ಉತ್ತರಕಾಶಿ: ಮೇಘಸ್ಫೋಟದಿಂದ ಉಂಟಾದ ಪ್ರವಾಹದಿಂದ ನಲುಗಿರುವ ಧರಾಲಿ ಗ್ರಾಮದಲ್ಲಿ ನಾಪತ್ತೆಯಾದವರ ಶೋಧಕ್ಕಾಗಿ ರಕ್ಷಣಾ ಸಿಬ್ಬಂದಿ ಶನಿವಾರವೂ ಕಾರ್ಯಾಚರಣೆ ನಡೆಸಿದ್ದಾರೆ.
ಮಣ್ಣಿನ ರಾಶಿ, ಅವಶೇಷಗಳಲ್ಲಿ ಸಿಲುಕಿರುವವರ ಪತ್ತೆಗಾಗಿ ಶ್ವಾನಗಳು, ಡ್ರೋನ್ ಬಳಸಲಾಗಿದೆ.
ಶನಿವಾರ 287 ಮಂದಿಯನ್ನು ರಕ್ಷಿಸಿದ್ದು, ಮಂಗಳವಾರದಿಂದ ಈವರೆಗೆ ಒಂದು ಸಾವಿರಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ತಿಳಿಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಕರೆದುಕೊಂಡು ಹೋಗಲು ನಾಲ್ಕು ಹೆಲಿಕಾಪ್ಟರ್ಗಳನ್ನು ನಿಯೋಜಿಸಲಾಗಿದೆ. 170 ಜನರನ್ನು ಐಟಿಬಿಪಿಯ ಮಟ್ಲಿ ಹೆಲಿಪ್ಯಾಡ್ಗೆ ಮತ್ತು 107 ಜನರನ್ನು ಚಿನ್ಯಾಲಿಸೌರ್ನಲ್ಲಿರುವ ವಾಯುನೆಲೆಗೆ ಸಾಗಿಸಲಾಗಿದೆ ಎಂದು ಉತ್ತರಾಖಂಡ ಪೊಲೀಸರು ತಿಳಿಸಿದ್ದಾರೆ.
ಪ್ರವಾಹದಿಂದಾಗಿ ನಾಲ್ವರು ಮೃತಪಟ್ಟಿದ್ದು, ಸೇನೆಯ 9 ಯೋಧರು, ನಾಗರಿಕರು ಸೇರಿದಂತೆ 49 ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಧರಾಲಿಯಲ್ಲಿ 24 ದೊಡ್ಡ ಹೋಟೆಲ್ಗಳಿದ್ದು, ಅನೇಕ ಪ್ರವಾಸಿಗರು ತಂಗಿದ್ದರು. ನಿರ್ಮಾಣ ಹಂತದ ಹೋಟೆಲ್ಗಳಲ್ಲಿ ನೇಪಾಳ, ಬಿಹಾರದ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಹೀಗಾಗಿ, ಪ್ರವಾಹದಿಂದ ನಾಪತ್ತೆ ಆದವರ ಪ್ರಮಾಣ ಮತ್ತಷ್ಟು ಹೆಚ್ಚಿರಬಹುದು ಎಂದು ಮುಖ್ಬಾ ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.
₹5 ಲಕ್ಷ ಪರಿಹಾರ: ಪ್ರವಾಹದಿಂದಾಗಿ ಮನೆಗಳನ್ನು ಕಳೆದುಕೊಂಡವರಿಗೆ ₹5 ಲಕ್ಷ ಪರಿಹಾರ ನೀಡುವುದಾಗಿ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಘೋಷಿಸಿದ್ದಾರೆ. ಇದಲ್ಲದೆ, ದುರಂತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹5 ಲಕ್ಷ ಪರಿಹಾರ ನೀಡಲಾಗುವುದು ಎಂದೂ ತಿಳಿಸಿದ್ದಾರೆ.
ವಿಪತ್ತಿನಿಂದ ಹಾನಿಗೊಳಗಾದ ಗ್ರಾಮಸ್ಥರ ಪುನರ್ವಸತಿ ಸೇರಿದಂತೆ ಒಟ್ಟಾರೆ ಸುಸ್ಥಿರ ಜೀವನೋಪಾಯವನ್ನು ಬಲಪಡಿಸಲು ಕಂದಾಯ ಇಲಾಖೆಯ ಕಾರ್ಯದರ್ಶಿಯ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಸಮಿತಿಯನ್ನು ರಚಿಸಲಾಗಿದೆ. ಈ ಸಮತಿಯು ಒಂದು ವಾರದೊಳಗೆ ಸರ್ಕಾರಕ್ಕೆ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಲಿದೆ ಎಂದು ಧಾಮಿ ಹೇಳಿದ್ದಾರೆ.




