ಕಾಸರಗೋಡು: ದೇಲಂಪಾಡಿ ಪಂಚಾಯಿತಿ ವ್ಯಾಪ್ತಿಯ ಜನತೆಯ ಜೀವ ಮತ್ತು ಆಸ್ತಿಯನ್ನು ರಕ್ಷಿಸಲು ಸೌರ ಬೇಲಿ, ಬೀದಿ ದೀಪ ಮತ್ತು ಎಚ್ಚರಿಕೆ ವ್ಯವಸ್ಥೆಗಳನ್ನು ಅಳವಡಿಸುವ ಮೂಲಕ ವನ್ಯಜೀವಿಗಳಿಂದ ಉಂಟಾಗುತ್ತಿರುವ ಉಪಟಳ ನಿಯಂತ್ರಿಸಲು ಸರ್ಕಾರ ಮುಂದಗಬೇಕು ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಅಧ್ಯಕ್ಷೆ ಎಂ.ಎಲ್. ಅಶ್ವಿನಿ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಅವರು ಕಾಡಾನೆ ಸೇರಿದಂತೆ ವನ್ಯಮೃಗಗಳ ಉಪಟಳ ತಡೆಗಟ್ಟುವ ನಿಟ್ಟಿನಲ್ಲಿ ಬಿಜೆಪಿ ದೇಲಂಪಾಡಿ ಪ್ರದೇಶ ಸಮಿತಿಯ ನೇತೃತ್ವದಲ್ಲಿ ಪರಪ್ಪದಲ್ಲಿರುವ ಅರಣ್ಯ ಇಲಾಖೆ ಮರದ ಡಿಪೆÇೀ ವಠಾರದಲ್ಲಿ ನಡೆದ ಪ್ರತಿಭಟನ ಧರಣಿ ಉದ್ಘಾಟಿಸಿ ಮಾತನಾಡಿದರು. ಕಾಡು ಪ್ರಾಣಿಗಳ ದಾಳಿಯಿಂದ ಬೆಳೆ ಹಾನಿಯಾದಾಗ, ಅತ್ಯಲ್ಪ ಪರಿಹಾರ ಮಾತ್ರ ನೀಡಲಾಗುತ್ತದೆ. ಈ ಮೊತ್ತವನ್ನು ನೀಡಲೂ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ. ವನ್ಯಮೃಗಗಳ ದಾಳಿಯಿಂದ ಬೆಳೆ, ಆಸ್ತಿ ಹಾನಿಗೀಡಾದ ಕೃಷಿಕರನ್ನು ಸರ್ಕಾರ ಕ್ಷುಲ್ಲಕವಾಗಿ ಪರಿಗಣಿಸುತ್ತಿದೆ. ಉದುಮ ಕ್ಷೇತ್ರದಲ್ಲಿ ಕಾಡು ಪ್ರಾಣಿಗಳ ದಾಳಿಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಅಲ್ಲಿನ ಶಾಸಕರು ಖುದ್ದು ಭೇಟಿ ನೀಡಿ ಸಮಗ್ರ ಮಾಹಿತಿ ಸಂಗ್ರಹಿಸಿ ಅಗತ್ಯ ಕ್ರಮಕ್ಕಾಗಿ ಸರ್ಕಾರವನ್ನು ಆಗ್ರಹಿಸಬೇಕು. ವಿಧಾನಸಭೆಯಲ್ಲಿ ಈ ಬಗ್ಗೆ ವಿಷಯ ಮಂಡಿಸಿ ಪರಿಹಾರ ತಂದುಕೊಡಲು ಸಿದ್ಧರಾಗಬೇಕು ಎಂದು ಆಗ್ರಹಿಸಿದರು.
ದೇಲಂಪಾಡಿ ಕ್ಷೇತ್ರ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಅಧ್ಯಕ್ಷತೆ ವಹಿಸಿದ್ದರು. ಮುಳಿಯಾರ್ ಮಂಡಲ ಸಮಿತಿ ಅಧ್ಯಕ್ಷ ದಿಲೀಪ್ ಪಲ್ಲಂಚಿ, ಚಂದ್ರಶೇಖರನ್, ಶಿವರಾಮ, ಉದಯ ಮೊದಲಾದವರು ಉಪಸ್ಥಿತರಿದ್ದರು. ಮಹಿಳೆಯರು ಸೇರಿದಂತೆ ಹಲವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.






