HEALTH TIPS

ನಿರೀಕ್ಷೆ ಹೆಚ್ಚಿಸಿದ ಶುಕ್ಲಾ ಸಾಹಸ: ಜಿತೇಂದ್ರ ಸಿಂಗ್‌

ನವದೆಹಲಿ: ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್‌) 18 ದಿನ ಇದ್ದು, ಭೂಮಿಗೆ ಮಂಗಳವಾರ ಮರಳಿರುವ ವ್ಯೋಮಯಾನಿ, ಗ್ರೂಪ್‌ ಕ್ಯಾಪ್ಟನ್‌ ಶುಭಾಂಶು ಶುಕ್ಲಾ ಅವರ ಈ ಸಾಹಸ ಯಾನವು ಭಾರತದ ಮಹತ್ವಾಕಾಂಕ್ಷೆಯ ಮಾನವಸಹಿತ ಗಗನಯಾನ ಕುರಿತು ನಿರೀಕ್ಷೆ ಹೆಚ್ಚಿಸಿದೆ.

ಐಎಸ್‌ಎಸ್‌ಗೆ ತೆರಳಿ, ಅಲ್ಲಿ ಹಲವು ವೈಜ್ಞಾನಿಕ ಪ್ರಯೋಗಗಳನ್ನು ನಡೆಸಿದ ಬಳಿಕ ಶುಕ್ಲಾ ಯಶಸ್ವಿಯಾಗಿ ಭೂಮಿಗೆ ಮರಳಿದ್ಧಾರೆ. ಒಟ್ಟು ಈ 20 ದಿನಗಳ ಬಾಹ್ಯಾಕಾಶ ಯಾನದ ಅನುಭವವನ್ನು ಗಗನಯಾನ ಕಾರ್ಯಕ್ರಮಕ್ಕೆ ಬಳಸಿಕೊಳ್ಳಲು ಭಾರತ ಮುಂದಾಗಿದೆ.

ಭಾರತದ ಮೊದಲ ಮಾನವಸಹಿತ ಗಗನಯಾನವನ್ನು 2027ರ ಮೊದಲ ತ್ರೈಮಾಸಿಕದಲ್ಲಿ ಕಾರ್ಯಗತಗೊಳಿಸುವ ನಿರೀಕ್ಷೆ ಇದೆ. ಗಗನಯಾನಕ್ಕೆ ಆಯ್ಕೆಯಾಗಿರುವ ಭಾರತದ ವಾಯುಪಡೆಯ ನಾಲ್ವರು ಪೈಲಟ್‌ಗಳ ಪೈಕಿ ಶುಕ್ಲಾ ಕೂಡ ಒಬ್ಬರು.

ಐಎಸ್‌ಎಸ್‌ಗೆ ಕೈಗೊಂಡ ಯಾನಕ್ಕಾಗಿ ಶುಕ್ಲಾ ಅವರಿಗೆ ನಾಸಾ, ಆಯಕ್ಸಿಯಂ ಸ್ಪೇಸ್‌ ಹಾಗೂ ಸ್ಪೇಸ್‌ಎಕ್ಸ್‌ ಜಂಟಿಯಾಗಿ 10 ತಿಂಗಳು ತರಬೇತಿ ನೀಡಿದ್ದವು.

ಗಗನಯಾನಿಗಳನ್ನು ಹೊತ್ತ 'ಡ್ರ್ಯಾಗನ್‌ ಗ್ರೇಸ್‌' ಬಾಹ್ಯಾಕಾಶ ಕೋಶವನ್ನು ಶುಭಾಂಶು ಶುಕ್ಲಾ ಮುನ್ನಡೆಸಿದ್ದರು. ಇದು ಗಂಟೆಗೆ 28 ಸಾವಿರ ಕಿ.ಮೀ.ವೇಗದಲ್ಲಿ ಚಲಿಸಿತ್ತು.

ಆಗಸ್ಟ್‌ 17ರ ಹೊತ್ತಿಗೆ ಶುಕ್ಲಾ ಭಾರತಕ್ಕೆ:

'ಆಯಕ್ಸಿಯಂ-4' ಬಾಹ್ಯಾಕಾಶ ಕಾರ್ಯಕ್ರಮ ಕುರಿತಂತೆ ವರದಿಗಳನ್ನು ಒಪ್ಪಿಸುವ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಗಗನಯಾನಿ ಶುಭಾಂಶು ಶುಕ್ಲಾ ಅವರು ಆಗಸ್ಟ್‌ 17ರ ಹೊತ್ತಿಗೆ ಭಾರತಕ್ಕೆ ಮರಳುವರು ಎಂದು ಕೇಂದ್ರ ವಿಜ್ಞಾನ ಸಚಿವ ಜಿತೇಂದ್ರ ಸಿಂಗ್‌ ಮಂಗಳವಾರ ತಿಳಿಸಿದ್ಧಾರೆ. ಶುಕ್ಲಾ ಸೇರಿ ನಾಲ್ವರು ಗಗನಯಾತ್ರಿಗಳು ಭೂಮಿಗೆ ಮರಳುವುದರ ನೇರಪ್ರಸಾರವನ್ನು ಇಲ್ಲಿನ ಸಿಎಸ್‌ಐಆರ್‌ ಕೇಂದ್ರ ಕಚೇರಿಯಲ್ಲಿ ವೀಕ್ಷಿಸಿ ಅವರು ಮಾತನಾಡಿದರು. 'ಗುರುತ್ವಾಕರ್ಷಣ ಶಕ್ತಿಗೆ ಒಗ್ಗಿಕೊಳ್ಳುವುದಕ್ಕಾಗಿ ಅವರನ್ನು ಜುಲೈ 23ರವರೆಗೆ ಪ್ರತ್ಯೇಕವಾಗಿ ಇರಿಸಲಾಗುತ್ತದೆ. ಜುಲೈ 24ರಿಂದ ನಾಲ್ಕು ದಿನ ಇಸ್ರೊ ತಂಡದೊಂದಿಗೆ ಚರ್ಚೆ ನಡೆಯಲಿದೆ. ನಂತರ ಆಗಸ್ಟ್‌ 13ರವರೆಗೆ ಆಯಕ್ಸಿಯಂ ಸ್ಪೇಸ್‌ ಸ್ಪೇಸ್‌ಎಕ್ಸ್‌ ಹಾಗೂ ನಾಸಾ ಪ್ರತಿನಿಧಿಗಳೊಂದಿಗೆ ಮಾಹಿತಿ ಹಂಚಿಕೊಳ್ಳುವರು. ಹೀಗಾಗಿ ಆಗಸ್ಟ್‌ 17ರ ವೇಳೆಗೆ ಶುಕ್ಲಾ ಅವರು ಭಾರತಕ್ಕೆ ಮರಳುವ ನಿರೀಕ್ಷೆ ಹೊಂದಿದ್ದೇವೆ' ಎಂದು ಸಿಂಗ್‌ ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries