HEALTH TIPS

ಕೋರ್ಟ್‌ಗಳು ವಸೂಲಾತಿ ಏಜೆಂಟರಲ್ಲ: ಸುಪ್ರೀಂ ಕೋರ್ಟ್‌ ಕಟು ನುಡಿ

 ನವದೆಹಲಿ: ಸಾಲ ಮರುಪಾವತಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಲಯಗಳು ವಸೂಲಾತಿ ಏಜೆಂಟರಂತೆ ವರ್ತಿಸಲಾಗದು ಎಂದು ಸುಪ್ರೀಂ ಕೋರ್ಟ್‌ ಕಟುವಾಗಿ ಹೇಳಿದೆ.

ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್‌ ಮತ್ತು ಎನ್‌.ಕೋಟೀಶ್ವರ ಸಿಂಗ್‌ ಅವರ ನೇತೃತ್ವದ ನ್ಯಾಯಪೀಠವು, ವ್ಯಕ್ತಿಯೊಬ್ಬರು ಬಾಕಿ ಹಣ ಪಾವತಿಸದಿದ್ದರೆ ಅವರಿಗೆ ಬಂಧನದ ಬೆದರಿಕೆ ಒಡ್ಡುವುದು ಸರಿಯಲ್ಲ ಎಂದು ಅಭಿಪ್ರಾಯಪಟ್ಟಿತು. 


ಹಣ ವಸೂಲಿಗಾಗಿ ಸಿವಿಲ್‌ ವ್ಯಾಜ್ಯಗಳನ್ನು ಕ್ರಿಮಿನಲ್‌ ಪ್ರಕರಣಗಳಾಗಿ ಪರಿವರ್ತಿಸುವ ಪ್ರವೃತ್ತಿ ಆರಂಭವಾಗಿದೆ ಎಂದು ಕೋರ್ಟ್‌ ಬೇಸರ ವ್ಯಕ್ತಪಡಿಸಿತು.

ಉತ್ತರ ಪ್ರದೇಶದಲ್ಲಿನ ಕ್ರಿಮಿನಲ್‌ ಆರೋಪ ಪ್ರಕರಣವೊಂದರ ವಿಚಾರಣೆ ವೇಳೆ ನ್ಯಾಯಾಲಯವು ಸೋಮವಾರ ಈ ಅಭಿಪ್ರಾಯ ವ್ಯಕ್ತಪಡಿಸಿತು. ಹಣ ವಸೂಲಾತಿ ವಿವಾದಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ವಿರುದ್ಧ ಅಪಹರಣ ಆರೋಪದಡಿ ಪ್ರಕರಣ ದಾಖಲಿಸಲಾಗಿತ್ತು.

ಉತ್ತರ ಪ್ರದೇಶ ಸರ್ಕಾರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ಅವರು, 'ಇಂಥ ದೂರುಗಳು ಹೆಚ್ಚುತ್ತಿವೆ. ಇಂಥ ಸಂದರ್ಭದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದಿದ್ದರೆ ನ್ಯಾಯಾಲಯವು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತದೆ. ಒಂದು ವೇಳೆ ಪ್ರಕರಣ ದಾಖಲಿಸಿದರೆ, ಪೊಲೀಸರು ಪಕ್ಷಪಾತಿಯಾಗಿದ್ದಾರೆ, ಕಾನೂನು ಪ್ರಕ್ರಿಯೆ ಪಾಲಿಸುತ್ತಿಲ್ಲ ಎಂದು ದೂರಲಾಗುತ್ತದೆ' ಎಂದು ನ್ಯಾಯಾಲಯದ ಗಮನಕ್ಕೆ ತಂದರು.

'ಪೊಲೀಸರ ಸಂದಿಗ್ಧ ಸ್ಥಿತಿ ಅರ್ಥವಾಗುತ್ತದೆ. ಗಂಭೀರ ಅಪರಾಧ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್‌ ದಾಖಲಿಸದಿದ್ದರೆ, ಸುಪ್ರೀಂ ಕೋರ್ಟ್‌ 2013ರಲ್ಲಿ ಲಲಿತ ಕುಮಾರ್‌ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಅನುಸರಿಸದ ಕಾರಣ ಪೊಲೀಸರು ಕ್ರಮ ಎದುರಿಸಬೇಕಾಗುತ್ತದೆ' ಎಂದು ನ್ಯಾ.ಸೂರ್ಯ ಕಾಂತ್‌ ಹೇಳಿದರು.

ಇಂಥ ಸಂದರ್ಭದಲ್ಲಿ, ಪೊಲೀಸರು ವ್ಯಕ್ತಿಯೊಬ್ಬರ ಬಂಧನಕ್ಕೂ ಮೊದಲು ಇದೊಂದು ಸಿವಿಲ್‌ ಪ್ರಕರಣವೇ ಅಥವಾ ಕ್ರಿಮಿನಲ್‌ ಪ್ರಕರಣವೇ ಎಂಬುದನ್ನು ಸ್ವಯಂವಿವೇಚನೆಯಿಂದ ನಿರ್ಧರಿಸಬೇಕು ಎಂದು ನ್ಯಾಯಪೀಠ ಸಲಹೆ ನೀಡಿತು.

ಕ್ರಿಮಿನಲ್‌ ಕಾನೂನಿನ ದುರ್ಬಳಕೆಯು ನ್ಯಾಯದಾನ ವ್ಯವಸ್ಥೆಗಿರುವ ಗಂಭೀರ ಬೆದರಿಕೆ ಎಂದು ನ್ಯಾಯಪೀಠ ಹೇಳಿತು.

ಈ ನಿಟ್ಟಿನಲ್ಲಿ ರಾಜ್ಯಗಳು ಪ್ರತಿ ಜಿಲ್ಲೆಗೆ ಒಬ್ಬ ನೋಡಲ್‌ ಅಧಿಕಾರಿಯನ್ನು ನೇಮಿಸಬಹುದು. ಅವರು ಯಾವುದೇ ಅಪರಾಧ ಪ್ರಕರಣದ ದೂರು ಬಂದಾಗ ಪೊಲೀಸರೊಂದಿಗೆ ಸಮಾಲೋಚನೆ ನಡೆಸಿ ಅದು ಸಿವಿಲ್‌ ಅಥವಾ ಕ್ರಿಮಿನಲ್‌ ಅಪರಾಧ ಎಂದು ನಿರ್ಧರಿಸಬಹುದು. ನಂತರ ಕಾನೂನು ಪ್ರಕಾರ ಕ್ರಮ ಕೈಗೊಳ್ಳಬಹುದು ಎಂದು ನ್ಯಾಯಪೀಠ ಸಲಹೆ ನೀಡಿತು.

ಕೋರ್ಟ್‌ ಹೇಳಿದ್ದೇನು?

*ಹಣ ವಸೂಲಿಗಾಗಿ ಸಿವಿಲ್‌ ವ್ಯಾಜ್ಯಗಳನ್ನು ಕ್ರಿಮಿನಲ್‌ ಪ್ರಕರಣಗಳಾಗಿ ಪರಿವರ್ತಿಸುವ ಪ್ರವೃತ್ತಿ ಆರಂಭವಾಗಿದೆ

* ಪ್ರಕರಣದ ಸ್ವರೂಪದ ಬಗ್ಗೆ ಪೊಲೀಸರು ಸ್ವಯಂವಿವೇಚನೆಯಿಂದ ನಿರ್ಧರಿಸಬೇಕು

*ಕ್ರಿಮಿನಲ್‌ ಕಾನೂನಿನ ದುರ್ಬಳಕೆಯು ನ್ಯಾಯದಾನ ವ್ಯವಸ್ಥೆಗಿರುವ ಗಂಭೀರ ಬೆದರಿಕೆ

*ಪ್ರತಿ ಜಿಲ್ಲೆಗೆ ಒಬ್ಬ ನೋಡಲ್‌ ಅಧಿಕಾರಿ ನೇಮಕಕ್ಕೆ ಸಲಹೆ

ಸೂರ್ಯ ಕಾಂತ್‌ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿನ್ಯಾಯಾಲಯಗಳು ಹಣ ವಸೂಲಾತಿ ಏಜೆಂಟ್‌ಗಳಲ್ಲ. ಈ ರೀತಿ ನ್ಯಾಯಾಂಗ ವ್ಯವಸ್ಥೆಯ ದುರ್ಬಳಕೆಗೆ ಅವಕಾಶ ನೀಡಲ್ಲ

ಚೆಕ್‌ಬೌನ್ಸ್‌: ಸ್ಥಿತಿಗತಿ ವರದಿ ಕೇಳಿದ 'ಸುಪ್ರೀಂ'

ಚೆಕ್‌ ಬೌನ್ಸ್‌ ಪ್ರಕರಣಗಳ ತ್ವರಿತ ವಿಲೇವಾರಿ ಕೈಗೊಂಡಿರುವ ಕ್ರಮಗಳ ಕುರಿತು ಸ್ಥಿತಿಗತಿ ವರದಿ ಸಲ್ಲಿಸುವಂತೆ ಎಲ್ಲ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆಡಳಿತಗಳಿಗೆ ಸುಪ್ರೀಂ ಕೋರ್ಟ್‌ ಮಂಗಳವಾರ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ವಿಕ್ರಮ್‌ ನಾಥ್‌ ಮತ್ತು ಸಂದೀಪ್‌ ಮೆಹ್ತಾ ಅವರನ್ನು ಒಳಗೊಂಡ ನ್ಯಾಯಪೀಠವು ನೆಗೋಷಿಯಬಲ್‌ ಇನ್ಸ್ಟ್ರುಮೆಂಟ್‌ ಕಾಯ್ದೆ- 1881ರ ಸೆಕ್ಷನ್‌ 138ರ ಅಡಿಯಲ್ಲಿ ದಾಖಲಾಗಿರುವ ಪ್ರಕರಣಗಳ ತ್ವರಿತ ವಿಚಾರಣೆ ಕುರಿತು ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ನೀಡಿತು.

ಆರು ವಾರಗಳ ಒಳಗಾಗಿ ಸ್ಥಿತಿಗತಿ ವರದಿ ನೀಡುವಂತೆ ಕೋರ್ಟ್‌ ಸೂಚಿಸಿತು. ಬಳಿಕ ಅರ್ಜಿ ವಿಚಾರಣೆಯನ್ನು ಆರು ವಾರ ಮುಂದೂಡಿತು. ಚೆಕ್‌ ಬೌನ್ಸ್‌ ಪ್ರಕರಣಗಳ ವಿಚಾರಣೆ ದೊಡ್ಡ ಪ್ರಮಾಣದಲ್ಲಿ ಬಾಕಿ ಉಳಿದಿರುವುದರಿಂದ ಮಹಾರಾಷ್ಟ್ರ ದೆಹಲಿ ಗುಜರಾತ್‌ ಉತ್ತರ ಪ್ರದೇಶ ಮತ್ತು ರಾಜಸ್ಥಾನದಲ್ಲಿ ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಬೇಕು ಎಂದು 2022ರ ಮೇ ತಿಂಗಳಲ್ಲಿ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.‌ 'ಚೆಕ್‌ ಬೌನ್ಸ್‌ ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸೂಚಿಸಿದ್ದ ಪ್ರಾಯೋಗಿಕ ಯೋಜನೆಯ ಅನುಷ್ಠಾನದ ಸ್ಥಿತಿಗತಿ ಅರಿಯಲು ನಾವು ಬಯಸಿದ್ದೇವೆ. ಪ್ರಕರಣಗಳ ವಿಲೇವಾರಿಯಲ್ಲಿನ ಏರಿಕೆ ನ್ಯಾಯಾಲಯಗಳಲ್ಲಿನ ಖಾಲಿ ಹುದ್ದೆಗಳು ಮತ್ತು ನೇಮಕಾತಿಗೆ ಸಂಬಂಧಿಸಿದ ಅಂಕಿಅಂಶಗಳೊಂದಿಗೆ ಸ್ಥಿತಿಗತಿ ವರದಿ ಸಲ್ಲಿಸಬೇಕು' ಎಂದು ನ್ಯಾಯಪೀಠ ನಿರ್ದೇಶನ ನೀಡಿತು. 










ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries