ಕಾಸರಗೋಡು: ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಸಾಂಸ್ಕೃತಿಕ ಭವನಕ್ಕೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜು ವಿದ್ಯಾರ್ಥಿಗಳು ಭೇಟಿ ನೀಡಿದರು. ಯಕ್ಷಗಾನದ ಬಗ್ಗೆ ಅಧ್ಯಯನ ಹಾಗೂ ಮಾಹಿತಿ ಸಂಗ್ರಹಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ತಂಡ ಭೇಟಿ ಆಯೋಜಿಸಿತ್ತು. ಕಾಲೇಜಿನ ಯಕ್ಷ ಗುರು ಅರುಣ್ ಕುಮಾರ್ ನೇತೃತ್ವದಲ್ಲಿ 55ಮಂದಿ ವಿದ್ಯಾರ್ಥಿಗಳು ಭೇಟಿ ನೀಡಿ, ಪ್ರತಿಷ್ಠಾನದ ಮ್ಯೂಸಿಯಂ ವೀಕ್ಷಿಸಿದರು. ತೆಂಕತಿಟ್ಟು ಯಕ್ಷಗಾನದ ಶಾಸ್ತ್ರೀಯ ನಾಟ್ಯ ಗುರುಗಳಾದ ಕರ್ಗಲ್ಲು ವಿಶ್ವೇಶ್ವರ ಭಟ್ ಅವರು ವಿದ್ಯಾರ್ಥಿಗಳಿಗೆ ಯಕ್ಷಗಾನದ ಬಗ್ಗೆ ಪ್ರಾತ್ಯಕ್ಷಿಕೆ ಮೂಲಕ ವಿವರಣೆ ನೀಡಿದರು. ಯಕ್ಷಗಾನಕ್ಕೆ ಹಿಂದಿನ ಕಾಲದ ಕೀರ್ತಿಶೇಷರು, ಯಕ್ಷಗಾನದ ಪಿತಾಮಹ ಪ್ರಾರ್ಥಿಸುಬ್ಬ ಅವರಿಂದ ಮೊದಲ್ಗೊಂಡು ಕಾಸರಗೋಡಿನ ಯಕ್ಷಗಾನ ಕಲಾವಿದರ ಕೊಡುಗೆಯನ್ನು ವಿವರಿಸಿದರು.
ಸಿರಿಬಾಗಿಲು ಪ್ರತಿಷ್ಠಾನ ಯಕ್ಷಗಾನದ ಅಧ್ಯಯನಕ್ಕೆ ಪೂರಕವಾದ ಸಮಗ್ರ ಮಾಹಿತಿಯನ್ನು ಒದಗಿಸಿಕೊಟ್ಟಿದೆ. ಯಕ್ಷಗಾನದ ಬಗ್ಗೆ ಹಲವು ಆಯಾಂಗಳಿಂದ ಅಧ್ಯಯನ ನಡೆಸಲು ಕೇಂದ್ರದಿಂದ ಪೂರಕ ಮಾಹಿತಿ ಲಭ್ಯವಾಗಿದೆ. ಸೂಕ್ತ ವಿಚಾರಗಳನ್ನು ಮನದಟ್ಟುಮಾಡಿಕೊಲ್ಳಲು ಸಾಧ್ಯವಾಯಿತು ಎಂದು ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು. ಪ್ರತಿಷ್ಠಾನದ ಅಧ್ಯಕ್ಷ ರಾಮಕೃಷ್ಣ ಮಯ್ಯ ಅವರು ಯಕ್ಷಗಾನಕ್ಕೆ ಸಿರಿಬಾಗಿಲು ವೆಂಕಪ್ಪಯ್ಯನವರ ಕೊಡುಗೆ ಹಾಗೂ ಪ್ರತಿಷ್ಠಾನ ಬೆಳೆದು ಬಂದ ರೀತಿಯನ್ನು ವಿದ್ಯಾರ್ಥಿಗಳಿಗೆ ವಿವರಿಸಿದರು. ಜಗದೀಶ್ ಕೆ. ಕೂಡ್ಲು ಸ್ವಾಗತಿಸಿ ವಂದಿಸಿದರು.


