HEALTH TIPS

ಶಿಕ್ಷಕರ ಪಾದ ತೊಳೆದ ವಿದ್ಯಾರ್ಥಿಗಳು: ಶಾಲೆಗಳ ವಿರುದ್ಧ ಶಿಕ್ಷಣ ಸಚಿವ ಗರಂ

ತಿರುವನಂತಪುರಂ: ಗುರು ಪೂರ್ಣಿಮಾ ಅಂಗವಾಗಿ ಏರ್ಪಡಿಸಿದ್ದ ಗುರುವಂದನಾ ಸಮಾರಂಭ ವೇಳೆ ಶಿಕ್ಷಕರ ಪಾದ ತೊಳೆಯುವಂತೆ ಕೇರಳದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳನ್ನು ಒತ್ತಾಯಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದು, ವಿವಾದಕ್ಕೆ ಎಡೆ ಮಾಡಿಕೊಟ್ಟಿದ್ದು, ಶಿಕ್ಷಣ ಸಚಿವ ವಿ. ಶಿವಕುಟ್ಟಿ ಗರಂ ಆಗಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ವರದಿ ನೀಡುವಂತೆ ಶಿಕ್ಷಣ ಇಲಾಖೆ ಮಹಾ ನಿರ್ದೇಶಕರಿಗೆ ಶಿವಕುಟ್ಟಿ ಸೂಚಿಸಿದ್ದಾರೆ. ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವೂ ಇದರಲ್ಲಿ ಮಧ್ಯಪ್ರವೇಶಿಸಿದೆ.

ಕಾಸರಗೋಡಿನ ಬಂದಡ್ಕದಲ್ಲಿನ ಸರಸ್ವತಿ ವಿದ್ಯಾಲಯ, ಮಾವೆಲಿಕರದ ವಿದ್ಯಾಧಿರಾಜ ವಿದ್ಯಾಪೀಠಂ ಸೈನಿಕ್‌ ಶಾಲೆ ಮತ್ತು ಶ್ರೀಕಂದಾಪುರಂನ ವಿವೇಕಾನಂದ ವಿದ್ಯಾಪೀಠಂ ಶಾಲೆಗಳಲ್ಲಿ ಆಯೋಜಿಸಿದ್ದ ಗುರುವಂದನಾ ಕಾರ್ಯಕ್ರಮದ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ವಿದ್ಯಾರ್ಥಿಗಳು ಶಿಕ್ಷಕರ ಪಾದ ತೊಳೆಯುತ್ತಿರುವುದು ವಿಡಿಯೊಗಳಲ್ಲಿದೆ.

ಕೇರಳದ ಪ್ರಗತಿಪರ ಸಮಾಜದಲ್ಲಿ ಮಕ್ಕಳು ಶಿಕ್ಷಕರ ಪಾದ ತೊಳೆಯುವಂತೆ ಮಾಡಿರುವುದನ್ನು ಒಪ್ಪಲಾಗದು ಎಂದು ಆಕ್ರೋಶ ವ್ಯಕ್ತಪಡಿಸಿರುವ ಶಿವಕುಟ್ಟಿ, ಇಂತಹ ಆಚರಣೆಗಳನ್ನು ತೊಡೆದುಹಾಕಬೇಕು ಎಂದು ಕರೆ ನೀಡಿದ್ದಾರೆ.

ಏತನ್ಮಧ್ಯೆ, ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಾಗೂ ಶಿಕ್ಷಕರ ಪಾದ ತೊಳೆಯುವಂತೆ ಯಾವ ವಿದ್ಯಾರ್ಥಿಗಳನ್ನು ಒತ್ತಾಯಿಸಿಲ್ಲ ಎಂಬುದಾಗಿ ಸಂಬಂಧಪಟ್ಟ ಶಾಲಾಡಳಿತಗಳು ತಿಳಿಸಿರುವುದಾಗಿ ವರದಿಯಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries