ನವದೆಹಲಿ: ಪಹಲ್ಗಾಮ್ ದಾಳಿಗೆ 'ಆಪರೇಷನ್ ಸಿಂಧೂರ್' ಮೂಲಕ ಪ್ರತೀಕಾರ ತೆಗೆದುಕೊಂಡಿರುವ ಕೇಂದ್ರ ಸರ್ಕಾರವು ರಾಜತಾಂತ್ರಿಕ ಕಾರ್ಯಾಚರಣೆಯ ಭಾಗವಾಗಿ, ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನೆಯ ಮುಖವನ್ನು ವಿಶ್ವವೇದಿಕೆಯಲ್ಲಿ ಬಹಿರಂಗಪಡಿಸಲು ಸರ್ವ ಪಕ್ಷಗಳ ನಿಯೋಗವನ್ನು ವಿವಿಧ ದೇಶಗಳಿಗೆ ಮೇ 22 ಅಥವಾ 23ರಂದು ಕಳುಹಿಸಿಕೊಡಲಿದೆ.
ವಿರೋಧ ಪಕ್ಷ ಕಾಂಗ್ರೆಸ್ ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಸಂಸದರು, ಹಿರಿಯ ನಾಯಕರು ನಿಯೋಗದಲ್ಲಿ ಇರುತ್ತಾರೆ. ತಮ್ಮ ಪಕ್ಷಗಳ ಸದಸ್ಯರನ್ನು ನಿಯೋಗದಲ್ಲಿ ಕಳುಹಿಸಿಕೊಡಲು ರಾಜಕೀಯ ಪಕ್ಷಗಳು ಸಮ್ಮತಿಸಿವೆ ಎಂದು ಮೂಲಗಳು ತಿಳಿಸಿವೆ.
5ರಿಂದ 6 ಸದಸ್ಯರಿರುವ ನಿಯೋಗಗಳು 10 ದಿನಗಳ ಕಾಲ ವಿವಿಧ ದೇಶಗಳಿಗೆ ಭೇಟಿ ನೀಡಲಿವೆ. ಸರ್ಕಾರವು ನಿಗದಿಪಡಿಸಿದಂತೆ, ಸಂಸದರು ವಿವಿಧ ದೇಶಗಳಿಗೆ ಭೇಟಿ ನೀಡಿ, ಅಲ್ಲಿನ ರಾಜಕೀಯ ಪಕ್ಷಗಳು ಮತ್ತು ವಿವಿಧ ಗುಂಪುಗಳೊಂದಿಗೆ ಸಮಾಲೋಚನೆ ನಡೆಸಲಾಗುತ್ತದೆ. ನಿಯೋಗವು ತೆರಳುವ ಮುನ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯವು (ಎಂಇಎ) ಸದಸ್ಯರಿಗೆ ಅಗತ್ಯ ಮಾಹಿತಿ ಒದಗಿಸಲಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ವಿವಾದಾತ್ಮಕ ಹೇಳಿಕೆಗಳ ಆಧಾರದ ಮೇಲೆ ಕಾಶ್ಮೀರ ಸಮಸ್ಯೆಯನ್ನು ಅಂತರರಾಷ್ಟ್ರೀಯಗೊಳಿಸಲು ಪಾಕಿಸ್ತಾನ ನಡೆಸುತ್ತಿರುವ ಪ್ರಯತ್ನವನ್ನು ತಡೆಯಲು ಕೇಂದ್ರ ಸರ್ಕಾರವು ಈ ಕಸರತ್ತು ನಡೆಸುತ್ತಿದೆ. ಭಾರತವು ಗಡಿಯಾಚೆಗಿನ ಭಯೋತ್ಪಾದನೆಯ ಬಲಿಪಶುವಾಗಿದೆ. ಪಹಲ್ಗಾಮ್ನಲ್ಲಿ ಭಾರತವನ್ನು ಹೇಗೆ ಗುರಿಯಾಗಿಸಲಾಗಿತ್ತು ಎಂದು ನಿಯೋಗಗಳು ವಿವರಿಸಲಿವೆ ಎಂದು ಮೂಲಗಳು ತಿಳಿಸಿವೆ.
ಆಪರೇಷನ್ ಸಿಂಧೂರವು ಭಯೋತ್ಪಾದಕರ ನೆಲೆಗಳನ್ನು ಗುರಿಯಾಗಿಸಿ ಹತ್ತಿಕ್ಕುವುದಾಗಿದೆ ಎನ್ನುವುದನ್ನು ನಿಯೋಗಗಳು ಆತಿಥೇಯ ದೇಶಗಳಿಗೆ ಮನವರಿಕೆ ಮಾಡುವ ನಿರೀಕ್ಷೆಯಿದೆ.
ಬಿಜೆಪಿ, ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಎನ್ಸಿಪಿ(ಎಸ್ಪಿ), ಜೆಡಿಯು, ಬಿಜೆಡಿ, ಸಿಪಿಎಂ ಮತ್ತು ಇತರ ಕೆಲವು ಪಕ್ಷಗಳ ಸಂಸದರು ಈ ನಿಯೋಗಗಳ ಭಾಗವಾಗಲಿದ್ದಾರೆ.




