HEALTH TIPS

'Operation Sindoor'ಗೆ ನೌಕಾಪಡೆ ಸೇರಿಸಿಕೊಂಡಿದ್ದರೆ ಪಾಕಿಸ್ತಾನ ನಾಲ್ಕು ಹೋಳಾಗುತ್ತಿತ್ತು: ರಾಜನಾಥ್ ಸಿಂಗ್

ಪಣಜಿ: "ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯನ್ನು ಎದುರಿಸಲು ಭಾರತ ಎಲ್ಲಾ ವಿಧಾನಗಳನ್ನು ಬಳಸುತ್ತದೆ. ಪಾಕ್ ಯಾವುದೇ ದುಷ್ಟ ಅಥವಾ ಅನೈತಿಕ ಕೃತ್ಯಗಳಲ್ಲಿ ತೊಡಗಿದರೆ, ಈ ಬಾರಿ ಅದು ಭಾರತೀಯ ನೌಕಾಪಡೆಯ ಸಂಪೂರ್ಣ ಗುಂಡಿನ ದಾಳಿಯನ್ನು ಎದುರಿಸಬೇಕಾಗುತ್ತದೆ" ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಶಕ್ರವಾರ ಎಚ್ಚರಿಕೆ ನೀಡಿದ್ದಾರೆ.

ಇಂದು ಗೋವಾ ಕರಾವಳಿಯಲ್ಲಿ ಭಾರತದ ಮೊದಲ ಸ್ವದೇಶಿ ವಿಮಾನವಾಹಕ ನೌಕೆ ಐಎನ್‌ಎಸ್ ವಿಕ್ರಾಂತ್‌ನಲ್ಲಿ ಅಧಿಕಾರಿಗಳು ಮತ್ತು ನಾವಿಕರನ್ನು ಉದ್ದೇಶಿಸಿ ಮಾತನಾಡಿದ ರಾಜನಾಥ್ ಸಿಂಗ್ ಅವರು, ಪಾಕಿಸ್ತಾನ ಪದೇ ಪದೇ ಮಾತುಕತೆಗೆ ಮುಂದಾಗುತ್ತಿರುವ ಕುರಿತು ಭಾರತದ ನಿಲುವನ್ನು ದೃಢವಾಗಿ ಪುನರುಚ್ಚರಿಸಿದರು. "ಮಾತುಕತೆ ನಡೆಸುವುದಾದರೆ ಅದು ಭಯೋತ್ಪಾದನೆ ಮತ್ತು ಪಾಕ್ ಆಕ್ರಮಿತ ಕಾಶ್ಮೀರ(ಪಿಒಕೆ) ಬಗ್ಗೆ ಮಾತ್ರ ಇರುತ್ತದೆ. ಪಾಕಿಸ್ತಾನ ಮಾತುಕತೆಯ ಬಗ್ಗೆ ಗಂಭೀರವಾಗಿದ್ದರೆ ಹಫೀಜ್ ಸಯೀದ್ ಮತ್ತು ಮಸೂದ್ ಅಜರ್‌ನಂತಹ ಭಯೋತ್ಪಾದಕರನ್ನು ಭಾರತಕ್ಕೆ ಹಸ್ತಾಂತರಿಸಬೇಕು" ಎಂದು ಹೇಳಿದರು.

ಈ ಇಬ್ಬರೂ ವ್ಯಕ್ತಿಗಳು ಭಾರತದ 'ಮೋಸ್ಟ್ ವಾಂಟೆಡ್ ಟೆರರಿಸ್ಟ್' ಪಟ್ಟಿಯಲ್ಲಿದ್ದಾರೆ. ಮಾತ್ರವಲ್ಲದೆ ವಿಶ್ವಸಂಸ್ಥೆಯಿಂದ ಗೊತ್ತುಪಡಿಸಿದ ಭಯೋತ್ಪಾದಕರೂ ಆಗಿದ್ದಾರೆ ಎಂದು ಸಿಂಗ್ ಗಮನಸೆಳೆದರು.

2008ರ ಮುಂಬೈ ದಾಳಿಯ ಆರೋಪಿ ತಹವ್ವೂರ್ ರಾಣಾ ಅವರನ್ನು ಇತ್ತೀಚೆಗೆ ಭಾರತಕ್ಕೆ ಹಸ್ತಾಂತರಿಸಿರುವುದನ್ನು ಎತ್ತಿ ತೋರಿಸಿದ ರಾಜನಾಥ್ ಸಿಂಗ್, ಹಫೀಜ್ ಸಯೀದ್ ಕೂಡ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದರು.

ಪಹಲ್ಗಾಮ್‌ನಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಪ್ರಾರಂಭಿಸಲಾದ ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ ಎಂದ ರಕ್ಷಣಾ ಸಚಿವರು, "ಇದು ಕೇವಲ ವಿರಾಮ, ಎಚ್ಚರಿಕೆ". "ಪಾಕಿಸ್ತಾನ ಅದೇ ತಪ್ಪನ್ನು ಪುನರಾವರ್ತಿಸಿದರೆ, ಭಾರತದ ಪ್ರತಿಕ್ರಿಯೆ ಇನ್ನಷ್ಟು ಕಠಿಣವಾಗಿರುತ್ತದೆ" ಎಂದು ಎಚ್ಚರಿಸಿದರು.

ಭಾರತೀಯ ಸಶಸ್ತ್ರ ಪಡೆಗಳು ನಡೆಸಿದ ಆಪರೇಷನ್ ಸಿಂಧೂರ್, ಪಾಕಿಸ್ತಾನ ಮತ್ತು ಪಿಒಕೆಯಲ್ಲಿನ ಭಯೋತ್ಪಾದಕ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಈ ಕಾರ್ಯಾಚರಣೆಯು ಕೇವಲ ಮಿಲಿಟರಿ ತಂತ್ರವಲ್ಲ, ಬದಲಾಗಿ ಭಯೋತ್ಪಾದನೆಯ ಬಗ್ಗೆ ಭಾರತದ ಶೂನ್ಯ ಸಹಿಷ್ಣುತಾ ನೀತಿಯ ಸ್ಪಷ್ಟ ಘೋಷಣೆಯಾಗಿದೆ ಎಂದು ಸಿಂಗ್ ಒತ್ತಿ ಹೇಳಿದರು.

ಇದೇ ವೇಳೆ ಭಾರತೀಯ ನೌಕಾಪಡೆಯ ಅಪ್ರತಿಮ ಶಕ್ತಿಯ ಬಗ್ಗೆಯೂ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ ರಕ್ಷಣಾ ಸಚಿವರು, ಆಪರೇಷನ್ ಸಿಂಧೂರ್ ಸಮಯದಲ್ಲಿ ನೌಕಾಪಡೆಯು, ವಾಯುಪಡೆ ಮತ್ತು ಸೇನೆಯೊಂದಿಗೆ ಸೇರಿಕೊಂಡಿದ್ದರೆ, ಪಾಕಿಸ್ತಾನವು 1971 ಕ್ಕಿಂತ ಕೆಟ್ಟ ಪರಿಣಾಮ ಎದುರಿಸುತ್ತಿತ್ತು ಮತ್ತು ಪಾಕಿಸ್ತಾನ ನಾಲ್ಕು ಹೋಳಾಗುತ್ತಿತ್ತು ಎಂದು ಹೇಳಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries