ಇಸ್ಲಾಮಾಬಾದ್: 'ಭಾರತ ಜೊತೆಗೆ ನಾಲ್ಕು ದಿನಗಳ ಕಾಲ ನಡೆದ ಸಂಘರ್ಷದ ವೇಳೆ ಪಾಕಿಸ್ತಾನಕ್ಕೆ ಬಾಹ್ಯ ನೆರವು ದೊರಕಿತ್ತು ಎಂಬುದು ವಾಸ್ತವದಲ್ಲಿ ತಪ್ಪು ಮಾಹಿತಿ' ಎಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಅಸೀಂ ಮುನೀರ್ ತಿಳಿಸಿದ್ದಾರೆ.
ಇಸ್ಲಾಮಾಬಾದ್ನಲ್ಲಿ ರಾಷ್ಟ್ರೀಯ ರಕ್ಷಣಾ ವಿಶ್ವವಿದ್ಯಾಲಯದಲ್ಲಿ ಪದವಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, 'ಪಾಕಿಸ್ತಾನದ ಸಾರ್ವಭೌಮತೆಯನ್ನು ದುರ್ಬಲಗೊಳಿಸುವ ಪ್ರಯತ್ನ ನಡೆಸಿದವರಿಗೆ ತ್ವರಿತವಾಗಿ ಪ್ರತಿದಾಳಿ ನಡೆಸುವ ಮೂಲಕ ಪ್ರತ್ಯುತ್ತರ ನೀಡಲಾಗಿದೆ.
'ಆಪರೇಷನ್ ಬುನ್ಯಾನ್ ಮರ್ಸೂಸ್' ಅನ್ನು ಸ್ವಂತ ಬಲದಿಂದಲೇ ಭಾರತದ ವಿರುದ್ಧ ಪ್ರತಿದಾಳಿ ನಡೆಸಲಾಗಿದೆ. ಬೇಜವಾಬ್ದಾರಿ ಹಾಗೂ ವಾಸ್ತವಿಕವಾಗಿ ತಪ್ಪು ಮಾಹಿತಿ ಮಾಹಿತಿ ಹರಡುತ್ತಿರುವುದು ಸರಿಯಲ್ಲ' ಎಂದು ಭಾರತಕ್ಕೆ ತಿರುಗೇಟು ನೀಡಿದ್ದಾರೆ.
ಕಳೆದ ವಾರ ದೆಹಲಿಯಲ್ಲಿ ಕಾರ್ಯಾಗಾರದಲ್ಲಿ ಮಾತನಾಡಿದ್ದ ಸೇನಾ ಉಪಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಹುಲ್ ಆರ್ ಸಿಂಗ್, 'ಆಪರೇಷನ್ ಸಿಂಧೂರ' ಹೋರಾಟದ ವೇಳೆ ಪಾಕಿಸ್ತಾನವು ಹೋರಾಟದ ಮುಂದಿನ ಮುಖವಾದರೆ, ಚೀನಾ ಎಲ್ಲ ರೀತಿಯ ಬೆಂಬಲ ಒದಗಿಸಿತ್ತು. ಟರ್ಕಿಯು ಸೇನಾ ಉಪಕರಣಗಳನ್ನು ಒದಗಿಸುವ ಮೂಲಕ ಪ್ರಮುಖ ಪಾತ್ರ ವಹಿಸಿತ್ತು' ಎಂದು ತಿಳಿಸಿದರು.
ಚೀನಾ ಸಮರ್ಥನೆ: 'ಚೀನಾ ಹಾಗೂ ಪಾಕಿಸ್ತಾನವು ಸಾಂಪ್ರದಾಯಿಕವಾಗಿ ಸ್ನೇಹ ಸಂಬಂಧವನ್ನು ಹೊಂದಿದೆ. ರಕ್ಷಣೆ ಹಾಗೂ ಭದ್ರತಾ ಸಹಕಾರವು ಮಾಮೂಲಿಯಾಗಿದ್ದು, ಮೂರನೇ ರಾಷ್ಟ್ರವನ್ನು ನಾವು ಎಂದಿಗೂ ಗುರಿಯಾಗಿಸಿಕೊಂಡಿಲ್ಲ' ಎಂದು ವಿದೇಶಾಂಗ ಇಲಾಖೆ ವಕ್ತಾರೆ ಮಾವೊ ನಿಂಗ್ ತಿಳಿಸಿದ್ದಾರೆ.




