ಪೆರ್ಲ: ಬ್ರಹ್ಮಶ್ರೀ ನಾರಾಯಣಗುರುಗಳು ಪರಿವರ್ತನೆಯ ಹರಿಕಾರರಾಗಿದ್ದು, ಅವರು ಹಾಕಿಕೊಟ್ಟಿರುವ ಸತ್ಪಥದ ಮೂಲಕ ಸಾಗಿ ಸಮಾಜಕಟ್ಟುವ ಕೆಲಸದಲ್ಲಿ ನಾವೆಎಲ್ಲರೂ ತೊಡಗಿಸಿಕೊಳ್ಳುವುದು ಅನಿವಾರ್ಯ ಎಂಬುದಾಗಿ ಧಾರ್ಮಿಕ, ಸಾಮಾಜಿಕ ಮುಂದಾಳು, ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾ ಸಮಿತಿ ಅಧ್ಯಕ್ಷ ಶ್ರೀಕೃಷ್ಣ ಶಿವಕೃಪಾ ಕುಂಜತ್ತೂರು ತಿಳಿಸಿದ್ದಾರೆ.
ಅವರು ಪೆರ್ಲದ ವ್ಯಾಪಾರಿ ಭವನದಲ್ಲಿ ಭಾನುವಾರ ಬ್ರಹ್ಮ ಶ್ರೀ ನಾರಾಯಣ ಗುರು ಬಿಲ್ಲವ ಸೇವಾ ಸಂಘ ಪೆರ್ಲ ಘಟಕದ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಬ್ರಹ್ಮ ಶ್ರೀ ನಾರಾಯಣ ಗುರುಗಳ 171ನೇ ಜಯಂತ್ಯುತ್ಸವದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ಘಟಕ ಅಧ್ಯಕ್ಷ ಬಿ.ಪಿ ಶೇಣಿ ಅಧ್ಯಕ್ಷತೆ ವಹಿಸಿದ್ದರು.
ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆ ಉಪಾಧ್ಯಕ್ಷ ಕೃಷ್ಣಪ್ಪ ಪೂಜಾರಿ ಬಡಾಜೆ, ಬಿಲ್ಲವ ಸೇವಾ ಸಂಘದ ಪೆರ್ಲ ಘಟಕ ಗೌರವಾಧ್ಯಕ್ಷ ಸುನಿತ್ಕುಮಾರ್ ಡಿ, ಮಾಜಿ ಅಧ್ಯಕ್ಷ ಚನಿಯಪ್ಪ ಪೂಜಾರಿ ಅಲಾರು, ಪೆರ್ಲ ಬಿಲ್ಲವ ಮಹಿಳಾ ಸಮಿತಿ ಅಧ್ಯಕ್ಷೆ ರುಕ್ಮಿಣಿ ಬೆದ್ರಂಪಳ್ಳ ಮುಖ್ಯ ಅಥಿತಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭ ನಿವೃತ್ತ ಶಿಕ್ಷಕ, ಪರಿಸರ-ಕೃಷಿ ತಜ್ಞ ಉಮೇಶ್ ಕೆ. ಪೆರ್ಲ ಹಾಗೂ ತುಳು, ಕನ್ನಡ ಚಲನಚಿತ್ರ ನಟಿ ಕು. ಪ್ರಜ್ವಲಿ ಸುವರ್ಣ ಮುಗು ಇವರನ್ನು ಸನ್ಮಾನಿಸಲಾಯಿತು. ಅಲ್ಲದೆ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿತ್ತಿರುವ ಬಿಲ್ಲವ ಮುಖಂಡರುಗಳಾದ ಸುನೀತ್ ಕುಮಾರ್ ಡಿ, ಬಾಬು ಪೂಜಾರಿ ಕಾನ, ನರಸಿಂಹ ಪೂಜಾರಿ ವಾಣಿನಗರ, ಚನಿಯಪ್ಪ ಪೂಜಾರಿ ಅಲಾರು, ಸುಬ್ಬಣ್ಣ ಪೂಜಾರಿ ಬೆದ್ರಂಪಳ್ಳ, ಸದಾನಂದ ಬೈರಡ್ಕ, ಹರೀಶ ಸಂಟನಡ್ಕ, ಆನಂದ ಮಂಟಪ್ಪಾಡಿ, ರಾಮ್ ಕುಮಾರ್ ಮುಂಡಿತಡ್ಕ, ದಿನೇಶ ಜಿ. ಕೆ. ಬಜಕೂಡ್ಲು, ಸಂಕಪ್ಪ ಪೂಜಾರಿ ಬಾಡೂರು ಪದವು ಅವರನ್ನು ಗೌರವಿಸಲಾಯಿತು. ಈ ಸಂದರ್ಭ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಸಂಘದ ಮಹಿಳಾ ಘಟಕದಿಂಂದ ಭಜನೆ ನಡೆಯಿತು.
ಸ್ವೀಕೃತಿ ಕಾನ ಪ್ರಾರ್ಥನೆ ಹಾಡಿದರು. ರಾಜೇಶ್ವರೀ, ಲಲಿತಾ ಹಾಗೂ ಚಂಪಾವತೀ ಗುರುಸ್ತುತಿ ಮಾಡಿದರು. ಸಂಘದ ಕೋಶಾಧಿಕಾರಿ ಪದ್ಮನಾಭ ಸುವರ್ಣ ಬಜಕೂಡ್ಲು ಸ್ವಾಗತಿಸಿದರು. ಪುರುಷೋತ್ತಮ್ ಪೆರ್ಲ ಕಾರ್ಯಕ್ರಮ ನಿರೂಪಿಸಿದರು. ಅಖಿಲೇಶ್ ಕಾನ ವಂದಿಸಿದರು.






