HEALTH TIPS

ಇಂದಿನಿಂದ ಸಂಸತ್‌ ಮುಂಗಾರು ಅಧಿವೇಶನ: ವಿಮಾನ ಪತನ ಪ್ರಸ್ತಾಪಕ್ಕೆ ಸಜ್ಜು

ನವದೆಹಲಿ: ಅಹಮದಾಬಾದ್‌ನಲ್ಲಿ ಏರ್‌ ಇಂಡಿಯಾ ವಿಮಾನ ಬೋಯಿಂಗ್ 787-8 'ಡ್ರೀಮ್‌ಲೈನರ್' ಪತನಗೊಂಡ ನಂತರ ಉದ್ಭವಿಸಿರುವ ಹತ್ತಾರು ಪ್ರಶ್ನೆಗಳು, ಇಂದಿನಿಂದ (ಜುಲೈ 21) ಆರಂಭವಾಗಲಿರುವ ಸಂಸತ್‌ನ ಮುಂಗಾರು ಅಧಿವೇಶನದಲ್ಲಿ ಮತ್ತೆ ಪ್ರತಿಧ್ವನಿಸುವ ಎಲ್ಲ ಸಾಧ್ಯತೆ ನಿಚ್ಚಳವಾಗಿದೆ.

'ಡ್ರೀಮ್‌ಲೈನರ್' ವಿಮಾನ ಅಪಘಾತಕ್ಕೀಡಾಗಿರುವುದಕ್ಕೆ ವಿಧ್ವಂಸಕ ಕೃತ್ಯದ ಆಯಾಮವಿದೆಯೇ? ವಿಮಾನದ ಬ್ಲ್ಯಾಕ್‌ಬಾಕ್ಸ್‌ಅನ್ನು ಪರಿಶೀಲನೆಗಾಗಿ ಒಂದು ವೇಳೆ ವಿದೇಶಕ್ಕೆ ಕಳುಹಿಸಿದಲ್ಲಿ, ಅದರಲ್ಲಿನ ದತ್ತಾಂಶಕ್ಕೆ ಸಂಬಂಧಿಸಿ ಬೋಯಿಂಗ್‌ ಸಂಸ್ಥೆ ದುರುದ್ದೇಶದಿಂದ ಏನಾದರೂ ಮಾಡಬಹುದೇ? ವಿಮಾನಯಾನ ನಿಯಂತ್ರಿಸುವ ಸಂಸ್ಥೆಯ ವೈಫಲ್ಯಗಳು ಹಾಗೂ ಸುರಕ್ಷತೆಯ ಗುಣಮಟ್ಟ ಕುರಿತು ತನಿಖೆ ನಡೆಸುವುದಕ್ಕಾಗಿ ಜಂಟಿ ಸಂಸದೀಯ ಸಮಿತಿಯೊಂದನ್ನು ರಚಿಸಲಾಗುತ್ತದೆಯೇ' ಎಂಬಂತಹ ಪ್ರಶ್ನೆಗಳನ್ನು ಮಂಡಿಸಲು ವಿವಿಧ ಪಕ್ಷಗಳು ಮುಂದಾಗಿವೆ.

ಕಾಂಗ್ರೆಸ್‌, ಬಿಜೆಪಿ, ಟಿಎಂಸಿ, ಡಿಎಂಕೆ, ಜೆಡಿಯು, ಸಿಪಿಎಂ, ಸಿಪಿಐ, ಶಿವಸೇನಾ, ಜನಸೇನಾ ಹಾಗೂ ಎನ್‌ಸಿಪಿ(ಎಸ್‌ಪಿ) ಪಕ್ಷಗಳಿಗೆ ಸೇರಿದ 50 ಸಂಸದರು ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಶೂನ್ಯ ವೇಳೆ ವಿವಿಧ ವಿಚಾರಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲು ಸಜ್ಜಾಗಿದ್ದಾರೆ.

ಈ ಪೈಕಿ, ಏರ್‌ ಇಂಡಿಯಾ ವಿಮಾನ ಪತನಕ್ಕೆ ಸಂಬಂಧಿಸಿ ಲೋಕಸಭೆಯಲ್ಲಿ 23 ಪ್ರಶ್ನೆಗಳು ಹಾಗೂ ರಾಜ್ಯಸಭೆಯಲ್ಲಿ 11 ಪ್ರಶ್ನೆಗಳನ್ನು ಕೇಳಲಾಗುತ್ತದೆ.

ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಸುರಕ್ಷತೆಗೆ ಸಂಬಂಧಿಸಿ ಕನಿಷ್ಠ 7 ಪ್ರಶ್ನೆಗಳಿವೆ. ಆದರೆ, ಜೂನ್‌ 12ರಂದು ಅಹಮದಾಬಾದ್‌ನಲ್ಲಿ ಪತನಗೊಂಡ ಏರ್‌ ಇಂಡಿಯಾ ವಿಮಾನ ಕುರಿತು ಈ ಪ್ರಶ್ನೆಗಳಲ್ಲಿ ನೇರ ಪ್ರಸ್ತಾಪ ಇಲ್ಲ.

ನಾಗರಿಕ ವಿಮಾನಯಾನಕ್ಕೆ ಸಂಬಂಧಿಸಿದ ಪ್ರಶ್ನೆಗಳು ಪ್ರತಿ ಸೋಮವಾರ ರಾಜ್ಯಸಭೆಯಲ್ಲಿ ಹಾಗೂ ಗುರುವಾರಗಳಂದು ಲೋಕಸಭೆಯಲ್ಲಿ ತೆಗೆದುಕೊಳ್ಳುವುದನ್ನು ನಿಗದಿ ಮಾಡಲಾಗಿದೆ. ಹೀಗಾಗಿ, ಅಧಿವೇಶನದ ಮೊದಲ ದಿನವಾದ ಜುಲೈ 21ರಂದು ಸಂಸದರು ರಾಜ್ಯಸಭೆಯಲ್ಲಿ, ಏರ್‌ ಇಂಡಿಯಾ ವಿಮಾನ ಪತನ ಕುರಿತ ಪ್ರಶ್ನೆಗಳನ್ನು ಮುಂದಿಡುವ ಸಾಧ್ಯತೆಯೇ ಹೆಚ್ಚು.

ಅಲ್ಲದೇ, ವಿಮಾನ ಪತನ ಕುರಿತಾದ ಇತ್ತೀಚಿನ ಬೆಳವಣಿಗೆಗಳ ಕುರಿತು ಸಂಸದರು ಬರುವ ವಾರಗಳಲ್ಲಿ ಪ್ರಶ್ನೆಗಳನ್ನು ಕೇಳಬಹುದಾಗಿದೆ.

ಹಲವು ಪ್ರಶ್ನೆ: ವಿಮಾನ ಪತನಗೊಂಡ ನಂತರದ ದಿನಗಳಲ್ಲಿ, ವಿವಿಧ ಸಂಸದರು ಹಲವಾರು ಪ್ರಶ್ನೆಗಳನ್ನು ಕೇಳಿದ್ದರು.

ನಿರ್ದಿಷ್ಟ ದಿನಗಳಂದು ಪ್ರಸ್ತಾಪಿಸಲು ಉದ್ದೇಶಿಸಿದ ಪ್ರಶ್ನೆಗಳನ್ನು ಕನಿಷ್ಠ ಎರಡು ವಾರ ಮುಂಚಿತವಾಗಿ ಸಂಸದರು ಸ್ಲಲಿಸಬೇಕು. ಜುಲೈ 21 ಹಾಗೂ 24ರಂದು ಕೇಳುವ ಉದ್ದೇಶದಿಂದ ಸಲ್ಲಿಸಲಾಗಿರುವ ಪ್ರಶ್ನೆಗಳಲ್ಲಿ, ವಿಮಾನ ಅಪಘಾತ ತನಿಖಾ ಬ್ಯುರೊ(ಎಎಐಬಿ) ಸಲ್ಲಿಸಿರುವ ಪ್ರಾಥಮಿಕ ವರದಿ ಸೇರಿ ಇತ್ತೀಚಿನ ಬೆಳವಣಿಗೆಗಳನ್ನು ಉಲ್ಲೇಖಿಸಿಲ್ಲ.

'ಮುಖ್ಯ ತನಿಖಾಧಿಕಾರಿಯನ್ನು ಯಾಕೆ ನೇಮಕ ಮಾಡಿಲ್ಲ' ಎಂಬುದಾಗಿ ಕಾಂಗ್ರೆಸ್‌ ಸಂಸದ ಮನೀಷ್‌ ತಿವಾರಿ ಪ್ರಶ್ನಿಸಿದ್ದಾರೆ.

'ನಿಯಂತ್ರಕ ಸಂಸ್ಥೆಯ ವೈಫಲ್ಯ ಮತ್ತು ಸುರಕ್ಷತೆ ಗುಣಮಟ್ಟಗಳ ಪರಿಶೀಲನೆಗಾಗಿ ಜಂಟಿ ಸಂಸದೀಯ ಸಮಿತಿ ರಚಿಸುವ ಪ್ರಸ್ತಾವ ಸರ್ಕಾರದ ಮುಂದೆ ಇದೆಯೇ' ಎಂಬುದು ತಿವಾರಿ ಅವರ ಮತ್ತೊಂದು ಪ್ರಶ್ನೆಯಾಗಿದೆ.

ಏರ್‌ ಇಂಡಿಯಾವನ್ನು ಟಾಟಾ ಸಮೂಹ ತನ್ನ ತೆಕ್ಕೆಗೆ ತೆಗೆದುಕೊಂಡ ನಂತರ ವಿಮಾನಗಳ ಸುರಕ್ಷತೆ ಕುರಿತು ಡಿಜಿಸಿಎ ನಿರ್ಲಕ್ಷ್ಯ ವಹಿಸಿದೆ ಎಂದಿರುವ ಡಿಎಂಕೆ ಸಂಸದ ದಯಾನಿಧಿ ಮಾರನ್‌, ಈ ಕುರಿತು ಪ್ರಶ್ನೆ ಕೇಳಿದ್ದಾರೆ.

ಬಿಜೆಪಿಯ ರಾಜ್ಯಸಭಾ ಸಂಸದ ಅಶೋಕ ಚವಾಣ್ ಅವರಿಗೂ ಸೋಮವಾರ ಪ್ರಶ್ನೆ ಕೇಳಲು ಅವಕಾಶ ಲಭಿಸಿದ್ದರೆ, 24 ಪ್ರಶ್ನೆಗಳಿಗೆ ಲಿಖಿತವಾಗಿ ಉತ್ತರ ನೀಡಲಾಗುತ್ತಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries