ಕಾಸರಗೋಡು: ದಕ್ಷಿಣದ ಕಾಶಿ ಎಂದೇ ಖ್ಯಾತಿ ಪಡೆದಿರುವ ತೃಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನದ ಎದುರು ಸಮುದ್ರ ಕೊರೆತದಿಂದ ಕಾಸರಗೋಡು-ಕಾಞಂಗಾಡು ರಾಜ್ಯ ಹೆದ್ದಾರಿ ಅಪಾಯ ಎದುರಿಸಲು ಸರ್ಕಾರದ ನಿರ್ಲಕ್ಷ್ಯ ಧೋರಣೆ ಕಾರಣವಾಗಿರುವುದಾಗಿ ಬಿಜೆಪಿ ಕೋಯಿಕ್ಕೋಡ್ ವಲಯಾಧ್ಯಕ್ಷ ವಕೀಲ ಕೆ.ಶ್ರೀಕಾಂತ್ ತಿಳಿಸಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಈ ಪ್ರದೇಶದಲ್ಲಿ ಸಮುದ್ರ ಕೊರೆತವನ್ನು ತಡೆಗಟ್ಟಲು ಕ್ರಮ ಕೈಗೊಳ್ಳುವಂತೆ ಜನರು ಮತ್ತು ಮಾಧ್ಯಮಗಳು ನಿರಂತರ ಒತ್ತಾಯಿಸುತ್ತಾ ಬಂದಿದ್ದರೂ, ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಷಯದಲ್ಲಿ ಸಂಸದ ಮತ್ತು ಜಿಲ್ಲೆಯ ಶಾಸಕರು ಮಧ್ಯಪ್ರವೇಶಿಸಲು ವಿಫಲರಾಗಿದ್ದಾರೆ ಎಂದು ಅವರು ಆರೋಪಿಸಿದರು. ಈಗಾಗಲೇ ಕೆಎಸ್ಟಿಪಿ ರಸ್ತೆಯನ್ನು ಕಬಳಿಸುತ್ತಿರುವ ಸಮುದ್ರ, ಕೆಲವೇ ಮೀಟರ್ ಅಂತರದಲ್ಲಿರುವ ದೇವಸ್ಥಾನವನ್ನು ಸಮುದ್ರ ಆಪೋಶನತೆಗೆದುಕೊಳ್ಳುವ ದಿನ ದೂರವಿಲ್ಲ. ಜಿಲ್ಲೆಯ ಶಾಸಕರು ಹಾಗೂ ಸಂಸದ ಈ ಬಗ್ಗೆ ತುರ್ತು ಗಮನಹರಿಸಿ ಸರ್ಕಾರದ ಗಮನಸೆಳೆಯಬೇಕು. ರಾಷ್ಟ್ರೀಯ ಹೆದ್ದಾರಿಯಲ್ಲಿ ಷಟ್ಪಥ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಾಹನ ಚಾಲಕರು ಕೆಎಸ್ಟಿಪಿ ರಸ್ತೆಯನ್ನೇ ಹೆಚ್ಚಾಗಿ ಬಳಸುತ್ತಿದ್ದು, ರಸ್ತೆಯನ್ನು ಸಮುದ್ರ ಕಬಳಿಸಿರುವುದರಿಂದ ಸರ್ಕಾರ ಎಚ್ಚೆತ್ತುಕೊಂಡು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಅವರು ಒತ್ತಾಯಿಸಿದ್ದಾರೆ.





