ಮುಳ್ಳೇರಿಯ: ಬೆಂಗಳೂರಿನ ಕರ್ನಾಟಕ ರಾಜ್ಯ ಸ್ಪಂದನ ಸಿರಿ ವೇದಿಕೆಯ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ-2025ರ ಪ್ರಯುಕ್ತ ನಡೆಸಿದ ಕಾಸರಗೋಡು ಜಿಲ್ಲೆಯೂ ಸೇರಿದಂತೆ ಕರ್ನಾಟಕ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ ಕಾಸರಗೋಡಿನ ಸಾಹಿತಿ, ಪತ್ರಕರ್ತ ವಿರಾಜ್ ಅಡೂರು ಅವರು ರಚಿಸಿದ, 'ಗುರುವೆ ಶರಣು' ಕವನವು ಪ್ರಥಮ ಬಹುಮಾನ ಪಡೆದಿದೆ. 'ಶಿಕ್ಷಕ ದಿನಾಚರಣೆಯ ವಿಶೇಷತೆ' ಎಂಬ ವಿಷಯದಲ್ಲಿ ಕವನ ಸ್ಪರ್ಧೆ ನಡೆದಿತ್ತು ಎಂದು ಸಂಯೋಜಕಿ ರಮಾ ಪ್ರಸನ್ನ ತಿಳಿಸಿದ್ದಾರೆ.
ವಿರಾಜ್ ಅಡೂರು ಅವರು ಸಾಹಿತ್ಯ, ವ್ಯಂಗ್ಯಚಿತ್ರ ರಚನೆ, ಅಂಕಣ ಬರಹ, ಪತ್ರಿಕೋದ್ಯಮ, ಶಿಬಿರ ಸಂಘಟನೆ, ಶಿಬಿರ ಸಂಪನ್ಮೂಲ ವ್ಯಕ್ತಿಯಾಗಿ ಖ್ಯಾತರಾಗಿದ್ದಾರೆ. ಇವರು ಚುಟುಕುಟುಕು (ಚುಟುಕು ಸಂಕಲನ), ಬಾನುಲಿಯಿತು (ಆಕಾಶವಾಣಿ ಪ್ರಸಾರಿತ ಕವನಗಳ ಸಂಕಲನ), ನಗಿಸುವ ಚಿತ್ರಗಳು (ವ್ಯಂಗ್ಯಚಿತ್ರ ಸಂಕಲನ), ಗಾದೆ ಗಮ್ಮತ್ತು(ಅಂಕಣ ಬರಹ ಸಂಕಲನ, ನಾಲ್ಕು ಸಂಪುಟಗಳಲ್ಲಿ), ಉಪನಯನ (ಧಾರ್ಮಿಕ ಸಂಕಲನ), ಶಿವಗಿರಿ (ಸಂಪಾದಿತ ಕೃತಿ), ಕಾಂತಾವರ ಕನ್ನಡ ಸಂಘದ, 'ನಾಡಿಗೆ ನಮಸ್ಕಾರ' ಪುಸ್ತಕ ಮಾಲಿಕೆಯಲ್ಲಿ, ಗಡಿನಾಡಿನ ಸಾಹಿತ್ಯ ಶ್ರೀನಿಧಿ- ವಿ ಬಿ ಕುಳಮರ್ವ ಹಾಗೂ ಮಕ್ಕಳ ಸಾಹಿತ್ಯ ಸಂಗಮದ ಜಂಗಮ- ಬಿ ಶ್ರೀನಿವಾಸ ರಾವ್ (ವ್ಯಕ್ತಿ ಪರಿಚಯ) ಕೃತಿಗಳನ್ನು ಬರೆದಿದ್ದಾರೆ. ಇವರಿಗೆ ಕೇರಳ ರಾಜ್ಯ ಮಟ್ಟದ ಮಾಧ್ವ ಬ್ರಾಹ್ಮಣ ಅತ್ಯುತ್ತಮ ಚಿತ್ರ ಕಲಾವಿದ ಪ್ರಶಸ್ತಿ, ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘದಿಂದ ಗಡಿನಾಡ ಚೈತನ್ಯ ಪ್ರಶಸ್ತಿ, ಕೋಟೆಗದ್ದೆ ಸೀತಾರಾಮ ಅಡಿಗ ಸ್ಮಾರಕ ಪಾಶುಪತ ಸಾಹಿತ್ಯ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳು ದೊರೆತಿವೆ. ಉಡುಪಿಯ ಶ್ರೀಕೃಷ್ಣ ಮಠದ ಪರ್ಯಾಯ ಶ್ರೀ ಪುತ್ತಿಗೆ ಮಠ ಹಾಗೂ ಮಂಗಳೂರಿನ ಕಥಾಬಿಂದು ಪ್ರಕಾಶನದ ಆಶ್ರಯದಲ್ಲಿ ನಡೆದ ಭಗವದ್ಗೀತೆಯ ಕುರಿತಾದ ಕವನ ರಚನಾ ಸ್ಪರ್ಧೆಯಲ್ಲಿ ವಿರಾಜ್ ಅಡೂರು ರಚಿಸಿದ ' ಸನಾತನದ ಸಾಗರ ಕವನಕ್ಕೆ ಮೊದಲ ಬಹುಮಾನದ ಜತೆಗೆ ಚೈತನ್ಯಶ್ರೀ ಪುರಸ್ಕಾರ ದೊರೆತಿತ್ತು. ವಿರಾಜ್ ಅಡೂರು ರಚಿಸಿದ ಸುಮಾರು 2000 ವ್ಯಂಗ್ಯಚಿತ್ರಗಳು, 500ರಷ್ಟು ಲೇಖನಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.




-VIRAJ%20ADOOR.jpg)
