ಮಂಜೇಶ್ವರ : ವರ್ಕಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಜೆಪದವು ಎಂಬಲ್ಲಿ ಚಿಣ್ಣರ ಬೆಳವಣಿಗೆಗೆ ಆಧುನಿಕ ಸೌಕರ್ಯಗಳೊಂದಿಗೆ ಕೂಡಿದ ಸ್ಮಾರ್ಟ್ ಅಂಗನವಾಡಿ ಕಟ್ಟಡಕ್ಕೆ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಗುರುವಾರ ಬೆಳಿಗ್ಗೆ ಶಂಕುಸ್ಥಾಪನೆ ನಡೆಸಿದರು.
ವರ್ಕಾಡಿ ಗ್ರಾಮ ಪಂಚಾಯತಿು ಅಧ್ಯಕ್ಷೆ ಭಾರತಿ ಎಸ್. ಅಧ್ಯಕ್ಷತೆ ವಹಿಸಿದ್ದರು.
ಗ್ರಾಮೀಣ ಪ್ರದೇಶವಾಗಿರುವ ಇಲ್ಲಿಯ ಚಿಣ್ಣರಿಗೆ ಶೈಕ್ಷಣಿಕ ಹಾಗೂ ಆಟದ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಸುರಕ್ಷಿತ ಹಾಗೂ ಆಧುನಿಕ ವಾತಾವರಣದಲ್ಲಿ ಚಿಣ್ಣರ ಬೆಳವಣಿಗೆಗೆ ಸಹಕಾರಿಯಾಗಲು ಹಾಗೂ ಸ್ಮಾರ್ಟ್ ತಂತ್ರಜ್ಞಾನ ಅಳವಡಿಕೆಯಿಂದ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಉದ್ದೇಶದಿಂದ ಇಲ್ಲಿಯ ಸ್ಥಳೀಯ ನಿವಾಸಿಗಳ ಬಹುಕಾಲದ ಬೇಡಿಕೆಯೊಂದು ಇದೀಗ ಸಾಕಾರಗೊಳ್ಳುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರು ಗ್ರಾಮೀಣ ಮಟ್ಟದಲ್ಲಿ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಈ ರೀತಿಯ ಸ್ಮಾರ್ಟ್ ಕಟ್ಟಡಗಳು ಅತ್ಯವಶ್ಯಕ. ಸರ್ಕಾರದ ಬದ್ಧತೆ ಪ್ರಕಾರ ಇವು ಸದೃಢ ಮೂಲಸೌಕರ್ಯಗಳನ್ನು ಒದಗಿಸುತ್ತವೆ. ನಿರ್ದಿಷ್ಟ ಗುರಿಯನ್ನು ಸಾಧಿಸಲು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.
ಈ ಸಂದರ್ಭ ಜನಪ್ರತಿನಿಧಿಗಳು, ರಾಜಕೀಯ ನೇತಾರರು ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.
ಕಜೆಪದವಿನಲ್ಲಿ ಶಂಕುಸ್ಥಾಪಣೆಗೊಂಡ ಈ ಯೋಜನೆ ಸ್ಥಳೀಯ ಅಭಿವೃದ್ಧಿಗೆ ಪ್ರೇರಕವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸ್ಮಾರ್ಟ್ ಸೇವೆಗಳನ್ನು ಗ್ರಾಮ ಮಟ್ಟದಲ್ಲೇ ಲಭ್ಯಗೊಳಿಸಲು ಪ್ರೇರಣೆಯಾಗಿದೆ. ಯೋಜನೆಯು ನಿರ್ಧಿಷ್ಟ ಅವಧಿಯಲ್ಲಿ ಪೂರ್ಣಗೊಳ್ಳುವ ಭರವಸೆ ಕೂಡಾ ಇದೆ.
ಈ ಸಂದರ್ಭ ಗ್ರಾ. ಪಂಚಾಯತಿ ಉಪಾಧ್ಯಕ್ಷ ಸಿದ್ದೀಖ್ ಪಾಡಿ, ಎ.ಎಲ್.ಎಂ.ಎಸ್ಟಿ ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ., ಸ್ಥಾಯೀ ಸಮಿತಿ ಅಧ್ಯಕ್ಷೆ ಗೀತಾ ಸಾಮಾನಿ, ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಪಿ.ಬಿ. ಅಬೂಬಕ್ಕರ್ ಪಾತೂರು, ಪಂ. ಕಾರ್ಯದರ್ಶಿ ಅಜಿತ್, ಐಸಿಡಿಎಸ್ ಮೇಲ್ವಿಚಾರಕಿ ಬಿಂದು, ಬಿ. ಆಹ್ಮದ್ ಕುಂಞ ಹಾಜಿ, ಇಬ್ರಾಹಿಂ ಮುಸ್ಲಿಯಾರ್, ಲತೀಫ್ ಕಜೆ, ರಾಜೇಶ್ವರಿ, ಶಶಿಕಲಾ ಹಾಗೂ ಅಭಿವೃದ್ಧಿ ಸಮಿತಿ ಸದಸ್ಯರು, ಕುಟುಂಬಶ್ರೀ ಸದಸ್ಯರು, ಸ್ಥಳೀಯರು ಸಹಿತ ನೂರಾರು ಮಂದಿ ಸಮಾರಂಭದಲ್ಲಿ ಪಾಲ್ಗೊಂಡರು. ಅಬ್ದುಲ್ ಮಜೀದ್ ಬಿ.ಎ. ಸ್ವಾಗತಿಸಿ, ಮಂಜುಳಾ ಹೆಚ್.ಕೆ. ವಂದಿಸಿದರು.

.jpg)
