ಮುಳ್ಳೇರಿಯ: ನಮ್ಮ ಕಾಲದಲ್ಲೂ ಇಂತಹ ವ್ಯವಸ್ಥೆಗಳು ಜಾರಿಯಲ್ಲಿದ್ದಿದ್ದರೆ, ಹೆಚ್ಚಿನ ಮಕ್ಕಳು ಶಾಲೆಗೆ ಹೋಗುತ್ತಿದ್ದರು... ಮಳೆ ಮತ್ತು ಗಾಳಿಯ ಹೊರತಾಗಿಯೂ ನನ್ನ ಮಗು ಸೇರಿದಂತೆ ಎಲ್ಲರೂ ಸುರಕ್ಷಿತವಾಗಿ ಶಾಲೆ ತಲುಪುತ್ತಾರೆ... ನಿಮ್ಮ ಮಕ್ಕಳು ತಡವಾಗಿ ಬರುತ್ತಾರೆ ಎಂದು ಚಿಂತಿಸಬೇಡಿ.. ವಾಹನ ಯಾವಾಗ ಬರುವುದೆಂದು ಕಾದು ನೋಡೋಣ.. ಪರಿಶಿಷ್ಟ ಪಂಗಡ ಅಭಿವೃದ್ಧಿ ಇಲಾಖೆಯಡಿಯಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯಲು ಪ್ರಾರಂಭಿಸಲಾದ ಯೋಜನೆಯಾದ ವಿದ್ಯಾ ವಾಹಿನಿಯ ಫಲಾನುಭವಿಯಾಗಿರುವ ಮಗುವಿನ ಪೋಷಕರಾದ ಚಾಮಕೊಚ್ಚಿ ಮೂಲದ ಸಿ.ಎಚ್.ಶಂಕರ ಎಂಬವರ ಮಾತುಗಳಿವು.
ದೇಲಂಪಾಡಿ ಪಂಚಾಯತಿ ವ್ಯಾಪ್ತಿಯ ಚಾಮಕೊಚ್ಚಿ ಪ್ರದೇಶದ ಪರಿಶಿಷ್ಟ ಪಂಗಡಗಳ ಉನ್ನತಿಯ(ಕಾಲನಿ) ಸುಮಾರು ನಲ್ವತ್ತು ಮಕ್ಕಳು ಕುತ್ತಿಕೋಲ್ ಪಂಚಾಯತಿಯ ಬಂದಡ್ಕ ಶಾಲೆಗೆ ತಲುಪಲು ನಾಲ್ಕೂವರೆ ಕಿಲೋಮೀಟರ್ ಪ್ರಯಾಣಿಸುತ್ತಾರೆ.
ಕಾಸರಗೋಡು ಬುಡಕಟ್ಟು ವಿಸ್ತರಣಾ ಕಚೇರಿಯ ಅಡಿಯಲ್ಲಿರುವ ವಿದ್ಯಾ ವಾಹಿನಿಯಿಂದ ಹೆಚ್ಚು ಪ್ರಯೋಜನ ಪಡೆಯುವ ಶಾಲೆಗಳಲ್ಲಿ ಬಂದಡ್ಕ ಶಾಲೆಯೂ ಒಂದು. ಬಂದಡ್ಕ ಗುಡ್ಡಗಾಡು ಗ್ರಾಮದ 16 ಪ್ರದೇಶಗಳ 244 ಮಕ್ಕಳು ವಿದ್ಯಾ ವಾಹಿನಿಯ ಭಾಗವಾಗಿರುವ 19 ವಾಹನಗಳಲ್ಲಿ ಶಾಲೆಗೆ ತೆರಳುತ್ತಾರೆ. ಈ ಯೋಜನೆಯ ಮೂಲಕ ಮಕ್ಕಳು ಶಾಲೆ ಬಿಡುವುದು ಮತ್ತು ತರಗತಿಗೆ ಬರಲು ಹಿಂಜರಿಯುವುದು ಕಡಿಮೆಯಾಗಿದೆ ಎಂದು ಬಂದಡ್ಕ ಶಾಲೆಯ ಮುಖ್ಯೋಪಾಧ್ಯಾಯ ರಾಘವ ಮಾಸ್ತರ್ ಹೇಳುತ್ತಾರೆ. ಸುಮಾರು ಎಂಟು ಕಿಲೋಮೀಟರ್ ವ್ಯಾಪ್ತಿಯ ಮಕ್ಕಳು ಪ್ರತಿದಿನ ಶಾಲೆಗೆ ಬರುತ್ತಾರೆ ಮತ್ತು ಮಕ್ಕಳು ವಾಹನಗಳಲ್ಲಿ ಒಟ್ಟಿಗೆ ಬರುವುದರಿಂದ ಅವರ ಮಾನಸಿಕ ಸಂತೋಷ ಮತ್ತು ಶಾಲೆಗೆ ಬರುವ ಆಸಕ್ತಿ ಹೆಚ್ಚಾಗಿದೆ ಎಂದು ರಾಘವ ಅವರು ಹೇಳುತ್ತಾರೆ. ಬ್ಲಾಕ್ ಪಂಚಾಯತಿ ಸದಸ್ಯರೂ ಆಗಿರುವ ಚಾಲಕ ಚನಿಯ ನಾಯಕ್, ಯೋಜನೆಯ ಅನುಷ್ಠಾನಕ್ಕೆ ವಿದ್ಯಾರ್ಥಿಗಳು ಮತ್ತು ಪೆÇೀಷಕರಿಂದ ಉತ್ತಮ ಸಹಕಾರವಿದೆ ಎಂದು ಹೇಳುತ್ತಾರೆ.
ಈ ಯೋಜನೆಯನ್ನು ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ಇಲಾಖೆಯು 2013-14 ರಲ್ಲಿ ಗೋತ್ರ ಸಾರಥಿ ಎಂಬ ಹೆಸರಿನಲ್ಲಿ ಪ್ರಾರಂಭಿಸಿತು ಮತ್ತು ನಂತರ ಇದನ್ನು ವಿದ್ಯಾ ವಾಹಿನಿ ಎಂದು ಮರುನಾಮಕರಣ ಮಾಡಲಾಯಿತು. ಈ ಯೋಜನೆಯು ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚು ಪರಿಶಿಷ್ಟ ಪಂಗಡಗಳಿಗೆ ಸೇರಿದ ಫಲಾನುಭವಿಗಳಿಗೆ ಅವಕಾಶಗಳನ್ನು ಒದಗಿಸುತ್ತಿದೆ. ವಿದ್ಯಾರ್ಥಿಗಳನ್ನು ಶಾಲೆಗೆ ಉಚಿತವಾಗಿ ಸಾಗಿಸುವ ಮತ್ತು ಹಿಂತಿರುಗಿಸುವ ಈ ಯೋಜನೆಯು ಮಕ್ಕಳಿಗೆ ಶಿಕ್ಷಣವನ್ನು ಖಚಿತಪಡಿಸುವುದಲ್ಲದೆ, ಚಾಲಕರಿಗೆ ಉದ್ಯೋಗವನ್ನೂ ಖಚಿತಪಡಿಸುತ್ತದೆ. ಪರಿಶಿಷ್ಟ ಪಂಗಡಗಳಿಂದ ಚಾಲಕರು ಇಲ್ಲದಿದ್ದರೆ, ಅವರನ್ನು ಸಾಮಾನ್ಯ ವರ್ಗದಿಂದ ಆಯ್ಕೆ ಮಾಡಲಾಗುತ್ತದೆ.
ಸಾರ್ವಜನಿಕ ಸಾರಿಗೆ ಸೌಲಭ್ಯವಿಲ್ಲದ ಮತ್ತು ಅರಣ್ಯ ಪ್ರದೇಶಗಳಿಂದ ಬರುವ 1 ರಿಂದ 10 ನೇ ತರಗತಿಯ ವಿದ್ಯಾರ್ಥಿಗಳು ವಿದ್ಯಾ ವಾಹಿನಿಯ ಪ್ರಯೋಜನ ಪಡೆಯುತ್ತಿದ್ದಾರೆ. ಕಿರಿಯ ಮತ್ತು ಹಿರಿಯ ಪ್ರಾಥಮಿಕ ತರಗತಿಗಳಿಗೆ ಒಂದು ಕಿಲೋಮೀಟರ್ ದೂರದಲ್ಲಿರುವ ಹತ್ತಿರದ ಸಾರ್ವಜನಿಕ ಶಾಲೆಗೆ ಮತ್ತು ಪ್ರೌಢಶಾಲಾ ವರ್ಗಕ್ಕೆ ಕನಿಷ್ಠ ಎರಡು ಕಿಲೋಮೀಟರ್ ದೂರದಲ್ಲಿರುವ ಪ್ರೌಢಶಾಲೆಗೆ ವಿದ್ಯಾ ವಾಹಿನಿಯ ಸೇವೆ ಲಭ್ಯವಿರುತ್ತದೆ. ಬಂದಡ್ಕ ಶಾಲೆಯಲ್ಲಿ ವಾಹನಗಳ ಬಾಡಿಗೆಗೆ ಇಲಾಖೆಯು ತಿಂಗಳಿಗೆ ಸುಮಾರು ಮೂರು ಲಕ್ಷ ರೂಪಾಯಿಗಳನ್ನು ಖರ್ಚು ಮಾಡುತ್ತಿದೆ ಎಂದು ಕಾಸರಗೋಡು ಬುಡಕಟ್ಟು ವಿಸ್ತರಣಾಧಿಕಾರಿ ವೀರೇಂದ್ರ ಕುಮಾರ್ ಹೇಳಿದ್ದಾರೆ. ಕಾಸರಗೋಡು ಬುಡಕಟ್ಟು ಅಭಿವೃದ್ಧಿ ಕಚೇರಿಯಡಿಯಲ್ಲಿರುವ 36 ಶಾಲೆಗಳಲ್ಲಿ 1179 ವಿದ್ಯಾರ್ಥಿಗಳು ಮತ್ತು ಪರಪ್ಪ ಬುಡಕಟ್ಟು ಅಭಿವೃದ್ಧಿ ಕಚೇರಿಯಡಿಯಲ್ಲಿರುವ 31 ಶಾಲೆಗಳಲ್ಲಿ 1950 ವಿದ್ಯಾರ್ಥಿಗಳು ಸೇರಿದಂತೆ ಜಿಲ್ಲೆಯಲ್ಲಿ ಒಟ್ಟು 3129 ವಿದ್ಯಾರ್ಥಿಗಳು ವಿದ್ಯಾ ವಾಹಿನಿಯ ಫಲಾನುಭವಿಗಳಾಗಿದ್ದಾರೆ.




-VIDYAVAHINI.jpeg)
