ಕಾಸರಗೋಡು: ಕೇರಳದ ಯುವಜನತೆ, ವಿದ್ಯಾರ್ಥಿಗಳು ಮತ್ತು ವೃದ್ಧರನ್ನು ಕೇರಳವನ್ನಾಳುವ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರ ವಂಚಿಸುತ್ತಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ. ಎಲ್. ಅಶ್ವಿನಿ ತಿಳಿಸಿದ್ದಾರೆ. ಅವರು ಕೇಂದ್ರ ಸರಕಾರದ ಜನಕಲ್ಯಾಣ ಯೋಜನೆಗಳನ್ನು ಬುಡಮೇಲು ಗೊಳಿಸುತ್ತಿರುವ ಕೇರಳದ ಎಡರಂಗ ಸರ್ಕಾರದ ವಿರುದ್ಧ ಬಿಜೆಪಿ ಜನಪ್ರತಿನಿಧಿಗಳ ನೇತೃತ್ವದಲ್ಲಿ ಕಾಸರಗೋಡಿನ ಹೊಸ ಬಸ್ ನಿಲ್ದಾಣ ವಠಾರದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನಾ ಧರಣಿ ಉದ್ಘಾಟಿಸಿ ಮಾತನಾಡಿದರು.
ಎಪ್ಪತ್ತು ವರ್ಷ ದಾಟಿದ ಹಿರಿಯರಿಗೆ ಅರ್ಹವಾದ, ಕೇಂದ್ರ ಸರ್ಕಾರ ಜ್ಯಾರಿಗೊಳಿಸಿದ ಆಯುಷ್ಮಾನ್ ಭಾರತ್ ಇನ್ಸೂರೆನ್ಸ್ ಯೋಜನೆಯ ಶೇ. 40ರಷ್ಟು ಮೊತ್ತ ಆಯಾ ರಾಜ್ಯಗಳು ಭರಿಸಬೇಕೆಂಬ ನಿಬಂಧನೆ ಪಾಲಿಸದೆ ಇರುವುದರಿಂದ ಕೇರಳದಲ್ಲಿ ಯೋಜನೆಯೇ ಅನುಷ್ಠಾನಗೊಳ್ಳದೆ ಜನತೆಗೆ ಮಹತ್ವದ ಯೋಜನೆಯೊಂದು ಕೈತಪ್ಪುವಂತಾಘಿದೆ. ಉನ್ನತ ಶಿಕ್ಷಣಕ್ಕಾಗಿ ಕೇರಳದಲ್ಲಿ ಸೌಲಭ್ಯ ಇಲ್ಲದೇ ಅನ್ಯ ಜಿಲ್ಲೆ, ರಾಜ್ಯಗಳನ್ನು ಅವಲಂಬಿಸುವ ಯುವಜನತೆ ಮರಳಿ ಕೇರಳಕ್ಕೆ ಬಾರದೇ ಇರುವ ಪರಿಸ್ಥಿತಿ ಇದೆ.
ದೇವರ ಸ್ವಂತ ನಾಡೆಂದು ಪರಿಗಣಿಸಲ್ಪಟ್ಟಿರುವ ಕೇರಳ ಇಂದು ವೃದ್ಧ ಸದನವಾಗಿ ಬದಲಾಗುತ್ತಿದೆ. ಕೇಂದ್ರ ಯೋಜನೆಯಾದ ಜಲಜೀವನ್ ಮಿಷನ್ ಹಲವು ಪ್ರದೇಶಗಳಲ್ಲಿ ಕೇರಳದ ಸಹಭಾಗಿತ್ವ ಲಭಿಸದ ಕಾರಣ ಮೊಟಕುಗೊಳ್ಳುವಂತಾಗಿದೆ. ಪ್ರಧಾನಮಂತ್ರಿ ಆವಾಜ್ ಯೋಜನೆಗೆ ಕೇರಳ ಹೆಸರನ್ನೇ ಬದಲಾಯಿಸಿಕೊಂಡಿದೆ. ಅರ್ಹತೆ ಹೊಂದಿದ ಅನೇಕ ಮಂದಿ ಇದರ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ ಜನರಿಂದ ನೇರವಾಗಿ ಅರ್ಜಿ ಸ್ವೀಕರಿಸುವಂತೆ ಪರಿಷ್ಕಾರ ಮಾಡಿಕೊಂಡಿದೆ. ಶಿಕ್ಷಣಕ್ಕಾಗಿ ಜ್ಯಾರಿಗೊಳಿಸಿದ ಪಿಎಂಶ್ರೀ ಯೋಜನೆಯನ್ನೂ ಅನುಷ್ಟಾನ ಗೊಳಿಸದೇ ಕೇರಳ ತಿರಸ್ಕರಿಸುವ ಮೂಲಕ ವಿದ್ಯಾರ್ಥಿಘಳಿಗೂ ವಂಚನೆಯೆಸಗಿರುವುದಾಗಿ ಆರೋಪಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಂ. ಬಾಲ ರಾಜ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಪಿ. ಆರ್. ಸುನಿಲ್, ಪುಷ್ಪಾಗೋಪಾಲನ್, ಸವಿತಾ ಟೀಚರ್, ಪಿ. ರಮೇಶ, ಎಂ. ಸಂಜೀವ ಶೆಟ್ಟಿ, ವಿ. ರವೀಂದ್ರನ್, ಎ. ವೇಲಾಯುಧನ್, ಎಂ. ಭಾಸ್ಕರ, ಮಧೂರು ಗ್ರಾ. ಪಂ. ಅಧ್ಯಕ್ಷ ಕೆ. ಗೋಪಾಲಕೃಷ್ಣ, ಬೆಳ್ಳೂರು ಗ್ರಾ. ಪಂ. ಅಧ್ಯಕ್ಷ ಶ್ರೀಧರ ಬೆಳ್ಳೂರು, ಸತೀಶ್ಚಂದ್ರ ಭಂಡಾರಿ ಕೋಳಾರು, ಕೆ. ರಾಜಗೋಪಾಲ, ಲೋಕೇಶ್ ನೋಂಡ, ಕೆ. ಎಂ. ಅಶ್ವಿನಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಮೀಳ ಮಜಲ್ ಸ್ವಾಗತಿಸಿದರು. ಮಹೇಶ್ ಗೋಪಾಲ್ ವಂದಿಸಿದರು.





