಯದ ಕ್ಯಾಂಪಸ್ನಲ್ಲಿ ರಾಷ್ಟ್ರೀಯ ಸೇವಾ ಯೋಜನೆ(ಎನ್ನೆಸ್ಸೆಸ್)ನೇತೃತ್ವದಲ್ಲಿ 'ರಾಷ್ಟ್ರ ಮೊದಲು'ಎಂಬ ಅಬಿಯಾನದೊಂದಿಗೆ ಮಾನವ ಸರಪಳಿ ನಿರ್ಮಿಸಲಾಯಿತು. ವಿಶ್ವ ವಿದ್ಯಾಲಯದ ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ತ್ರಿವರ್ಣ ಧ್ವಜವನ್ನು ಹಿಡಿದು ಮೆರವಣಿಗೆ ನಡೆಸಿದರು. ಆಪರೇಷನ್ ಸಿಂಧೂರ್ ಮೂಲಕ ಪಾಕಿಸ್ತಾನಕ್ಕೆ ಆಘಾತಕಾರಿ ಹೊಡೆತ ನೀಡಿರುವ ಭಾರತೀಯ ಸೇನೆಯ ಕಾಯಚರಣೆ ಅತ್ಯಂತ ಶ್ಲಾಘನೀಯ. ನಾಗರಿಕರ ಜೀವಕ್ಕೆ ಕಿಂಚಿತ್ತೂ ಹಾನಿಯೆಸಗದೆ, ಭಯೋತ್ಪಾದಕರನ್ನು ಮಾತ್ರ ಗುರಿಯಾಗಿಸಿಕೊಂಡು ಭಾರತೀಯ ಸೇನೆಯು ನಿಖರವಾದ ದಾಳಿ ನಡೆಸಿರುವ ಸೈನಿಕರ ಶೌರ್ಯಯುತ ಕಾರ್ಯಾಚರಣೆ ವಿಶ್ವಕ್ಕೆ ಮಾದರಿಯಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಪ್ರಗತಿಯ ಪ್ರತೀಕ ಇದಾಗಿದೆ. ಭಾರತದ ಏಕತೆ ಮತ್ತು ಸಮಗ್ರತೆಗಾಗಿ ಎಲ್ಲರೂ ಒಟ್ಟಗಿ ನಿಲ್ಲಬೇಕು ಮತ್ತು ದೇಶವನ್ನು ಪೂರ್ಣ ಹೃದಯದಿಂದ ಬೆಂಬಲಿಸಬೇಕು ಎಂದು ವಿಶ್ವ ವಿದ್ಯಾಲಯದ ಉಪಕುಲಪತಿ ಡಾ. ಸಿದ್ದು ಪಿ.ಅಲಗೂರ್ ತಿಳಿಸಿದರು.
ದೇಶವನ್ನು ರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಘಿದೆ. ದೇಶದ ಗಡಿ ಕಾಯಲು ಸೇನೆಯು ಮುಂಚೂಣಿಯಲ್ಲಿರುತ್ತದೆ. ಈ ಸಂದರ್ಭ ಸೇನೆ ಮತ್ತು ದೇಶಕ್ಕೆ ನಾವು ಯಾವ ರೀತಿ ಸಹಾಯ ಮಾಡಬಹುದು ಎಂಬುದರ ಕುರಿತು ಯೋಚಿಸಬೇಕು. ಎಲ್ಲರ ಬೆಂಬಲದಿಂದ ಮಾತ್ರ ದೇಶವು ಬಿಕ್ಕಟ್ಟು ನಿವಾರಿಸಲು ಸಾಧ್ಯ ಎಂಬುದಾಗಿ ವಾಯುಪಡೆಯ ಮಾಜಿ ಅಧಿಕಾರಿ ಸ್ಕ್ವಾಡ್ರನ್ ಲೀಡರ್ ಕೆ. ನಾರಾಯಣನ್ ನಾಯರ್ ಹೇಳಿದರು. ಸುಳ್ಳು ಮಾಹಿತಿ ಹರಡದೆ, ಅಂತಹ ಪ್ರಚಾರಕ್ಕೆ ಬಲಿಯಾಗದೆ ದೇಶಕ್ಕೆ ಸಂಪೂರ್ಣ ಬೆಂಬಲ ನೀಡಲುಪ್ರತಿಯೊಬ್ಬ ಪ್ರಜೆ ಮುಂದಗಬೇಕು ಎಂದು ಅವರು ಸೂಚಿಸಿದರು.
ಪರೀಕ್ಷಾ ನಿಯಂತ್ರಕ ಡಾ. ಆರ್. ಜಯಪ್ರಕಾಶ್, ಡೀನ್ಗಳು, ವಿಭಾಗಗಳ ಮುಖ್ಯಸ್ಥರು ಪಾಲ್ಗೊಂಡಿದ್ದರು. ಪ್ರಭಾರ ಕುಲಸಚಿವ ಪೆÇ್ರ. ರಾಜೇಂದ್ರ ಪಿಲಾಂಗಟ್ಟೆ ಸ್ವಾಗತಿಸಿದರು ಮತ್ತು ಎನ್ನೆಸ್ಸೆಸ್ ಕಾರ್ಯಕ್ರಮ ಸಂಯೋಜಕ ಡಾ. ಎಸ್. ಅನ್ಬಳಗಿ ವಂದಿಸಿದರು.





