ಗುವಾಹಟಿ: 'ಈಶಾನ್ಯ ಹಬ್ಬ' ಕಾರ್ಯಕ್ರಮ ಆಯೋಜಿಸುವ ಮುಖ್ಯ ಆಯೋಜಕ ಶ್ಯಾಮ್ಕಾನು ಮಹಂತ, ಮತ್ತವರ ಕಂಪನಿಯು ರಾಜ್ಯದಲ್ಲಿ ಯಾವುದೇ ಕಾರ್ಯಕ್ರಮ ಆಯೋಜಿಸುವುದಿಕ್ಕೆ ನಿಷೇಧ ಹೇರಿ ಅಸ್ಸಾಂ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ.
ನಾಲ್ಕನೇ ಆವೃತ್ತಿಯ 'ಈಶಾನ್ಯ ಹಬ್ಬ'ದಲ್ಲಿ ಭಾಗಿಯಾಗಲು ಖ್ಯಾತ ಗಾಯಕ ಜುಬೀನ್ ಗರ್ಗ್ ಅವರು ಸಿಂಗಪುರಕ್ಕೆ ತೆರಳಿದ್ದರು.
ಈ ವೇಳೆಯೇ ಅವರು ಮೃತಪಟ್ಟಿದ್ದರು.
ಈ ಬಗ್ಗೆ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮ ಅವರು ತಮ್ಮ 'ಎಕ್ಸ್' ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಕಾರ್ಯಕ್ರಮಗಳನ್ನು ಆಯೋಜಿಸಲು ಮಹಂತ ಅವರ ಕಂಪನಿಗೆ ಅಸ್ಸಾಂ ಸರ್ಕಾರ ಹಲವು ಅನುದಾನಗಳನ್ನು ನೀಡುತ್ತಿತ್ತು. ಇದನ್ನು ಕಡಿತ ಮಾಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ.
'ಕೇಂದ್ರ ಸರ್ಕಾರದ ಹಲವು ಸಚಿವಾಲಯಗಳೂ ಈ ಕಂಪನಿ ಆಯೋಜಿಸುವ ಈಶಾನ್ಯ ಹಬ್ಬಕ್ಕೆ ಅನುದಾನ ನೀಡುತ್ತಿವೆ. ಆದ್ದರಿಂದ ಕೇಂದ್ರ ಸರ್ಕಾರವೂ ಅನುದಾನ ನೀಡುವುದನ್ನು ನಿಲ್ಲಿಸಬೇಕು ಎಂದು ಮನವಿ ಮಾಡುತ್ತೇನೆ' ಎಂದೂ ಹೇಳಿದ್ದಾರೆ.




