ಈ ದಾಳಿಯಲ್ಲಿ ಸುಮಾರು 20 ಜನರು ಮೃತಪಟ್ಟಿದ್ದು, ನೂರಾರು ನಾಗರಿಕರು ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಇರಾನ್ನ ದಾಳಿಗೆ ಪ್ರತಿಕಾರವಾಗಿ ಇಸ್ರೇಲ್ ಮಿಲಿಟರಿಯು ಕ್ಷಿಪಣಿ ಹಾಗೂ ಡ್ರೋನ್ ದಾಳಿಯನ್ನು ನಡೆಸುತ್ತಿದೆ. ಎರಡೂ ದೇಶಗಳು ಭಾರೀ ಪ್ರಮಾಣದ ಶಸ್ತ್ರಾಸ್ತಗಳನ್ನು ಬಳಸಲು ಮುಂದಾಗಿವೆ. ಯುದ್ಧ ನಿಲ್ಲಿಸುವಂತೆ ಜಾಗತಿಕ ನಾಯಕರ ಮನವಿ ಬಳಿಕವೂ ಎರಡೂ ದೇಶಗಳು ರಕ್ತಸಿಕ್ತ ಸಂಘರ್ಷವನ್ನು ಮುಂದುವರಿಸಿವೆ.
ಭಾರತ ಹಾಗೂ ಪಾಕಿಸ್ತಾನದ ನಡುವೆ ನಡೆಸಿದ ಮಧ್ಯಸ್ಥಿಕೆಯಂತೆ ಇರಾನ್ ಮತ್ತು ಇಸ್ರೇಲ್ ನಡುವೆ ಮಾತಕತೆ ನಡೆಸಲು ನಾನು ಸಿದ್ದವೆಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದಕ್ಕೆ ಎರಡೂ ದೇಶಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಎರಡೂ ದೇಶಗಳು ಸಂಘರ್ಷವನ್ನು ಮುಂದುವರಿಸಲಿವೆ ಎಂಬ ಅಭಿಪ್ರಾಯವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.
ಪಾಕ್ನಿಂದ ಪರಮಾಣು ದಾಳಿ?
ಈ ಎಲ್ಲ ಬೆಳವಣಿಗೆಗಳ ನಡುವೆಯೇ ಇರಾನ್ ಹೊಸದೊಂದು ಬಾಂಬ್ ಸಿಡಿಸಿದೆ. ಇರಾನ್ ಮೇಲೆ ಅಣು ಬಾಂಬಿನ ದಾಳಿ ನಡೆಸಿದರೆ, ಪಾಕಿಸ್ತಾನ ಇಸ್ರೇಲ್ ಮೇಲೆ ಪರಮಾಣು ದಾಳಿ ನಡೆಸಲಿದೆ ಎಂದು ಇರಾನಿನ ಹಿರಿಯ ಮಿಲಿಟರಿ ಜನರಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಇರಾನ್ನ ಹಿರಿಯ ಮಿಲಿಟರಿ ಕಮಾಂಡರ್ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿಯ ಸದಸ್ಯ ಮೊಹ್ಸೆನ್ ರೆಝಾಯಿ, ಇಸ್ರೇಲ್ ಪರಮಾಣು ಕ್ಷಿಪಣಿಗಳನ್ನು ಬಳಸಿದರೆ, ಪರಮಾಣು ಶಸ್ತ್ರಾಸ್ತ್ರಗಳ ಸಹಾಯವನ್ನು ನೀಡುವುದಾಗಿ ಪಾಕಿಸ್ತಾನವು ಇರಾನ್ಗೆ ಭರವಸೆ ನೀಡಿದೆ ಎಂದು ಹೇಳಿದ್ದಾರೆ.
ಭಾನುವಾರ ಇರಾನಿನ ಸರ್ಕಾರಿ ದೂರದರ್ಶನಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ಇಸ್ರೇಲ್ ವಿರುದ್ಧ ಪರಮಾಣು ಶಸ್ತ್ರಾಸ್ತ್ರಗಳನ್ನು ಬಳಸುವ ಸಾಧ್ಯತೆಯನ್ನು ದೃಢೀಕರಿಸುವ ಯಾವುದೇ ಹೇಳಿಕೆಯನ್ನು ಪಾಕಿಸ್ತಾನ ಸರ್ಕಾರ ಅಥವಾ ಅಲ್ಲಿನ ಮಿಲಿಟರಿ ಈ ವರೆಗೆ ನೀಡಿಲ್ಲ.
ಇಸ್ರೇಲ್ ದೇಶವು ಇರಾನ್ ಮೇಲೆ ಅಣು ಬಾಂಬ್ ಬಳಸಿದರೆ, ಇಸ್ರೇಲ್ ಮೇಲೆ ಪರಮಾಣು ಬಾಂಬ್ ಮೂಲಕ ದಾಳಿ ಮಾಡುವುದಾಗಿ ಪಾಕಿಸ್ತಾನವು ನಮಗೆ ಭರವಸೆ ನೀಡಿದೆ ಎಂದು ರೆಝಾಯಿ ಹೇಳಿದ್ದಾರೆ. ಈ ಹೇಳಿಕೆಯು ಜಗತ್ತಿನಾದ್ಯಂತ ಭಾರೀ ತಲ್ಲಣ ಸೃಷ್ಟಿಸಿದೆ.
ಇರಾನಿಗೆ ಬೆಂಬಲ ವ್ಯಕ್ತಪಡಿಸಿದ ಪಾಕ್
ಇರಾನಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿರುವ ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಅಸಿಫ್, ಪಾಕಿಸ್ತಾನವು ಇರಾನ್ಗೆ ಸಂಪೂರ್ಣ ಬೆಂಬಲ ನೀಡಲಿದೆ. ಎಲ್ಲ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್ ದಾಳಿಗಳ ವಿರುದ್ಧ ಒಂದಾಗಬೇಕಿದೆ ಎಂದು ಕರೆ ನೀಡಿದ್ದಾರೆ.
'ಈ ಸಂಕಷ್ಟದ ಸಮಯದಲ್ಲಿ ಇರಾನಿನೊಂದಿಗೆ ನಾವು ಎಲ್ಲ ರೀತಿಯಲ್ಲಿಯೂ ನಿಲ್ಲುತ್ತೇವೆ. ನಾವು ಇರಾನಿನ ಹಿತಗಳನ್ನು ಕಾಪಾಡಲಿದ್ದೇವೆ. ಇರಾನಿನವರು ನಮ್ಮ ಸಹೋದರರು. ಅವರ ನೋವು, ದುಃಖ, ಸಂಕಷ್ಟ ನಮ್ಮದೇ ಆಗಿದೆ' ಎಂದು ಹೇಳಿದ್ದಾರೆ.
'ಇಸ್ಲಾಮಾಬಾದ್, ಯೆಮೆನ್ ಮತ್ತು ಪ್ಯಾಲೆಸ್ತೇನ್ ಸೇರಿದಂತೆ ಇತರ ಮುಸ್ಲಿಂ ಪ್ರದೇಶಗಳಲ್ಲಿಯೂ ಇಸ್ರೇಲ್ ಬಲತ್ಕಾರ ನಡೆಸಿದೆ. ಇಂದು ನಾವು ಮೌನವಾಗಿದ್ದರೆ, ಮುಂದಿನ ದಿನಗಳಲ್ಲಿ ನಾವು ಎಲ್ಲವನ್ನೂ ಕಳೆದುಕೊಳ್ಳಬೇಕಾಗುತ್ತದೆ' ಎಂದು ಅವರು ಹೇಳಿದ್ದಾರೆ.




