ರಾಯಪುರ: ನಕ್ಸಲರು 8 ತಿಂಗಳ ಹಿಂದೆ ಬಾಂಬ್ ದಾಳಿ ನಡೆಸಿ ಭದ್ರತಾ ಸಿಬ್ಬಂದಿಯನ್ನು ಹತ್ಯೆಗೈದಿದ್ದ ಛತ್ತೀಸಗಢದ ಬಿಜಾಪುರ ಜಿಲ್ಲೆಯ ಗ್ರಾಮವೊಂದರಲ್ಲಿ ಮೊಬೈಲ್ ಟವರ್ ಅನ್ನು ನಿರ್ಮಿಸಲಾಗಿದೆ.
'ಅಂಬೇಲಿ ಗ್ರಾಮದಲ್ಲಿ ಸೋಮವಾರದಿಂದ ಮೊಬೈಲ್ ಟವರ್ ಕಾರ್ಯಾಚರಿಸುತ್ತಿದ್ದು, ಅಂಬೇಲಿ ಮತ್ತು ನೆರೆಯ ಗ್ರಾಮಗಳ ಜನರು ಮೊಬೈಲ್ ಸಂಪರ್ಕ ಮತ್ತು ಇಂಟರ್ನೆಟ್ ಸೇವೆಗಳನ್ನು ಪಡೆಯುತ್ತಿದ್ದಾರೆ' ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
'ರಾಜ್ಯ ಸರ್ಕಾರದ 'ನಿಯದ್ ನೆಲ್ಲನರ್' ಯೋಜನೆ ಮತ್ತು ಕೇಂದ್ರ ಸರ್ಕಾರದ ಪ್ರಾಯೋಜಿತ 'ಯುನಿವರ್ಸಲ್ ಸರ್ವಿಸ್ ಆಬ್ಲಿಗೇಷನ್ ಫಂಡ್' (ಯುಎಸ್ಒಎಫ್) ಯೋಜನೆಯಡಿ ಮೊಬೈಲ್ ಟವರ್ ಸ್ಥಾಪಿಸಲಾಗಿದೆ' ಎಂದು ತಿಳಿಸಿದ್ದಾರೆ.
ನಕ್ಸಲ್ ಪೀಡಿತ ಗ್ರಾಮಗಳಲ್ಲಿ ಆಸ್ಪತ್ರೆ, ಶಾಲೆ, ಅಂಗನವಾಡಿ ಸೇರಿದಂತೆ ಅಗತ್ಯ ಮೂಲಸೌಕರ್ಯ ವ್ಯವಸ್ಥೆಗಳನ್ನು ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




