ಮಧೂರು: ಸುಮಾರು ಆರು ದಶಕಗಳ ಕಾಲ ವೈದ್ಯರಾಗಿ ಜನಾನುರಾಗಿಯಾಗಿದ್ದ ಡಾ.ಬಿ.ಎಸ್.ರಾವ್ ಸರಳ ಸಜ್ಜನಿಕೆಯ ಸಾಕಾರಮೂರ್ತಿ ಎಂದು ನಿವೃತ್ತ ಮುಖ್ಯೋಪಾಧ್ಯಾಯ ನಾರಾಯಣಯ್ಯ ಮಧೂರು ಹೇಳಿದರು.
ಅವರು ಮಧೂರು ದೇವಸ್ಥಾನದ ಪರಿಸರದಲ್ಲಿ ಜರಗಿದ ಡಾ.ಬಿ.ಎಸ್.ರಾವ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಮಧೂರು ದೇವಸ್ಥಾನದ ನವೀಕರಣ ಸಮಿತಿಯ ಉಪಾಧ್ಯಕ್ಷರಾಗಿ, ನಿರ್ಮಾಣ ಸಮಿತಿಯ ಅಧ್ಯಕ್ಷರಾಗಿ, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾಗಿ ದೇವಸ್ಥಾನದ ನವೀಕರಣ ಕಾರ್ಯದಲ್ಲಿ ನಿಸ್ವಾರ್ಥವಾಗಿ ದುಡಿದಿದ್ದ ಡಾ.ಬಿ.ಎಸ್.ರಾವ್ ಒಬ್ಬ ವಿಶಿಷ್ಟ ವ್ಯಕ್ತಿಯಾಗಿದ್ದರು ಎಂದು ಅವರು ಹೇಳಿದರು.
ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷ ಕೆ.ಮಂಜುನಾಥ ಕಾಮತ್ ಅಧ್ಯಕ್ಷತೆ ವಹಿಸಿದರು. ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಜಗದೀಶ್ ಪ್ರಸಾದ್ ಬಿ.ಎಸ್.ರಾವ್ ಅವರ ಭಾವಚಿತ್ರದ ಮುಂದೆ ದೀಪ ಬೆಳಗಿ ಉದ್ಘಾಟಿಸಿದರು. ವೇಣುಗೋಪಾಲ ನಂಬ್ಯಾರ್ ಕಾಂಞಂಗಾಡ್, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಜಯದೇವ ಖಂಡಿಗೆ, ಲಕ್ಷ್ಮಣ ಪೆರಿಯಡ್ಕ, ಹಿರಿಯ ಸದಸ್ಯರಾದ ಗಿರೀಶ್ ಸಂಧ್ಯಾ ಮೊದಲಾದವರು ಉಪಸ್ಥಿತರಿದ್ದು ನುಡಿನಮನ ಸಲ್ಲಿಸಿದರು. ಜಗದೀಶ್ ಕೂಡ್ಲು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ವಿಷ್ಣು ಭಟ್ ಕಕ್ಕೆಪ್ಪಾಡಿ ವಂದಿಸಿದರು.




.jpg)
