ಕಾಸರಗೋಡು: ದಕ್ಷಿಣದ ಕಾಶಿ ಎಂದು ಖ್ಯಾತಿಪಡೆದಿರುವ ಐತಿಹಾಸಿಕ ಮತ್ತು ಪವಿತ್ರ ಕ್ಷೇತ್ರ ಬೇಕಲ ಸನಿಹದ ತ್ರಿಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ಕರ್ಕಟಕ ಅಮವಾಸ್ಯೆ ಅಂಗವಾಗಿ ನಿನ್ನೆ ಪಿತೃ ತರ್ಪಣ ಕಾರ್ಯಕ್ರಮ ಗುರುವಾರ ನೆರವೇರಿತು. ಬಿರುಸಿನ ಮಳೆಯನ್ನೂ ಲೆಕ್ಕಿಸದೆ ಸಾವಿರಾರು ಮಂದಿ ತಮ್ಮ ಹಿರಿಯರಿಗೆ ಪಿತೃಬಲಿತರ್ಪಣ ಸಮರ್ಪಿಸಿದರು.
ಬೆಳಗ್ಗೆ ಉಷ:ಪೂಜೆ ಕಳೆದು 5.30ಕ್ಕೆ ಬಲಿತರ್ಪಣ ಆರಂಭಗೊಂಡಿತ್ತು. ದೇವಸ್ಥಾನದ ಮೇಲ್ಶಾಂತಿ ಬ್ರಹ್ಮಶ್ರೀ ನವೀನ್ಚಂದ್ರ ಕಾಯರ್ತಾಯ, ದೇವಾಲಯದ ಅರ್ಚಕ ರಾಜೇಂದ್ರ ಅರಳಿತ್ತಾಯ ಅವರ ಪೌರೋಹಿತ್ಯದಲ್ಲಿ ಏಕ ಕಾಲಕ್ಕೆ ಇಪ್ಪತ್ತರಷ್ಟು ಪುರೋಹಿತರು ಪಿತೃಬಲಿತರ್ಪಣಾ ಕಾರ್ಯ ನೆರವೇರಿಸಿಕೊಟ್ಟರು. ಈ ಬಾರಿ ಸಮುದ್ರ ಕೊರೆತದಿಂದ ತ್ರಿಕ್ಕನ್ನಾಡು ಪ್ರದೇಶದಲ್ಲಿ ವ್ಯಾಪಕ ಹಾನಿ ಸಂಭವಿಸಿರುವ ಹಿನ್ನೆಲೆಯಲ್ಲಿ ಪಿತೃತರ್ಪಣ ಕಾರ್ಯವನ್ನು ಸಮುದ್ರ ದಡದ ಬದಲು ದೇವಾಲಯದ ದಕ್ಷಿಣ ಭಾಗದಲ್ಲಿ ವಿಶೇಷವಾಗಿ ಸ್ಥಾಪಿಸಲಾದ ಚಪ್ಪರದಲ್ಲಿ ನೆರವೇರಿಸಲಾಗಿತ್ತು.
ಪಿತೃತರ್ಪಣಕ್ಕಾಗಿ ರಶೀದಿ ಪಡೆಯುವಲ್ಲಿ ಉಂಟಾಗುವ ದಟ್ಟಣೆ ಕಡಿಮೆ ಮಾಡುವ ನಿಟ್ಟಿನಲ್ಲಿ ದೇವಾಲಯದ ಕೌಂಟರ್ನಲ್ಲಿ ರಶೀದಿ ಒದಗಿಸುವುದರ ಜತೆಗೆ ದೇವಾಲಯದ ವೆಬ್ಸೈಟ್ ಮೂಲಕವೂ ಈ ಬಾರಿ ರಶೀದಿ ವಿತರಿಸಿದ್ದ ಹಿನ್ನೆಲೆಯಲ್ಲಿ ಸರತಿಸಾಲು ಒಂದಷ್ಟು ಕಡಿಮೆಯಾಗಿತ್ತು. ಭಕ್ತಾದಿಗಳಿಗೆ ದೇಗುಲದ ವತಿಯಿಂದ ಉಪಾಹಾರ ಹಾಗೂ ಲಘು ಪಾನೀಯ ವ್ಯವಸ್ಥೆ ಮಾಡಲಾಗಿತ್ತು.
20ಸಾವಿರಕ್ಕೂ ಹೆಚ್ಚು ಪಿತೃತರ್ಪಣ ಹಾಗೂ ಒಂದು ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ದೇವಾಲಯ ಸಂದರ್ಶಿಸಿದ್ದರು. ಬಿರುಸಿನ ಮಳೆಗೆ ಸಮುದ್ರ ಪ್ರಕ್ಷುಬ್ಧಗೊಂಡಿದ್ದ ಹಿನ್ನೆಲೆಯಲ್ಲಿ ಭಕ್ತಾದಿಗಳು ಸಮುದ್ರಕ್ಕಿಳಿಯದಂತೆ ಪೆÇಲೀಸ್, ಕೋಸ್ಟ್ ಗಾರ್ಡ್ ನಿಗಾ ವಹಿಸಿದ್ದರು. ಅಗ್ನಿಶಾಮಕ ದಳ, ಆರೋಗ್ಯ ಇಲಾಖೆ ಕಾರ್ಯಕರ್ತರೂ ಸಹಕರಿಸಿದರು. ಭಕ್ತಾದಿಗಳ ಸೌಕರ್ಯಕ್ಕಾಗಿ ಕೆಎಸ್ಸಾರ್ಟಿಸಿ ಈ ರೂಟಲ್ಲಿ ಹೆಚ್ಚಿನ ಬಸ್ ಸರ್ವೀಸ್ ಆಯೋಜಿಸಿತ್ತು.





