ಮುಂಬೈ: ದೇಶದ ವಾಣಿಜ್ಯ ರಾಜಧಾನಿ ಮುಂಬೈಗೆ 14 ಮಂದಿ ಉಗ್ರರು ನುಗ್ಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭ್ಯವಾಗಿದ್ದು ಗಣೇಶೋತ್ಸವ ಹಿನ್ನೆಲೆಯಲ್ಲಿ ಪೊಲೀಸರು ಎಚ್ಚರಿಕೆವಹಿಸಿದ್ದಾರೆ.
ಸಂಚಾರ ಪೊಲೀಸರ ನಿಯಂತ್ರಣ ಕೊಠಡಿಯ ವಾಟ್ಸ್ಆಯಪ್ ಸಂಖ್ಯೆಗೆ ಈ ಸಂದೇಶ ಬಂದಿದೆ.
ನಗರಕ್ಕೆ 14 ಜನ ಭಯೋತ್ಪಾದಕರು ಬಂದಿದ್ದು ಸುಮಾರು 400 ಕೆ.ಜಿ ಆರ್ಡಿಎಕ್ಸ್ ಅನ್ನು 34 ವಾಹನಗಳಲ್ಲಿ ಇಡಲಾಗಿದ್ದು ಒಂದು ಕೋಟಿಗೂ ಹೆಚ್ಚು ಜನರ ರಕ್ತ ಹರಿಸಲಾಗುವುದು ಎಂದು ಉಗ್ರರು ಸಂದೇಶದಲ್ಲಿ ತಿಳಿಸಿದ್ದಾರೆ.
ಲಷ್ಕರ್ ಜಿಹಾದಿ ಉಗ್ರ ಸಂಘಟನೆ ಈ ಸಂದೇಶ ಕಳಿಸಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೆದರಿಕೆ ಸಂದೇಶ ಬಂದಿರುವುದು ನಿಜ, ಇದು ಹುಸಿ ಸಂದೇಶ ಇರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಈ ಬಗ್ಗೆ ಎಲ್ಲಾ ಆಯಾಮಗಳಲ್ಲಿ ವಿವಿಧ ತಂಡಗಳು ತನಿಖೆ ನಡೆಸುತ್ತಿವೆ ಎಂದು ಅವರು ತಿಳಿಸಿದ್ದಾರೆ.
ಮಹಾನಗರದಲ್ಲಿ ಗಣೇಶೋತ್ಸವ ವಿಸರ್ಜನೆ ಕಾರ್ಯಕ್ರಮಗಳು ನಡೆಯುತ್ತಿರುವುದರಿಂದ ಎಲ್ಲಾ ಕಡೆ ಭದ್ರತೆ ಕೈಗೊಳ್ಳಲಾಗಿದೆ. ನೂರಾರು ರಸ್ತೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಲಾಗಿದ್ದು ವ್ಯಾಪಕ ತಪಾಸಣೆ ಮಾಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.




