ಕಾಸರಗೋಡು: ದಿನನಿತ್ಯ ನೂರಾರು ಸಂಖ್ಯೆಯ ಬಡ ಜನತೆ ಚಿಕಿತ್ಸೆ ಪಡೆಯುತ್ತಿರುವ ಕಾಸರಗೋಡು ಜನರಲ್ ಆಸ್ಪತ್ರೆಯ ಕ್ಷಯರೋಗ ಘಟಕವನ್ನು ಪಾಳುಬಿದ್ದ, ಶಿಥಿಲ ಕಟ್ಟಡಕ್ಕೆ ಸ್ಥಳಾಂತರಿಸುವುದನ್ನು ಪ್ರತಿಭಟಿಸಿ ಭಾರತೀಯ ಯುವ ಕಾಂಗ್ರೆಸ್ ಕಾಸರಗೋಡು ಕ್ಷೇತ್ರ ಸಮಿತಿ ಅಧ್ಯಕ್ಷ ಅಬಿದ್ ಎಡಚೇರಿ ನೇತೃತ್ವದಲ್ಲಿ ಆಸ್ಪತ್ರೆ ಅಧೀಕ್ಷಗೆ ಮನವಿ ಸಲ್ಲಿಸಲಾಯಿತು. ಪ್ಲಾಸ್ಟಿಕ್ ಹಾಳೆಗಳಿಂದ ಮುಚ್ಚಿದ ತಾತ್ಕಾಲಿಕ ಕಟ್ಟಡದಲ್ಲಿ ಜಿಲ್ಲಾ ಕ್ಷಯರೋಗ ಕೇಂದ್ರ ಕಾರ್ಯಾಚರಿಸುತ್ತಿದ್ದು, ಈ ಕಟ್ಟಡ ಬಿರುಸಿನ ಗಾಳಿಯಿಂದ ಕೂಡಿದ ಮಳೆಗೆ ಭಾರೀ ದುರಂತವನ್ನು ತಂದೊಡ್ಡಲಿದೆ. ಇಲ್ಲಿ ಆರೋಗ್ಯ ಕಾರ್ಯಕರ್ತರು ಮತ್ತು ರೋಗಿಗಳು ಆತಂಕದಲ್ಲಿ ಕಾಲ ಕಳೆಯಬೇಕಾದ ಸ್ಥಿತಿಯಿದೆ. ಟಿಬಿ ಘಟಕವನ್ನು ತಕ್ಷಣ ಮತ್ತೊಂದು ಸುರಕ್ಷಿತ ಜಾಗಕ್ಕೆ ಸ್ಥಳಾಂತರಿಸುವಂತೆ ಸಮಿತಿ ಒತ್ತಾಯಿಸುವುದರ ಜತೆಗೆ ರೋಗಿಗಳಿಗೆ ಶುಚಿತ್ವ ಮತ್ತು ಸುರಕ್ಷತೆಯನ್ನು ಖಾತ್ರಿಪಡಿಸಿ, ಸೌಲಭ್ಯಗಳನ್ನು ಒದಗಿಸಲು ಅಧಿಕಾರಿಗಳು ತುರ್ತಾಗಿ ಕ್ರಮ ಕೈಗೊಳ್ಳುವಂತೆಯೂ ಮನವಿಯಲ್ಲಿ ಆಗ್ರಹಿಸಲಾಗಿದೆ. ಯುವ ಕಾಂಗ್ರೆಸ್ ಕ್ಷೇತ್ರ ಸಮಿತಿ ಪದಾಧಿಕಾರಿಗಳಾದ ಶಂಸುದ್ದೀನ್, ನರಸಿಂಹನ್ ಚೇರೂರು, ಸಲೀಂ ಪಟ್ಲ, ಪ್ರಶಾಂತ್ ಕುಮಾರ್, ಮನಾಫ್ ಮಧೂರು, ಅನ್ಸಾರಿ ಮೊದಲಾದವರು ಉಪಸ್ಥಿತರಿದ್ದರು.

